ತನ್ನ ಕ್ಷೇತ್ರದ ಜನರಿಗೆ ಕೇವಲ 1ರೂ.ಗೆ ಪೆಟ್ರೋಲ್ ವಿತರಿಸಿದ ಶಾಸಕ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹೆಚ್ಚಳ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಆರಂಭಗೊಂಡಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಕಳೆದ 18 ದಿನಗಳಿಂದ ಯಾವುದೇ ಇಳಿಕೆಯಿಲ್ಲದೇ ಬೆಲೆ ಏರಿಕೆಯಾಗುತ್ತಲೇ ಇದೆ.

ಇದು ಸಾಮಾನ್ಯ ಜನರಿಗೆ ಹೆಚ್ಚು ಹೊರೆಯಾಗುತ್ತಿದ್ದು ದಿನ ದೂಡುವುದೇ ಕಷ್ಟವಾಗಿಬಿಟ್ಟಿದೆ. ಇನ್ನು ಈ ಬೆಲೆ ಏರಿಕೆಯಿಂದ ನಿತ್ಯವಸರ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು, ಮುಂದಿನ ದಿನಗಳಲ್ಲಿ ಈ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ರೂ. 100 ರೂ. ದಾಟಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ. 111.09, ಡೀಸೆಲ್ ಬೆಲೆ ರೂ. 94.79 ಕ್ಕೆ ಮಾರಾಟವಾಗುತ್ತಿದೆ. ಕಳೆದ 18 ದಿನಗಳಿಂದ ಈ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮಾರಾಟವಾಗುತ್ತಿವೆ. ಈ ನಡುವೆ ದಿಗ್ಬ್ರಮೆ ಗೊಳಿಸುವ ಅಚ್ಚರಿಯೊಂದು ನಡೆದಿದೆ.

ಹೌದು.. ಕೇವಲ ಒಂದು ರೂಪಾಯಿಗೆ ಲೀಟರ್ ಪೆಟ್ರೋಲ್ ಅನ್ನು ಮಾರಾಟ ಮಾಡಿದ ಘಟನೆ ಇದೀಗ ಭಾರೀ ಅಚ್ಚರಿಗೆ ಕಾರಣವಾಗಿದೆ. ಶಾಸಕರೊಬ್ಬರ ಹುಟ್ಟುಹಬ್ಬದ ಅಂಗವಾಗಿ ತನ್ನ ಕ್ಷೇತ್ರದ ಜನತೆಗೆ ಕೇವಲ ಒಂದು ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಲಾಗಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಇದೇ ಏಪ್ರಿಲ್ 25 ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ದಿನವನ್ನು ಬ್ಲಾಕ್ನ ಜನರೊಂದಿಗೆ ಆಚರಿಸಿಕೊಂಡು ಜನರಿಗೆ ಎಂದಿಗೂ ನೆನಪಿರುವಂತಹ ಒಂದು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಪ್ರತಾಪ್ ಅವರು ಕೇವಲ ಒಂದು ರೂಪಾಯಿಗೆ ಲೀಟರ್ ಪೆಟ್ರೋಲ್ ಅನ್ನು ನೀಡಿದ್ದಾರೆ.

ಗೋಟ್ಬಂದರ್ ರಸ್ತೆಯಲ್ಲಿರುವ ಕೈಲಾಶ್ ಪೆಟ್ರೋಲ್ ಬಂಕ್ ಮೂಲಕ ಒಂದು ರೂಪಾಯಿಗೆ ಪೆಟ್ರೋಲ್ ಮಾರಾಟ ಮಾಡಿದರು. ಶಾಸಕ ಪ್ರತಾಪ್ ಅವರ ಈ ಕ್ರಮ ಜನತೆಯನ್ನು ಮಾತ್ರವಲ್ಲದೆ ಸಮಸ್ತ ಭಾರತೀಯರನ್ನು ಅಚ್ಚರಿಗೊಳಿಸಿದೆ. ಸದ್ಯ ತೈಲ ಬೆಲೆಗಳಿಂದ ಕಂಗಾಲಾಗಿರುವ ಜನರಿಗೆ ಲೀಟರ್ ಪೆಟ್ರೋಲ್ ಕೇವಲ 1 ರೂಪಾಯಿಗೆ ಮಾರಾಟವಾಗುತ್ತಿರುವ ವಿಷಯ ತಿಳಿಯುತಿದ್ದಂತೆ ಜನಸಾಗರವೇ ಪೆಟ್ರೋಲ್ ಬಂಕ್ ಮುಂದೆ ನೆರೆದಿತ್ತು.

ಬೆಳಗ್ಗೆ 10 ಗಂಟೆಗೆ ಪೆಟ್ರೋಲ್ ವಿತರಣಾ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಬೆಳಗ್ಗೆಯಿಂದಲೇ ಪೆಟ್ರೋಲ್ ಸ್ಟಾಕ್ನಲ್ಲಿ ದಟ್ಟಣೆ ಹೆಚ್ಚಾಗತೊಡಗಿತು. ಸಾವಿರಾರು ದ್ವಿಚಕ್ರವಾಹನ ಸವಾರರು ಪ್ರಯೋಜನ ಪಡೆದಿದ್ದಾರೆ ಎನ್ನಲಾಗಿದೆ. ಪೆಟ್ರೋಲ್ ಪೂರೈಕೆ ವೇಳೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಈ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿ ವಾಹನಗಳ ನೂಕು ನುಗ್ಗಲು ಹೆಚ್ಚಾಗಿ ಗಲಾಟೆಗಳೂ ಆದವು. ಇದರಿಂದಾಗಿ ಪೆಟ್ರೋಲ್ ನೀಡದೇ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತಂದ ಬಳಿಕ, ಎಲ್ಲರೂ ಸಾಲಾಗಿ ನಿಂತು ಪೆಟ್ರೋಲ್ ಖರೀದಿಸಲು ಮುಂದಾದರು.

ಥಾಣೆಯಲ್ಲಿ ಅನೇಕ ಯುವಕರು ಕೆಲಸಕ್ಕಾಗಿ ವಾಹನಗಳ ಮೂಲಕ ಪುಣೆಗೆ ಹೋಗುವುದರಿಂದ ಪ್ರಸ್ತುತವಿರುವ ಪೆಟ್ರೋಲ್, ಡೀಸೆಲ್ ಬೆಲೆಯು ಹೆಚ್ಚು ಹೊರೆಯಾಗಿದೆ. ಇಂತಹ ಸಂಧರ್ಭದಲ್ಲಿ ಕೇವಲ ಒಂದು ರೂ.ಗೆ ಪೆಟ್ರೋಲ್ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅವರ ಸಂಕಷ್ಟಕ್ಕೆ ಕೊಡುಗೆ ನೀಡಿರುವುದಾಗಿ ಶಾಸಕರು ತಿಳಿಸಿದರು. ಈ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಸ್ತುತ ಥಾಣೆಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ. 120.58, ಡೀಸೆಲ್ ಬೆಲೆ ರೂ. 104.83ಕ್ಕೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ. 105.41, ಲೀಟರ್ ಡೀಸೆಲ್ ಬೆಲೆ ರೂ. 96.67ಕ್ಕೆ ಮಾರಾಟವಾಗುತ್ತಿದೆ. ಈ ತೈಲ ಬೆಲೆಗಳಿಂದಾಗಿ ಪ್ರತಿನಿತ್ಯ ಬಡ-ಮಧ್ಯಮ ವರ್ಗದ ದ್ವಿಚಕ್ರ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಏರಲಾರಂಭಿಸಿದೆ.

ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಬೆಲೆಗೆ ಪೆಟ್ರೋಲ್, ಡೀಸಲ್ ಮಾರಾಟವಾಗಿದೆ. ಈ ಜಿಲ್ಲೆಯಲ್ಲಿ ಪ್ರಸ್ತುತ ಲೀಟರ್ ಪೆಟ್ರೋಲ್ 122 ರೂ. ಹಾಗೂ ಲೀಟರ್ ಡೀಸೆಲ್ 105 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ದಿನಗಳ ಹಿಂದಿನವರೆಗೂ ಈ ಜಿಲ್ಲೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗಿರುವುದು ಗಮನಾರ್ಹ.


Click it and Unblock the Notifications