ಪ್ರಯಾಣಿಕರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕದ್ದ ಕುಡುಕ: ಮುಂದೇನಾಯ್ತು?
ಮದ್ಯದ ಅಮಲಿನಲ್ಲಿ ನಾವೇನು ಮಾಡುತ್ತೇವೆ ಎಂಬುದು ಬಹುತೇಕ ವ್ಯಸನಿಗಳಿಗೆ ಅರಿವೇ ಇರುವುದಿಲ್ಲ. ಕೆಲವೊಮ್ಮೆ ಕುಡಿದ ಮತ್ತಿನಲ್ಲಿ ಭಾರೀ ಅನಾಹುತವನ್ನೇ ಮಾಡಿ ಬಿಡುತ್ತಾರೆ. ಸದ್ಯ, ಅಂತಹದ್ದೇ ಘಟನೆ ಬೀದರ್ ಜಿಲ್ಲೆಯಲ್ಲಿ ವರದಿಯಾಗಿದೆ. ಸ್ವಲ್ಪದರಲ್ಲಿಯೇ ಪ್ರಯಾಣಿಕರು ದೊಡ್ಡ ಅಪಾಯದಿಂದ ಎಸ್ಕೇಪ್ ಆಗಿದ್ದು, ನಿಟ್ಟುಸಿರು ಬಿಡುವಂತಾಗಿದೆ.
ಔರಾದ್ ಬಸ್ ಸ್ಟ್ಯಾಂಡ್ ಬಳಿ ಸೋಮವಾರ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಯಶಪ್ಪ ಸೂರ್ಯವಂಶಿ ಎಂಬ ವ್ಯಕ್ತಿ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ (KKRTC) ಬಸ್ ಓಡಿಸಿಕೊಂಡು ಹೋಗಿ, ವಾಹನವೊಂದಕ್ಕೆ ಡಿಕ್ಕಿ ಹೊಡೆದು ಡಿವೈಡರ್ ಮೇಲೆ ಹತ್ತಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಅದೃಷ್ಟವಶಾತ್ ಪ್ರಯಾಣಿಕರೆಲ್ಲ ಗಂಡಾಂತರದಿಂದ ಪಾರಾಗಿದ್ದಾರೆ. ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಸ್ಟ್ಯಾಂಡ್ನಲ್ಲಿ ಬಸ್ ನಿಲ್ಲಿಸಿದ ಡ್ರೈವರ್ ಹಾಗೂ ಕಂಡಕ್ಟರ್ ನಿಲ್ದಾಣ ನಿಯಂತ್ರಕರಲ್ಲಿ ಎಂಟ್ರಿ ಮಾಡಿಕೊಂಡು ಹೋಗಿ, ಬರುವಷ್ಟರಲ್ಲಿ ಕುಡುಕ ಮಹಾಶಯ ಈ ಕೆಲಸ ಮಾಡಿದ್ದಾನೆ. ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುವ ಯಶಪ್ಪ ಸೂರ್ಯವಂಶಿ, ತನ್ನ ಸ್ವಗ್ರಾಮಕ್ಕೆ ತೆರಳಲು ಔರಾದ್ ಬಸ್ ನಿಲ್ದಾಣಕ್ಕೆ ಬಂದು, ಮದ್ಯದ ಅಮಲಿನಲ್ಲಿ ಬಸ್ ತೆಗೆದುಕೊಂಡು ಹೋಗಿ, ಅಪಘಾತ ಮಾಡಿದ್ದಾನೆ. ತಪ್ಪಿಸಿಕೊಂಡು ಹೋಗಲು ಯತ್ನಿಸಿದ ಆತನನ್ನು ಸ್ಥಳೀಯರ ಸಹಾಯದಿಂದ ಪೊಲೀಸರು ಹಿಡಿದಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ಸುಮಾರು ಹೊತ್ತು ಬಸ್ ಸ್ಟಾಂಡ್ ನಲ್ಲಿ ಕಾದರೂ ಬಸ್ ಬರಲಿಲ್ಲ. ಅದಕ್ಕಾಗಿ ಈ ಕೆಲಸ ಮಾಡಿರುವುದಾಗಿ ಹೇಳಿದ್ದಾನೆ ಎಂಬ ವಿಚಾರ ಗೊತ್ತಾಗಿದೆಯಂತೆ. ಇದಕ್ಕೂ ಮೊದಲು, ಪಾನಮತ್ತನಾಗಿದ್ದ ಈತ ತನ್ನೂರಿಗೆ ಬಸ್ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದನಂತೆ. ಆದರೆ, ಸಹ ಪ್ರಯಾಣಿಕರು, ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಇದೇನೂ ಹೊಸ ಘಟನೆಯಲ್ಲ. ಈ ಹಿಂದೆಯೂ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ಇಂತಹದ್ದೇ ಪ್ರಕರಣ ಫೆಬ್ರವರಿಯಲ್ಲಿ ವರದಿಯಾಗಿತ್ತು. ಸ್ಟ್ಯಾಂಡ್ನಲ್ಲಿ ರಾತ್ರಿ ಹಾಲ್ಟ್ ಮಾಡಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ (ಕೆಕೆಆರ್ಟಿಸಿ) ಬಸ್ ಅನ್ನು ಕಳ್ಳರು ಕದ್ದಿದ್ದರು. ಸುಮಾರು 80 ಕಿಲೋಮೀಟರ್ ದೂರದವರೆಗೆ ಓಡಿಸಿ, ತೆಲಂಗಾಣದ ತಾಂಡೂರು ಸಮೀಪ, ಡೀಸೆಲ್ ಖಾಲಿಯಾದ ಮೇಲೆ ಬಿಟ್ಟು ಹೋಗಿದ್ದರು.
ತುಮಕೂರಿನ ಗುಬ್ಬಿಯಲ್ಲಿಯೂ 2021ರ ಅಕ್ಟೋಬರ್ ನಲ್ಲಿ ಈ ರೀತಿಯ ಘಟನೆ ನಡೆದಿತ್ತು. ಅಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಆರ್ಟಿಸಿ ಬಸ್ ಅನ್ನು ಕಳ್ಳತನ ಮಾಡಿದ ಖದೀಮರು, ಡಿಸೇಲ್ ಮುಗಿಯುವ ತನಕ ಓಡಿಸಿ, ಜನ್ನನೇಹಳ್ಳಿ ಹತ್ತಿರ ನಿಲ್ಲಿಸಿ, ಎಸ್ಕೇಪ್ ಆಗಿದ್ದರು. ಈ ಸಂಬಂಧ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿರುವುದು ವರದಿಯಾಗಿತ್ತು.
ಇನ್ನು, ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷದಿಂದ ಈ ರೀತಿಯ ಘಟನೆ ಮತ್ತೆ ಮತ್ತೆ ವರದಿಯಾಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಎಂಟ್ರಿ ಮಾಡಿಕೊಂಡು ಬರಲು ಚಾಲಕ ನಿರ್ವಾಹಕ ಇಬ್ಬರು ಹೋಗಬೇಕೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಕೆಲಸ ಮಾಡಿದವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಏನೇ ಆಗಲಿ ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತ ತಪ್ಪಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications