ಕರೋನಾ ಸೋಂಕಿತ ಮೃತದೇಹವಿದ್ದ ಆ್ಯಂಬುಲೆನ್ಸ್ ಚಾಲನೆ ಮಾಡಿ ಮೆಚ್ಚುಗೆಗೆ ಪಾತ್ರರಾದ ಶಾಸಕ ರೇಣುಕಾಚಾರ್ಯ
ಕೊರೋನಾ ಸೋಂಕು ಇದೆ ಎಂದಾಗ ಸ್ವಂತ ಮಕ್ಕಳು, ಸಂಬಂಧಿಕರು ಕೂಡ ದೂರ ಹೋಗುವ ಕಾಲದಲ್ಲಿ ಜನರ ಹತ್ತಿರ ಹೋಗಿ ಅವರ ಸಮಸ್ಯೆಗಳಿಗೆ ನೆರವಾಗುವ ಮೂಲಕ ಶಾಸಕ ಎಂಪಿ ರೇಣುಕಾಚಾರ್ಯ ಜನರ ಮನಸ್ಸನ್ನು ಗೆದ್ದಿದ್ದಾರೆ. ಸಂಕಷ್ಟ ಸಮಯದಲ್ಲಿ ಇವರು ತಮ್ಮ ಕ್ಷೇತ್ರದ ಜನರಿಗೆ ನೆರವಾಗುತ್ತಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಹಾಗೂ ಸಿಎಂ ಯಡಿಯೂರಪ್ಪರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂಪಿ ರೇಣುಕಾಚಾರ್ಯ ಅವರು ತಮ್ಮ ಕ್ಷೇತ್ರದಲ್ಲಿರುವ ಜನರಿಗಾಗಿ ಮತ್ತು ಕರೋನಾ ಸೋಂಕಿತರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜನರು ಕೂಡ ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ತಾವೇ ಕೊಡುಗೆಯಾಗಿ ನೀಡಿದ್ದ ಆ್ಯಂಬುಲೆನ್ಸ್ ಚಾಲಕರಾಗಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಸಾಗಿಸಿ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ಸಹ ಮಾಡಿದ್ದಾರೆ.

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸವಳಂಗ ಗ್ರಾಮದ ವಿವಾಹಿತ ಯುವಕ ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದರು. ಈ ವಿಷಯವನ್ನು ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ರೇಣುಕಾಚಾರ್ಯ ಅವರು ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿ ಪಿಪಿಇ ಕಿಟ್ ಮತ್ತು ಅಂತ್ಯಸಂಸ್ಕಾರದ ಖರ್ಚಿಗೆ ವೈಯಕ್ತಿಕವಾಗಿ ರೂ.15 ಸಾವಿರ ಧನಸಹಾಯವನ್ನು ಮಾಡಿದ್ದಾರೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಜೊತೆಗೆ ರೇಣುಕಾಚಾರ್ಯ ಅವರು ತಮ್ಮ ತಂದೆ, ತಾಯಿ ಸ್ಮರಣಾರ್ಥ ಉಚಿತವಾಗಿ ನೀಡಿರುವ ಅಂಬುಲೆನ್ಸ್ ನಲ್ಲಿ ತಾವೇ ಸ್ವತಃ ಡ್ರೈವ್ ಮಾಡಿ ಚಿತಾಗಾರಕ್ಕೆ ಸೋಂಕಿತನ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಜೊತೆಗೆ ಮೃತ ಕುಟುಂಬಸ್ಥರಿಗೆ ಧೈರ್ಯ ಹೇಳಿದರು.

ಇಷ್ಟೇ ಅಲ್ಲದೇ ಇತ್ತೀಚೆಗೆ ಮೃತಪಟ್ಟ ಮಹಿಳೆಯ ಮೃತದೇಹ ಹೊತ್ತ ಆ್ಯಂಬುಲೆನ್ಸ್ ಚಾಲನೆ ಮಾಡಿ ಚಿತಾಗಾರಕ್ಕೆ ಕೊಂಡೊಯ್ದು ಇನ್ನೊಂದು ಘಟನೆಯೂ ನಡೆದಿದೆ. ಕಳೆದ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಘಪರಿವಾರದ ಕಾರ್ಯಕರ್ತ ಸಾಸ್ವೇಹಳ್ಳಿ ರಂಗಪ್ಪ ಎಂಬುವವರ ತಾಯಿ ಕರೋನಾ ಸೋಂಕಿನಿಂದ ಮೃತಪಟ್ಟಿದ್ದರು.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಸಾಸ್ವೇಹಳ್ಳಿ ರಂಗಪ್ಪನವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಂತರ ಸೋಂಕಿತೆ ಮಹಿಳೆಯ ಮೃತದೇಹವನ್ನು ಹೊತ್ತ ಆ್ಯಂಬುಲೆನ್ಸ್ ಅನ್ನು ಅವರೇ ಚಾಲನೆ ಮಾಡಿಕೊಂಡು ಚಿತಾಗಾರಕ್ಕೆ ಕೊಂಡೊಯ್ದರು.

ಶಾಸಕ ರೇಣುಕಾಚಾರ್ಯ ತಂದೆ-ತಾಯಿಯ ಸ್ಮರಣಾರ್ಥವಾಗಿ ಉಹೊನ್ನಾಳಿ ತಾಲೂಕು ಆಸ್ಪತ್ರೆಗೆ ನಾಲ್ಕು ಅಂಬ್ಯುಲೆನ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೇ ಸೋಂಕು ಹರಡುತ್ತಿರುವ ಹಿನ್ನೆಲೆ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡಣೆಯನ್ನು ಮಾಡಿಸಿದ್ದಾರೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಸೋಂಕಿತರಲ್ಲಿರುವ ಕೊರೊನಾ ಭಯ ದೂರ ಮಾಡುವ ಉದ್ದೇಶದಿಂದ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಅವರ ಪತ್ನಿ ಸುಮಾ ಇಬ್ಬರು ಸೋಂಕಿತರ ಜೊತೆ ಸಿನಿಮಾ ಹಾಡಿಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಹೆಜ್ಜೆ ಹಾಕಿದ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.

ಇನ್ನು ರೇಣುಕಾಚಾರ್ಯ ಅವರು ಆಸ್ಪತ್ರೆಯಲ್ಲಿರುವ ಕರೋನಾ ಸೋಂಕಿತರ ಆರೋಗ್ಯ ವಿಚಾರಿಸುವುದು ಹಾಗೂ ಅಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಿಸಿಕೊಡುತ್ತಿದ್ದಾರೆ, ಕಳೆದ ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಶಾಸಕ ರೇಣುಕಾಚಾರ್ಯ ಆವರನ್ನು ಮಾದರಿ ಶಾಸಕ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications