ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆನಂದ್ ಮಹಿಂದ್ರಾ ಮಹತ್ತರ ನಿರ್ಧಾರ!
ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಹಿಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹಿಂದ್ರಾ ಅವರು ಇತರೆ ಉದ್ಯಮಿಗಳಿಗೆ ಹೋಲಿಸಿಕೊಂಡರೆ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಕ್ರಿಯಾಶೀಲರಾಗಿರುತ್ತಾರೆ. ಇತ್ತೀಚೆಗೆ ಅವರು ವಿದೇಶಗಳಲ್ಲಿರುವ ಭಾರತದ ವೈದ್ಯಕೀಯ ವಿದ್ಯಾರ್ಥಿಗಳ ಕುರಿತು ಟ್ವಿಟ್ಟರ್ ವೇದಿಕೆಯಾಗಿ ಹೊಸ ವಿಚಾರವೊಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.

ಅವರು ಭಾರತೀಯ ವಿದ್ಯಾರ್ಥಿಗಳಿಗಾಗಿ ಭಾರತದಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಯೋಜಿಸುತ್ತಿರವುದಾಗಿ ತಿಳಿಸಿದ್ದಾರೆ. ಅವರ ಈ ಟ್ವೀಟ್ಗೂ ಒಂದು ಕಾರಣವಿದೆ. ಉಕ್ರೇನ್- ರಷ್ಯಾ ಯುದ್ದದಿಂದ ಕಂಗೆಟ್ಟಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಪರಿಸ್ಥಿತಿಯೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು.

ಸುಮಾರು 18,000 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯುದ್ಧದ ಪರಿಣಾಮದಿಂದ ಇವರೆಲ್ಲರು ಸದ್ಯ ಬೀದಿಗೆ ಬೀಳುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಈಗಾಗಲೇ ಹಲವರು ಭಾರತೀಯರು ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಇನ್ನು ಉಳಿದವರನ್ನು ಕರೆಸಿಕೊಳ್ಳಲು ಪ್ರಯತ್ನಗಳು ಮುಂದುವರೆದಿವೆ.

ಪ್ರಸ್ತುತ ಸನ್ನಿವೇಶದಲ್ಲಿ ಭಾರತದ ಕೆಲ ವಿಶ್ಲೇಷಕರ ಪ್ರಕಾರ, ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳ ಕೊರತೆಯೇ ಇಂದಿನ ವಿದ್ಯಾರ್ಥಿಗಳ ಈ ಪರಿಸ್ಥಿತಿಗೆ ಕಾರಣ ಎನ್ನುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳಿರುವ ವಿದ್ಯಾರ್ಥಿಗಳ ಅಂಕಿ ಅಂಶಗಳನ್ನು ಪ್ರಕಟಿಸಿದೆ.

ಅದರ ಪ್ರಕಾರ, 23,000 ಭಾರತೀಯ ವಿದ್ಯಾರ್ಥಿಗಳು ಚೀನಾದಲ್ಲಿ, 18,000 ಉಕ್ರೇನ್, 16,500 ರಷ್ಯಾ ಮತ್ತು 15,000 ವಿದ್ಯಾರ್ಥಿಗಳು ಫಿಲಿಪ್ಪೀನ್ಸ್ನಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾರೆ. ಇದಲ್ಲದೆ ಜಾರ್ಜಿಯಾ, ಕಿರ್ಗಿಸ್ತಾನ್ ಮತ್ತು ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಇದ್ದಾರೆ. ಈ ಅಂಕಿ ಅಂಶಗಳನ್ನು ಕಂಡ ಆನಂದ್ ಮಹಿಂದ್ರಾ ಆಶ್ಚರ್ಯ ಚಕಿತರಾಗಿದ್ದಾರೆ.

ಭಾರತದಲ್ಲಿನ ವೈದ್ಯಕೀಯ ಕಾಲೇಜುಗಳ ಕೊರತೆಯನ್ನು ಮನಗಂಡ ಆನಂದ್ ಮಹಿಂದ್ರಾ ಅವರು, ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಕೊರತೆ ಇರುವುದು ನನಗೆ ತಿಳಿದಿಲ್ಲ. ಮಹಿಂದ್ರಾ ಯುನಿವರ್ಸಿಟಿಯಲ್ಲಿ ಮೆಡಿಕಲ್ ಕಾಲೇಜನ್ನು ತೆರೆಯಲು ಅವಕಾಶವಿದ್ದರೆ ಒಮ್ಮೆ ಪರಿಶೀಲನೆ ಮಾಡೋಣವೇ? ಎಂದು ಟೆಕ್ ಮಹಿಂದ್ರಾ ಸಿಇಓ ಚಂದರ್ ಪ್ರಕಾಶ್ ಗುರ್ನಾನಿ ಅವರಗೆ ಟ್ಯಾಗ್ ಮಾಡಿದ್ದಾರೆ.

ಈ ಮೂಲಕ ಮಹಿಂದ್ರಾ ವಿಶ್ವವಿದ್ಯಾಲಯದಲ್ಲಿ ಶೀಘ್ರದಲ್ಲೇ ಹೊಸ ವೈದ್ಯಕೀಯ ಘಟಕವನ್ನು ಅಭಿವೃದ್ಧಿಪಡಿಸುವ ನಿರೀಕ್ಷೆಯಿದೆ. ಆನಂದ್ ಮಹೀಂದ್ರಾ ಅವರ ಪೋಸ್ಟ್ ಬಗ್ಗೆ ಅನೇಕ ಟ್ವಿಟರ್ ಬಳಕೆದಾರರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇಂತಹ ಮಹತ್ತರ ಕೆಲಸ ತ್ವರಿತವಾಗಿ ಆಗಬೇಕು ಎಂದು ವೈರಲ್ ಮಾಡುತ್ತಿದ್ದಾರೆ.

ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕಡಿಮೆ ಇವೆ ಎಂದು ಕೆಲವರು ದೂರಿದ್ದಾರೆ. ಮತ್ತೊಂದೆಡೆ ನೀಟ್ ಪರೀಕ್ಷೆಯು ಭಾರತೀಯ ವಿದ್ಯಾರ್ಥಿಗಳ ಈ ಪರಿಸ್ಥಿತಿಗೆ ಕಾರಣವಾಗಿದೆ. ಇತ್ತೀಚೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಕೂಡಾ ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿ ನವೀನ್ ಸಾವಿಗೆ ನೀಟ್ ಪರೀಕ್ಷೆಯೇ ಕಾರಣ ಎಂದು ಆರೋಪಿಸಿದ್ದರು.

12ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ನವೀನ್ಗೆ ಭಾರತದಲ್ಲಿ ವೈದ್ಯಕೀಯ ಅಧ್ಯಯನಕ್ಕೆ ಸೀಟು ಸಿಗಲಿಲ್ಲ. ಇದಕ್ಕೆ ನೀಟ್ ಅಡ್ಡಿಯಾಗಿತ್ತು. ಇದು ಭಾರತದ ಬಹುತೇಕ ವಿದ್ಯಾರ್ಥಿಗಳ ವೈದ್ಯಕೀಯ ಕನಸುಗಳನ್ನು ನುಚ್ಚುನೂರು ಮಾಡಿದೆ ಎಂದು ಅವರು ಅತ್ಯಂತ ಗಂಭೀರ ಆರೋಪ ಮಾಡಿದ್ದರು.

ಈ ಪರಿಸ್ಥಿತಿಯಲ್ಲಿ ಅರ್ಹ ಭಾರತೀಯ ವಿದ್ಯಾರ್ಥಿಗಳ ವೈದ್ಯಕೀಯ ಅಧ್ಯಯನವನ್ನು ನನಸು ಮಾಡಲು ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಅಧ್ಯಯನ ಮಾಡುವಂತೆ ಆನಂದ್ ಮಹೀಂದ್ರಾ ಸೂಚಿಸಿದ್ದಾರೆ. ಮಹೀಂದ್ರಾ ವಿಶ್ವವಿದ್ಯಾಲಯವು ಈಗಾಗಲೇ ಬಿಎ, ಬಿಬಿಎ, ಬಿಎ ಎಲ್ಎಲ್ಬಿ, ಎಂಟೆಕ್ ಮತ್ತು ಎಂಜಿನಿಯರಿಂಗ್ ಸೇರಿದಂತೆ ವಿವಿಧ ಪದವಿ ಕೋರ್ಸ್ಗಳನ್ನು ನೀಡುತ್ತಿದೆ.


Click it and Unblock the Notifications