ಮಕ್ಕಳಿದ್ದ ಬಸ್ಗೆ ಮಹೀಂದ್ರಾ Scorpio ಡಿಕ್ಕಿ: ಓಡಿಸಿದವರೂ ಯಾರು ಗೊತ್ತಾ? ಸರಿಯಾಗಿಯೇ ಕೇಸ್ ಜಡಿದ ಪೊಲೀಸರು
ಭಾರತದಲ್ಲಿ ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು ಅಪರಾಧವಾಗಿದೆ. ಆದರೆ, ಇದರ ಅರಿವಿದ್ದರೂ ಎಷ್ಟೋ ಮಂದಿ ಪೋಷಕರು ತಮ್ಮ ಸಣ್ಣ ಪ್ರಾಯದ ಮಕ್ಕಳಿಗೆ ಕಾರು ಅಥವಾ ಬೈಕ್ ಓಡಿಸಲು ನೀಡುತ್ತಾರೆ. ಅವರಿಗೆ ಚಾಲನೆಯಲ್ಲಿ ಪ್ರಬುದ್ಧತೆಯಲ್ಲಿ ಕೊರತೆ ಇರುವುದರಿಂದ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸಿ, ಅಪಘಾತಗಳಿಗೆ ಕಾರಣರಾಗುತ್ತಾರೆ.
ಇಂತಹ ಘಟನೆಯೊಂದು ಕೆಲವೇ ದಿನಗಳ ಹಿಂದೆಯಷ್ಟೇ ಗೋವಾದಲ್ಲಿ ವರದಿಯಾಗಿದೆ. ಅಪ್ರಾಪ್ತ ವಯಸ್ಸಿನ ಹುಡುಗನೊಬ್ಬ ತನ್ನ ಸ್ನೇಹಿತರೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿಯನ್ನು ರಸ್ತೆಯಲ್ಲಿ ವೇಗವಾಗಿ ಓಡಿಸಿದ್ದು, ಆ ಬಳಿಕ, ಬಸ್ಗೆ ಡಿಕ್ಕಿ ಹೊಡೆದಿರುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಆದರೂ, ಇವರೆಲ್ಲರೂ ಪವಾಡಸದೃಶವಾಗಿ ಪಾರಾಗಿದ್ದು, ಅಪ್ರಾಪ್ತ ಹುಡುಗ ಹಾಗೂ ಆತನ ತಂದೆ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇಲ್ಲಿನ ಸೇಂಟ್ ಪೀಟರ್ಸ್ ಚಾಪೆಲ್ ಸಮೀಪವಿರುವ ಕಾರಂಜಾಲೆಮ್ನಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಈ ಅಪಘಾತ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ರಸ್ತೆಯಲ್ಲಿ ನಿಧಾನವಾಗಿ ಯು-ಟರ್ನ್ ತೆಗೆದುಕೊಳ್ಳುವಾಗ ಭಯಂಕರ ಸ್ವೀಡ್ ನಲ್ಲಿ ಬಂದ ಈ ಸ್ಕಾರ್ಪಿಯೋ, ಬಸ್ ಮುಂಭಾಗಕ್ಕೆ ತಾಗಿ ಮುಂದೆ ಸಾಗಿದೆ. ಅತಿ ವೇಗದಲ್ಲಿ ಇದ್ದ ಕಾರಣ, ಆ ಹುಡುಗನಿಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ನಂತರ, ರಸ್ತೆಬದಿಯಿದ್ದ ವಿದ್ಯುತ್ ಕಂಬಗಳಿಗೆ ಗುದ್ದಿದ್ದು, ಪರಿಣಾಮ ಅವು ಮುರಿದು ಬಿದ್ದಿವೆ. ಆ ಮೂವರು ಅಪ್ರಾಪ್ತ ಹುಡುಗರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಗೋವಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದ್ದು, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು, ಆ ಅಪ್ರಾಪ್ತ ಹುಡುಗ ಹಾಗೂ ಆತನ ತಂದೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮುಖ್ಯವಾಗಿ ಅತಿವೇಗದ ಚಾಲನೆ ವಾಹನವನ್ನು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದಕ್ಕಾಗಿ ಅಪ್ರಾಪ್ತ ವಯಸ್ಸಿನ ಚಾಲಕ ಮತ್ತು ತಂದೆ ವಿರುದ್ಧ ಮೋಟಾರು ವಾಹನ ಕಾಯ್ದೆ ಸೆಕ್ಷನ್ 3,4,5 ಮತ್ತು 181 ಜೊತೆಗೆ ಐಪಿಸಿ 279 ಮತ್ತು 338 ಸೆಕ್ಷನ್ ಅಡಿ ವಿವಿಧ ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳಲ್ಲಿ ಅಪ್ರಾಪ್ತ ಹುಡುಗರ ಪೋಷಕರಿಗೆ ದೊಡ್ಡ ಮಟ್ಟದಲ್ಲಿ ದಂಡ ವಿಧಿಸಿ, ಕೆಲವೊಮ್ಮೆ ಜೈಲಿಗೂ ಕಳುಹಿಸಬಹುದು. ಇದರ ಬಗ್ಗೆ ತಿಳುವಳಿಕೆ ಇದ್ದರೂ ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡವ ಚಾಳಿಯನ್ನು ಬಿಡುವುದೇ ಇಲ್ಲ.
ಅಪ್ರಾಪ್ತ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸುವುದು ಗಂಭೀರ ಅಪರಾಧವಾಗಿದ್ದು, ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಇಂತಹ ಘಟನೆಗಳಲ್ಲಿ ಯಾವುದೇ ರೀತಿಯಲ್ಲಿ ಅಪಘಾತವಾದರೂ ವಿಮಾ ಸೌಲಭ್ಯ ಸಿಗುವುದಿಲ್ಲ. ಕೆಲವೊಮ್ಮೆ ಪೋಷಕರಿಗೆ ತಿಳಿಯದೇ ಮಕ್ಕಳು ವಾಹನ ತೆಗೆದುಕೊಂಡು ಹೋಗಬಹುದು. ಪೋಷಕರು ಜಾಗ್ರತೆ ವಹಿಸುವುದು ತುಂಬಾ ಮುಖ್ಯ. ಜೊತೆಗೆ ಎಂತಹ ಪರಿಸ್ಥಿತಿಯಲ್ಲಿಯು ಮಕ್ಕಳಿಗೆ ವಾಹನಗಳನ್ನು ಬೇಡಿ.
ರಾಜ್ಯದಲ್ಲಿಯು ಎರಡು ವರ್ಷದ ಹಿಂದೆ, ಇಂತಹದ್ದೇ ಪ್ರಕರಣದಲ್ಲಿ ಹಾಸನದ ಬೇಲೂರಿನ ಜೆಎಂಎಫ್ಸಿ ನ್ಯಾಯಾಲಯ ವಾಹನ ಚಾಲನೆ ಮಾಡಿದ ಚಾಲಕನ ಪೋಷಕರಿಗೆ ರೂ.20 ಸಾವಿರ ದಂಡ ವಿಧಿಸಿ, ಆ ಬಾಲಕನಿಗೆ ಒಂದು ದಿನ ಪೂರ್ತಿ ನ್ಯಾಯಾಲಯದಲ್ಲಿ ನಿಲ್ಲುವ ಶಿಕ್ಷೆಯನ್ನು ನೀಡಿತ್ತು. ಇದಿಷ್ಟೇ ಅಲ್ಲದೆ, ವಾಹನ ಚಾಲನೆ ಮಾಡುವಾಗ ಅಪ್ರಾಪ್ತ ಹುಡುಗರ ಸಿಕ್ಕಿ ಬಿದ್ದರೆ ಅವರ ಪೋಷಕರ ವಾಹನ ಪರವಾನಗಿಯನ್ನು ರದ್ದು ಮಾಡಲಾಗುತ್ತದೆ.
ಗೋವಾದಲ್ಲಿ ನಡೆಸಿರುವ ಈ ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಆ ಹುಡುಗರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದು, ಕೊಂಚದರಲ್ಲಿಯೇ ನಡೆಯಬೇಕಿದ್ದ ದೊಡ್ಡ ಮಟ್ಟದ ದುರ್ಘಟನೆಯೊಂದು ತಪ್ಪಿದೆ. ಇಂತಹ ಪ್ರಕರಣಗಳು ದೇಶದಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಪೋಷಕರು ಸಹ ತಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ವಾಹನಗಳನ್ನು ಓಡಿಸಲು ಕೊಡಬೇಡಿ. ಅವರಿಗೆ ಪ್ರಬುದ್ಧತೆಯ ಕೊರತೆಯಿಂದ ಅಪಘಾತಗಳು ಸಂಭವಿಸಬಹುದು. ಪ್ರಾಪ್ತ ವಯಸ್ಸು ಬರುವವರಿಗೆ ತಾಳ್ಮೆಯಿಂದಿರಲು ಹೇಳಿ.


Click it and Unblock the Notifications