ಬಂಪರ್ ಟು ಬಂಪರ್ ವಿಮಾ ಯೋಜನೆಯ ಆದೇಶವನ್ನು ಹಿಂಪಡೆದ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೊಸ ವಾಹನಗಳ ಬೆಲೆಯನ್ನು ಹೆಚ್ಚಿಸುವಂತಹ ಆದೇಶವೊಂದನ್ನು ಹೊರಡಿಸಿತ್ತು. ಈ ಆದೇಶವು ಇಡೀ ಆಟೋ ಮೊಬೈಲ್ ಉದ್ಯಮಕ್ಕೆ ಆಘಾತವನ್ನು ಉಂಟು ಮಾಡಿತ್ತು. ಈಗ ಮದ್ರಾಸ್ ಹೈ ಕೋರ್ಟ್ ಈ ಆದೇಶವನ್ನು ಹಿಂಪಡೆದಿದೆ. ಈ ಲೇಖನದಲ್ಲಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನೋಡೋಣ.

ಮದ್ರಾಸ್ ಹೈಕೋರ್ಟ್ ಸೆಪ್ಟೆಂಬರ್ 1 ರಿಂದ ಮಾರಾಟವಾಗುವ ಎಲ್ಲಾ ಹೊಸ ವಾಹನಗಳಿಗೆ ಬಂಪರ್ ಟು ಬಂಪರ್ ಐದು ವರ್ಷಗಳ ಸಮಗ್ರ ವಿಮಾ ಯೋಜನೆಯನ್ನು ನೀಡುವುದು ಕಡ್ಡಾಯವೆಂದು ಆದೇಶ ಹೊರಡಿಸಿತ್ತು. ಅಪಘಾತ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಆದೇಶ ನೀಡಿತ್ತು. ಈ ಆದೇಶದಿಂದ ಹೊಸ ವಾಹನಗಳ ಬೆಲೆ ಹಲವು ಪಟ್ಟು ಹೆಚ್ಚಾಗುವ ಪರಿಸ್ಥಿತಿ ಉದ್ಭವವಾಗಿತ್ತು.

ಮದ್ರಾಸ್ ಹೈಕೋರ್ಟ್'ನ ಈ ಆದೇಶವು ಭಾರತೀಯ ಆಟೋ ಮೊಬೈಲ್ ಉದ್ಯಮವನ್ನೇ ತಲ್ಲಣಗೊಳಿಸಿತು ಎಂದು ಹೇಳಬಹುದು. ಹೈಕೋರ್ಟ್ನ ಈ ಆದೇಶವು ಬಜೆಟ್ ವಾಹನ ಖರೀದಿಸುವ ಗ್ರಾಹಕರ ಉತ್ಸಾಹಕ್ಕೆ ತಣ್ಣೀರೆರಚಿತ್ತು. ಈಗ ಮದ್ರಾಸ್ ಹೈಕೋರ್ಟ್ ಬಂಪರ್ ಟು ಬಂಪರ್ ವಿಮಾ ಯೋಜನೆಗೆ ಸಂಬಂಧಿಸಿದಂತೆ ತಾನು ನೀಡಿದ್ದ ಆದೇಶವನ್ನು ಹಿಂಪಡೆಯುವುದಾಗಿ ಹೇಳಿದೆ.

ಇದರಿಂದ ಆಟೋ ಮೊಬೈಲ್ ಉದ್ಯಮ ಹಾಗೂ ಬಜೆಟ್ ವಾಹನ ಪ್ರಿಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ವಾಹನಗಳ ದೀರ್ಘಾವಧಿ ವಿಮಾ ಯೋಜನೆ ಭಾರತಕ್ಕೆ ಹೊಸತಲ್ಲ. ಈ ಯೋಜನೆಯನ್ನು ಈ ಹಿಂದೆಯೇ ಜಾರಿಗೊಳಿಸಲಾಗಿದೆ. ಇದರಿಂದ ವಾಹನಗಳ ಬೆಲೆ ಹಲವು ಪಟ್ಟು ಹೆಚ್ಚಾಗಿದೆ. ಬೆಲೆ ನಿಯಂತ್ರಣ ಪ್ರಾಧಿಕಾರಗಳು ತಮ್ಮ ಯೋಜನೆಯನ್ನು ಮರು ಪರಿಶೀಲಿಸಿದ್ದವು.

ಈ ಪ್ರಾಧಿಕಾರಗಳು ವಿಮಾ ಕಂಪನಿಗಳ ಯೋಜನೆಯನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿವೆ. ಈ ಪರಿಸ್ಥಿತಿಯಲ್ಲಿ ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ಯೋಜನೆಯನ್ನು ಪರಿಷ್ಕರಿಸಲು ಆದೇಶಿಸಿತ್ತು. ಈಗ ತನ್ನ ಆದೇಶವನ್ನು ಹಿಂಪಡೆಯುವುದಾಗಿ ತಿಳಿಸಿದೆ. ವಾಹನ ಸವಾರರ ಅನುಕೂಲಕ್ಕಾಗಿ ಹೈ ಕೋರ್ಟ್ ಸಮಗ್ರ ವಿಮಾ ಯೋಜನೆಯನ್ನು ಕಡ್ಡಾಯಗೊಳಿಸಿತ್ತು.

ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮದ್ರಾಸ್ ಹೈ ಕೋರ್ಟ್ ಈ ಆದೇಶವನ್ನು ನೀಡಿತ್ತು. ಈ ಆದೇಶವನ್ನು ಅನುಷ್ಠಾನಗೊಳಿಸಲು ಯಾವುದೇ ಅನುಕೂಲಕರ ಸನ್ನಿವೇಶಗಳಿಲ್ಲ ಎಂದು ತಿಳಿಸಿರುವ ನ್ಯಾಯಾಲಯವು ತನ್ನ ಆದೇಶವನ್ನು ಹಿಂಪಡೆದಿದೆ. ದೀರ್ಘಾವಧಿ ವಿಮೆಯ ಕುರಿತು ಹೈಕೋರ್ಟ್ನ ಈ ಹಿಂದೆ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಇಲಾಖಾ ಅಧಿಕಾರಿಗಳು ಆದೇಶವನ್ನು ಜಾರಿಗೊಳಿಸುವಲ್ಲಿ ನಿರತರಾಗಿದ್ದರು.

ಸುಪ್ರೀಂ ಕೋರ್ಟ್ 2018 ರ ಸೆಪ್ಟೆಂಬರ್ ತಿಂಗಳಿನಲ್ಲಿ ದೀರ್ಘಾವಧಿ ತೃತೀಯ ವಿಮಾ ಯೋಜನೆಯನ್ನು ಜಾರಿಗೊಳಿಸಿತ್ತು ಎಂಬುದು ಗಮನಾರ್ಹ. ಮದ್ರಾಸ್ ಹೈಕೋರ್ಟ್ ಆದೇಶದಿಂದ ಹೊಸ ವಾಹನಗಳ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ನಿರೀಕ್ಷೆಗಳಿದ್ದವು. ವಾಹನಗಳ ಬೆಲೆಗಳು 8% ನಿಂದ 10% ವರೆಗೂ ಏರಿಕೆಯಾಗುವ ಸಾಧ್ಯತೆಗಳಿದ್ದವು.

ಬೈಕ್ ಹಾಗೂ ಸ್ಕೂಟರ್ ಗಳ ಬೆಲೆ ರೂ. 6,000 ಗಳವರೆಗೆ, Maruti Suzuki Alto, Renault Kwid ನಂತಹ ಎಂಟ್ರಿ ಲೆವೆಲ್ ಕಾರುಗಳ ಬೆಲೆ ರೂ. 50,000 ಗಳವರೆಗೆ ಹೆಚ್ಚಾಗುವ ಸಾಧ್ಯತೆಗಳಿದ್ದವು. Hyundai Creta ದಂತಹ ಟಾಪ್ ಎಂಡ್ ಎಸ್ಯುವಿಗಳ ಬೆಲೆ ರೂ. 2 ಲಕ್ಷಗಳವರೆಗೆ ಏರಿಕೆಯಾಗಲಿದೆ ಎಂದು ಭಾರತೀಯ ಆಟೋ ಮೊಬೈಲ್ ಒಕ್ಕೂಟ ಹೇಳಿತ್ತು.

ವಾಹನಗಳ ಬೆಲೆ ಏರಿಕೆಯು ವಾಹನ ಸವಾರರಿಗೆ ಹೊರೆಯಾಗುವುದನ್ನು ಮನಗಂಡ ನ್ಯಾಯಾಧೀಶರಾದ ಎಸ್. ಜೆ. ವೈದ್ಯನಾಥನ್ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಈಗಾಗಲೇ ವಾಹನ ತಯಾರಕ ಕಂಪನಿಗಳು ವಿವಿಧ ಕಾರಣಗಳಿಗಾಗಿ ಹೊಸ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ವಾಹನ ತಯಾರಕ ಕಂಪನಿಗಳು ನಿರಂತರವಾಗಿ ವಾಹನಗಳ ಬೆಲೆಯನ್ನು ಏರಿಕೆ ಮಾಡುತ್ತಿವೆ.

ಈ ಪರಿಸ್ಥಿತಿಯಲ್ಲಿ ದೀರ್ಘಾವಧಿ ವಿಮಾ ಯೋಜನೆಗಳ ಕಾರಣಕ್ಕೆ ಹೊಸ ವಾಹನಗಳ ಬೆಲೆ ಮತ್ತಷ್ಟು ಹೆಚ್ಚಾದರೆ ವಾಹನಗಳ ಮಾರಾಟದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂಬ ಭೀತಿ ಆಟೋ ಮೊಬೈಲ್ ಉದ್ಯಮವನ್ನು ಆವರಿಸಿತ್ತು. ಆಟೋ ಮೊಬೈಲ್ ಉದ್ಯಮವು ಭಾರತದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತದೆ. ಈ ಕಾರಣಕ್ಕೆ ಆರ್ಥಿಕ ತಜ್ಞರು ಸಹ ಹೈಕೋರ್ಟ್ ಆದೇಶದ ಬಗ್ಗೆ ಆತಂಕಗೊಂಡಿದ್ದರು. ಈಗ ಮದ್ರಾಸ್ ಹೈಕೋರ್ಟ್ ಆದೇಶವನ್ನು ಹಿಂಪಡೆದಿರುವುದರಿಂದ ಅವರೆಲ್ಲಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಕಾರಣಕ್ಕೆ ಹೊಸದಾಗಿ ಬಿಡುಗಡೆಯಾಗುವ ಕಾರುಗಳಲ್ಲಿ ಕಡ್ಡಾಯ ಏರ್ ಬ್ಯಾಗ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ ಗಳನ್ನು ನೀಡುವಂತೆ ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ. ವಾಹನ ತಯಾರಕ ಕಂಪನಿಗಳು ಈ ಫೀಚರ್ ಗಳನ್ನು ನೀಡುವುದರಿಂದ ಸಹಜವಾಗಿಯೇ ವಾಹನಗಳ ಬೆಲೆ ಹೆಚ್ಚಾಗುತ್ತದೆ. ಇದರ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ವಾಹನಗಳಿಗೆ ಥರ್ಡ್ ಪಾರ್ಟಿ ವಿಮೆಯನ್ನು ಕಡ್ಡಾಯಗೊಳಿಸಲಾಗಿದೆ. ಇದೂ ಸಹ ವಾಹನಗಳ ಬೆಲೆ ಹೆಚ್ಚಾಗುವಂತೆ ಮಾಡಿದೆ.
ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications