ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು
ನಮ್ಮ ದೇಶದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ರಾಜ್ಯಗಳ ಮುಖ್ಯ ಮಂತ್ರಿಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ಇವರ ಭದ್ರತೆಯ ಭಾಗವಾಗಿ ಇವರು ಚಲಿಸುವ ದಾರಿಯಲ್ಲಿ ಸಾರ್ವಜನಿಕರ ವಾಹನಗಳನ್ನು ನಿಲ್ಲಿಸಿ, ಇವರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಇದನ್ನು ಝೀರೊ ಟ್ರಾಫಿಕ್ ಎಂದು ಕರೆಯಲಾಗುತ್ತದೆ. ಇವರ ಭದ್ರತೆಗೆ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗಿರುತ್ತದೆ.

ಗಣ್ಯ ವ್ಯಕ್ತಿಗಳಿಗೆ ನೀಡಲಾಗುವ ಝೀರೊ ಟ್ರಾಫಿಕ್ ನಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳು ಸಹ ಈ ಝೀರೊ ಟ್ರಾಫಿಕ್ ನಿಂದ ತೊಂದರೆಗೀಡಾಗಿದ್ದರು. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ರವರು ಇತ್ತೀಚಿಗೆ ಚೆನ್ನೆನಲ್ಲಿ ತೆರಳುವಾಗ ಝೀರೊ ಟ್ರಾಫಿಕ್ ನಿಂದ ತೊಂದರೆ ಅನುಭವಿಸಿದ್ದರು.

ಖ್ಯಾತ ತಮಿಳು ನಟ ದಿವಂಗತ ಶಿವಾಜಿ ಗಣೇಶನ್ ರವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು. ಈ ಸಮಾರಂಭದಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಇದರಿಂದ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ರವರು ಸುಮಾರು 25 ನಿಮಿಷಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದರು.

ಈ ಘಟನೆಯನ್ನು ಟೀಕಿಸಿದ್ದ ನ್ಯಾಯಮೂರ್ತಿಗಳು ತಮಿಳುನಾಡು ಗೃಹ ಕಾರ್ಯದರ್ಶಿಗೆ ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿದ್ದರು. ವಿಚಾರಣೆಗೆ ಹಾಜರಾಗಿದ್ದ ಗೃಹ ಕಾರ್ಯದರ್ಶಿ ಪ್ರಭಾಕರ್ ರವರು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದರು. ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಳುಹಿಸುವುದಿಲ್ಲವೆಂದು ಭರವಸೆ ನೀಡಿದ್ದರು.

ಈ ಘಟನೆಯ ನಂತರ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅಧಿಕಾರಿಗಳಿಗೆ ಹೊಸ ಸುತ್ತೋಲೆಯನ್ನು ಹೊರಡಿಸಿದರು. ಈ ಸುತ್ತೋಲೆಯ ನಂತರ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರವರ ಬೆಂಗಾವಲು ವಾಹನಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಈ ಹಿಂದೆ ಎಂ ಕೆ ಸ್ಟಾಲಿನ್ ರವರ ಬೆಂಗಾವಲಿನಲ್ಲಿ 12 ವಾಹನಗಳಿದ್ದವು. ಈಗ ಅವುಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಗಿದ್ದು, ಕೇವಲ 6 ವಾಹನಗಳಿವೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ವತಃ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ರವರು ಸಹ ತಮಿಳುನಾಡು ಸರ್ಕಾರದ ನಡೆಯನ್ನು ಶ್ಲಾಘಿಸಿದ್ದಾರೆ. ತಕ್ಷಣ ಕ್ರಮ ಕೈಗೊಂಡಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಡಿಜಿಪಿ ರವರನ್ನು ಅಭಿನಂದಿಸಿದ್ದಾರೆ.

