Vande Bharat: ವಂದೇ ಭಾರತ್ನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವ್ಯಕ್ತಿ.. ರೂ.6000 ಕಳೆದುಕೊಂಡರು, ಏನಾಯ್ತು?
ಭೋಪಾಲ್ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 6000 ರೂಪಾಯಿ ಕಳೆದುಕೊಂಡಿದ್ದಾರೆ. ಸದ್ಯ, ಆ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆತ ಮಾಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್, ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ, ವೇಗವಾಗಿ ಚಲಿಸುವ ಮೂಲಕ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರೈಲು ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತದೆ. ಆದರೆ, ಸುರಕ್ಷತೆ ಸಲುವಾಗಿ ವೇಗವನ್ನು 160 ಕಿಮೀ.ಗೆ ಸೀಮಿತಗೊಳಿಸಲಾಗಿದೆ. ವಂದೇ ಭಾರತ್ ರೈಲಿಗೆ ಪ್ರತೇಕ ಎಂಜಿನ್ ಇಲ್ಲ.

ಪ್ರಯಾಣಿಕರ ಅನುಕೂಲಕ್ಕಾಗಿ ವೈಫೈ ಸೌಲಭ್ಯವಿದ್ದು, ಸ್ವಯಂ ಚಾಲಿತ ಬಾಗಿಲು, ಜೈವಿಕ ಶೌಚಾಲಯವಿದೆ. ಹವಾ ನಿಯಂತ್ರಣ ವ್ಯವಸ್ಥೆಯಿರುವ ಈ ರೈಲಿನ ಸೀಟುಗಳು ಅತ್ಯುತ್ತಮವಾಗಿದ್ದು, ಬಹುತೇಕರು, ದೂರದ ನಗರಗಳ ಪ್ರಯಾಣಕ್ಕಾಗಿ ಈ ರೈಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇತ್ತೀಚೆಗೆ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವ್ಯಕ್ತಿ ರೂ.6000 ಕಳೆದುಕೊಂಡಿದ್ದಾರೆ. ನೀವು ಜಾಗರೂಕರಾಗಿರಿ.
ಜುಲೈ 15ರಂದು ಈ ಘಟನೆ ನಡೆದಿದೆ. ಅಬ್ದುಲ್ ಖಾದಿರ್ ಎಂಬ ವ್ಯಕ್ತಿ, ಪತ್ನಿ ಹಾಗೂ 8 ವರ್ಷದ ಮಗನೊಂದಿಗೆ ಹೈದರಾಬಾದ್ನಿಂದ ಮಧ್ಯಪ್ರದೇಶದ ತನ್ನ ಹುಟ್ಟೂರಾದ ಸಿಂಗ್ರೌಲಿಗೆ ತೆರಳುವಾಗ ಈ ಘಟನೆ ನಡೆದಿದೆ. ಹೈದರಾಬಾದ್ನಿಂದ ರೈಲಿನಲ್ಲಿ ಹೊರಟಿದ್ದ ಕುಟುಂಬ, ಸಂಜೆ 5.20ರ ಸುಮಾರಿಗೆ ಭೋಪಾಲ್ ರೈಲು ನಿಲ್ದಾಣ ತಲುಪಿದೆ. ಅಲ್ಲಿ ತಮ್ಮೂರು ಸಿಂಗ್ರೌಲಿ ತೆರಳಲು ಮತ್ತೊಂದು ರೈಲಿಗಾಗಿ ಕಾಯುತ್ತಿದ್ದರು.
ಆ ರೈಲು ಹೊರಡಲು ರಾತ್ರಿ 8.55ಕ್ಕೆ ಸಮಯ ನಿಗದಿಯಾಗಿತ್ತು. ಅಬ್ದುಲ್ ಅವರಿಗೆ ಮೂತ್ರ ವಿಸರ್ಜನೆ ಅರ್ಜೆಂಟ್ ಆಗಿದೆ. ಆದರೆ, ಸಮೀಪದಲ್ಲಿ ಯಾವುದೇ ಶೌಚಾಲಯ ಕಾಣಿಸಲಿಲ್ಲ. ಅದಕ್ಕಾಗಿ ಪಕ್ಕದ ಪ್ಲಾಟ್ಫಾರ್ಮ್ನಲ್ಲಿ ಇಂದೋರ್ಗೆ ಹೋಗಲು ನಿಂತ್ತಿದ್ದ ವಂದೇ ಭಾರತ್ ರೈಲನ್ನು ಹತ್ತಿದ್ದಾರೆ. ರೈಲು ಚಲಿಸಲು ಪ್ರಾರಂಭಿಸಿದ್ದು, ಬಾಗಿಲುಗಳು ಸ್ವಯಂ ಚಾಲಿತವಾಗಿ ಮುಚ್ಚಿಕೊಂಡವು.
ಇದರಿಂದ ಗಾಬರಿಗೊಂಡ ಅಬ್ದುಲ್, ಅದೇ ರೈಲಿನಲ್ಲಿ ಇದ್ದ ಟಿಕೆಟ್ ಕಲೆಕ್ಟರ್ ಹಾಗೂ ಪೊಲೀಸರ ನೆರವು ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅವರು, ರೈಲಿನ ಬಾಗಿಲನ್ನು ಲೋಕೊ ಪೈಲಟ್ ಗಳು ಮಾತ್ರ ತೆರೆಯಬಹುದು ಎಂದು ಹೇಳಿದ್ದಾರೆ. ಕಡೆಗೆ ಮುಂದಿನ ನಿಲ್ದಾಣ ಉಜ್ಜಯಿನಿಯಲ್ಲಿ ಅಬ್ದುಲ್ ಅವರನ್ನು ಇಳಿಸಲಾಯಿತು. ಟಿಕೆಟ್ ಇಲ್ಲದೆ, ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದ್ದಕ್ಕೆ ರೂ.1,020 ದಂಡವನ್ನು ವಿಧಿಸಲಾಗಿದೆ.
ಉಜ್ಜಯಿನಿಯಲ್ಲಿ ರೈಲಿನಿಂದ ಇಳಿದು ಮತ್ತೆ ಭೋಪಾಲ್ಗೆ ಬಸ್ ನಲ್ಲಿ ಹೋಗಲು ಅಬ್ದುಲ್ ಟಿಕೆಟ್ಗಾಗಿ ಹೆಚ್ಚುವರಿ ರೂ.750 ಖರ್ಚು ಮಾಡಬೇಕಾಯಿತು. ಅವರ ಪತ್ನಿಯು ಅಬ್ದುಲ್ನ ಇಲ್ಲದಿರುವುದರಿಂದ ಸಿಂಗ್ರೌಲಿಗೆ ಹೋಗುವ ದಕ್ಷಿಣ್ ಎಕ್ಸ್ಪ್ರೆಸ್ ಹತ್ತದೆ, ಭೋಪಾಲ್ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಭೋಪಾಲ್ನಿಂದ ಸಿಂಗ್ರೌಲಿಗೆ ಟಿಕೆಟ್ ಬಳಕೆ ಮಾಡದಿರುವುದರಿಂದ ರೂ.4,000 ವರೆಗೆ ನಷ್ಟ ಅನುಭವಿಸಿದ್ದಾರೆ.
ಹೀಗೆ, ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವ್ಯಕ್ತಿ ಕನಿಷ್ಠ 6,000 ಕಳೆದುಕೊಂಡಿದ್ದಾರೆ. 'ಹೈಟೆಕ್ ರೈಲುಗಳಲ್ಲಿ ಎಮರ್ಜೆನ್ಸಿ ಸಿಸ್ಟಮ್ ಇಲ್ಲದ ಕಾರಣ, ತನ್ನ ಕುಟುಂಬವು ಮಾನಸಿಕ ಯಾತನೆಯನ್ನು ಅನುಭವಿಸಬೇಕಾಯಿತು' ಎಂದು ಅಬ್ದುಲ್ ಆರೋಪಿಸಿದ್ದಾರೆ. ಈ ಬಗ್ಗೆ ಭೋಪಾಲ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಸುಬೇದಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
'ವಂದೇ ಭಾರತ್ ರೈಲು ಪ್ರಯಾಣವನ್ನು ಆರಂಭಿಸುವ ಮೊದಲು ಘೋಷಣೆ ಮಾಡಿ, ಯಾವ ಕಡೆ ಬಾಗಿಲು ತೆರೆಯುತ್ತದೆ ಹಾಗೂ ಬಾಗಿಲುಗಳನ್ನು ಮುಚ್ಚಲಾಗುತ್ತದೆ ಎಂಬುದರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ. ಅಪಘಾತಗಳನ್ನು ತಡೆಯಲು ಇಂತಹ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಿರಿಯ ರೈಲ್ವೆ ಅಧಿಕಾರಿಗಳ ಆದೇಶದ ಮೇರೆಗೆ ವಂದೇ ಭಾರತ್ ರೈಲನ್ನು ನಿಲ್ಲಿಸಬಹುದು' ಎಂದು ಹೇಳಿದ್ದಾರೆ.


Click it and Unblock the Notifications