ಪವಿತ್ರ ಗಂಗೆಯಲ್ಲಿ ಯುವಕರು ಮಾಡಿದ್ರು ಎಡವಟ್ಟು: ಮಹೀಂದ್ರಾ Thar ಸೀಜ್.. ಸರಿಯಾಗಿ ಕಟ್ಟಿದ್ರು ದಂಡ
ಉತ್ತರಖಂಡ ರಾಜ್ಯದಲ್ಲಿರುವ ಹರಿದ್ವಾರ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರವಾಗಿದೆ. ಅಲ್ಲಿ ಹರಿಯುವ ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲವು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದ್ದು, ಆಧ್ಯಾತ್ಮಿಕತೆಗೆ ಹೆಸರುವಾಸಿಯಾಗಿರುವುದರಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಆದರೀಗ ಪ್ರವಾಸಿಗರು ನದಿಯಲ್ಲಿ ತಮ್ಮ ಮಹೀಂದ್ರಾ ಥಾರ್ ತೊಳೆಯಲು ಹೋಗಿ, ಸರಿಯಾಗಿ ದಂಡ ತೆತ್ತಿದ್ದಾರೆ.
ಉತ್ತರಾಖಂಡ ಪೊಲೀಸರು, ಗಂಗಾ ನದಿಯಲ್ಲಿ 'ಮಹೀಂದ್ರಾ ಥಾರ್ ಎಸ್ಯುವಿ' ತೊಳೆದ ಆರೋಪದ ಮೇಲೆ 6 ಪ್ರವಾಸಿಗರಿಗೆ ದಂಡ ವಿಧಿಸಿದ್ದಾರೆ ಎಂಬ ವಿವರ ಲಭ್ಯವಾಗಿದೆ. ಹರಿದ್ವಾರದ 'ನೀಲ್ ಧಾರಾ' ಎಂಬ ಪ್ರದೇಶದಲ್ಲಿ ಕಾರನ್ನು ತೊಳೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.

ಆ ಯುವಕರನ್ನು ನದಿಯಿಂದ ಹೊರಬರುವಂತೆ ತಿಳಿಸಿ ಅವರಿಗೆಲ್ಲರಿಗೂ ದಂಡ ವಿಧಿಸಿ, ಕಾರನ್ನು ವಶಪಡಿಸಿಕೊಂಡಿದ್ದಾರೆ. ಅದನ್ನು ಮರಳಿ ಪಡೆಯಬೇಕೆಂದರೆ, ಕೆಲವು ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಬೇಕಾಗಿದೆ. ಧಾರ್ಮಿಕ ಸ್ಥಳದಲ್ಲಿ ಪ್ರವಾಸಿಗರು ಅಥವಾ ಸ್ಥಳೀಯರು ಮಾಡುವ ಹುಚ್ಚಾಟಗಳ ವಿರುದ್ಧ ಕ್ರಮ ಕೈಗೊಳ್ಳಲು ಜುಲೈ 2021ರಿಂದ ಮರ್ಯಾದಾ ಕಾರ್ಯಾಚರಣೆ (Maryada Operation)ಯನ್ನು ಉತ್ತರಾಖಂಡ ಪೊಲೀಸರು ನಡೆಸುತ್ತಿದ್ದಾರೆ.
ಇದರ ಭಾಗವಾಗಿ ಗಂಗಾ ನದಿಯ ಪ್ರತಿ ಘಾಟ್ನಲ್ಲಿ 10 ಪೊಲೀಸರನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಅವರು, ನದಿ ಅಕ್ಕ - ಪಕ್ಕದಲ್ಲಿ ನಡೆಯುವ ಅಪರಾಧ ಚಟುವಟಿಕೆಯನ್ನು ತಡೆಯಲು ಹಾಗೂ ಶುಚಿತ್ವ ಕಾಪಾಡಲು ಸದಾ ಸಿದ್ಧರಾಗಿರುತ್ತಾರೆ. ಈ ಕಾರ್ಯಾಚರಣೆಯಲ್ಲಿಯೇ ಪೊಲೀಸರು, ದೆಹಲಿಯ ಆರು ಪ್ರವಾಸಿಗರಿಗೆ ದಂಡ ವಿಧಿಸಿ, ಕಾರನ್ನು ವಶಪಡಿಸಿಕೊಂಡಿಸಿಕೊಂಡು ಸರಿಯಾಗಿ ಬುದ್ದಿ ಹೇಳಿರುವುದು.
ಕಳೆದ ವಾರ ಇದೇ ವಿಷಯವಾಗಿ ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಮಾತನಾಡಿದ್ದರು. 'ಆಪರೇಷನ್ ಮರ್ಯಾದಾ ಅಡಿ, ವಿವಿಧ ಅಪರಾಧ ಪ್ರಕರಣಳ ಸಂಬಂಧ ಏಪ್ರಿಲ್ 29 ರಿಂದ ಒಟ್ಟು 67 ಜನರನ್ನು ಬಂಧಿಸಲಾಗಿದ್ದು, 2703 ವ್ಯಕ್ತಿಗಳಿಂದ ಸರಿ ಸುಮಾರು ಏಳು ಲಕ್ಷ ರೂಪಾಯಿಗೂ ಅಧಿಕ ದಂಡವನ್ನು ವಿಧಿಸಲಾಗಿದೆ' ಎಂದು ಹೇಳಿದ್ದರು.
ಸದ್ಯ, ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯಗಳ ಹಲವು ಪುಣ್ಯಕ್ಷೇತ್ರಗಳಲ್ಲಿ ನದಿಗಳಲ್ಲಿ ವಾಹನವನ್ನು ತೊಳೆಯುವುದು ಚಟವಾಗಿದೆ. ಸಾರ್ವಜನಿಕರು ಸಹ ನದಿ, ತೊರೆಯಲ್ಲಿ ವಾಹನ ತೊಳೆಯುವ ಪ್ರವೃತ್ತಿಯನ್ನು ಬಿಡಬೇಕು. ಈಗಾಗಲೇ ಹಲವು ಕಾರಣಗಳಿಗೆ ಮಾಲಿನಗೊಂಡಿರುವ ನದಿ ನೀರಿಗೆ ನಾವು ಕೂಡ ಇನ್ನಷ್ಟು ಕೊಡುಗೆ ನೀಡಿದಂತೆ ಆಗಲಿದ್ದು, ಇದರಿಂದಾಗಿ ಕೆಲವೆಡೆ ಜನ-ಜಾನುವಾರುಗಳು ಕಲುಷಿತ ನೀರನ್ನು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಇಲ್ಲಿ ಗಂಗಾ ನದಿಯಲ್ಲಿ ಶುಚಿತ್ವ ಕಾಪಾಡಲು ಉತ್ತರಾಖಂಡ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯನ್ನು ಮೆಚ್ಚಿಕೊಳ್ಳಬೇಕು. ರಾಜ್ಯವು ಸೇರಿದಂತೆ ಇತರೆಡೆಗಳಲ್ಲಿಯು ಅಲ್ಲಿನ ಸ್ಥಳೀಯಾಡಳಿತಗಳು ತಕ್ಷಣ ಎಚ್ಛೆತ್ತುಕೊಂಡರೆ, ಜಲ ಮಾಲಿನ್ಯವಾಗುವುದನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದು. ಜೊತೆಗೆ ಪರಿಸರ ರಕ್ಷಿಸುವುದು ನಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಆಗ ಮಾತ್ರ ಮಾಲಿನ್ಯ ಮುಕ್ತ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ನಿಮ್ಮ ಸ್ನೇಹಿತ ಜೊತೆಗೂ ಶೇರ್ ಮಾಡಿ.


Click it and Unblock the Notifications