ಜೊತೆಗೆ ಮುಖ್ಯಮಂತ್ರಿಗಳ ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಎಂ ಕೆ ಸ್ಟಾಲಿನ್ ರವರು ತಮಿಳುನಾಡು ಮುಖ್ಯಮಂತ್ರಿಯಾದ ನಂತರ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ ತಕ್ಷಣವೇ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ ಎಂ ಕೆ ಸ್ಟಾಲಿನ್ರವರ ಕ್ರಮಕ್ಕೆ ನೆಟಿಜನ್ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೊಸ ವಾಹನಗಳ ಬೆಲೆಯನ್ನು ಹೆಚ್ಚಿಸುವಂತಹ ಆದೇಶವೊಂದನ್ನು ಹೊರಡಿಸಿತ್ತು. ಈ ಆದೇಶವು ಇಡೀ ಆಟೋ ಮೊಬೈಲ್ ಉದ್ಯಮಕ್ಕೆ ಆಘಾತವನ್ನು ಉಂಟು ಮಾಡಿತ್ತು. ಈಗ ಮದ್ರಾಸ್ ಹೈ ಕೋರ್ಟ್ ಈ ಆದೇಶವನ್ನು ಹಿಂಪಡೆದಿದೆ. ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 1 ರಿಂದ ಮಾರಾಟವಾಗುವ ಎಲ್ಲಾ ಹೊಸ ವಾಹನಗಳಿಗೆ ಬಂಪರ್ ಟು ಬಂಪರ್ ಐದು ವರ್ಷಗಳ ಸಮಗ್ರ ವಿಮಾ ಯೋಜನೆಯನ್ನು ನೀಡುವುದು ಕಡ್ಡಾಯವೆಂದು ಆದೇಶ ಹೊರಡಿಸಿತ್ತು.

ಅಪಘಾತ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಆದೇಶ ನೀಡಿತ್ತು. ಈ ಆದೇಶದಿಂದ ಹೊಸ ವಾಹನಗಳ ಬೆಲೆ ಹಲವು ಪಟ್ಟು ಹೆಚ್ಚಾಗುವ ಪರಿಸ್ಥಿತಿ ಉದ್ಭವವಾಗಿತ್ತು. ಮದ್ರಾಸ್ ಹೈಕೋರ್ಟ್'ನ ಈ ಆದೇಶವು ಭಾರತೀಯ ಆಟೋ ಮೊಬೈಲ್ ಉದ್ಯಮವನ್ನೇ ತಲ್ಲಣಗೊಳಿಸಿತು ಎಂದು ಹೇಳಬಹುದು. ಹೈಕೋರ್ಟ್ನ ಈ ಆದೇಶವು ಬಜೆಟ್ ವಾಹನ ಖರೀದಿಸುವ ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಈಗ ಮದ್ರಾಸ್ ಹೈಕೋರ್ಟ್ ಬಂಪರ್ ಟು ಬಂಪರ್ ವಿಮಾ ಯೋಜನೆಗೆ ಸಂಬಂಧಿಸಿದಂತೆ ತಾನು ನೀಡಿದ್ದ ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ.

ಇದರಿಂದ ಆಟೋ ಮೊಬೈಲ್ ಉದ್ಯಮ ಹಾಗೂ ಬಜೆಟ್ ವಾಹನ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವಾಹನಗಳ ದೀರ್ಘಾವಧಿ ವಿಮಾ ಯೋಜನೆ ಭಾರತಕ್ಕೆ ಹೊಸತಲ್ಲ. ಈ ಯೋಜನೆಯನ್ನು ಈ ಹಿಂದೆಯೇ ಜಾರಿಗೊಳಿಸಲಾಗಿದೆ. ಇದರಿಂದ ವಾಹನಗಳ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ಬೆಲೆ ನಿಯಂತ್ರಣ ಪ್ರಾಧಿಕಾರಗಳು ತಮ್ಮ ಯೋಜನೆಯನ್ನು ಮರು ಪರಿಶೀಲಿಸಿದ್ದವು.

ಈ ಪ್ರಾಧಿಕಾರಗಳು ವಿಮಾ ಕಂಪನಿಗಳ ಯೋಜನೆಯನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿವೆ. ಈ ಪರಿಸ್ಥಿತಿಯಲ್ಲಿ ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ಯೋಜನೆಯನ್ನು ಪರಿಷ್ಕರಿಸಲು ಆದೇಶಿಸಿತ್ತು. ಈಗ ತನ್ನ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಿದೆ. ವಾಹನ ಸವಾರರ ಅನುಕೂಲಕ್ಕಾಗಿ ಹೈ ಕೋರ್ಟ್ ಸಮಗ್ರ ವಿಮಾ ಯೋಜನೆಯನ್ನು ಕಡ್ಡಾಯಗೊಳಿಸಿತ್ತು. ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮದ್ರಾಸ್ ಹೈ ಕೋರ್ಟ್ ಈ ಆದೇಶವನ್ನು ನೀಡಿತ್ತು. ಈ ಆದೇಶವನ್ನು ಅನುಷ್ಠಾನಗೊಳಿಸಲು ಯಾವುದೇ ಅನುಕೂಲಕರ ಸನ್ನಿವೇಶಗಳಿಲ್ಲ ಎಂದು ತಿಳಿಸಿರುವ ನ್ಯಾಯಾಲಯವು ತನ್ನ ಆದೇಶವನ್ನು ಹಿಂಪಡೆದಿದೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications