ಕುಡಿದ ಮತ್ತಿನಲ್ಲಿ ಭಾರತೀಯ ಸೇನೆಯ ವಾಹನ ಜಖಂಗೊಳಿಸಿದ ರೂಪದರ್ಶಿ
ಮಧ್ಯ ಪ್ರದೇಶದ ಗ್ವಾಲಿಯರ್ ನಗರವು ಸೆಪ್ಟೆಂಬರ್ 8 ರಂದು ಒಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಈ ಘಟನೆಯಲ್ಲಿ ಮಹಿಳಾ ರೂಪದರ್ಶಿ ಒಬ್ಬಳು ಸಾರ್ವಜನಿಕ ರಸ್ತೆಯಲ್ಲಿ ರಂಪಾಟ ಸೃಷ್ಟಿಸಿದ್ದಳು. ಈ ಘಟನೆಯಲ್ಲಿ ಆಕೆಯಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಭಾರತೀಯ ಸೇನೆಗೆ Maruti Suzuki Gypsy ಕಾರಿಗೆ ಹಾನಿಯನ್ನುಂಟು ಮಾಡಿದ್ದಾಳೆ.

ಇಡೀ ಹೈ ಡ್ರಾಮಾ ನಂತರ ಅಲ್ಲಿನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆಕೆಯನ್ನು ಬಂಧಿಸಿದ್ದಾರೆ. ಆ ಮಹಿಳಾ ರೂಪದರ್ಶಿ ಕುಡಿದ ಮತ್ತಿನಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ್ದಾಳೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 8 ರಂದು ರಾತ್ರಿ 9 ಗಂಟೆ ಸುಮಾರಿಗೆ ಗ್ವಾಲಿಯರ್ನ ಪಾಂಡವ್ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಕುಡಿದು ರಂಪಾಟ ನಡೆಸಿದ ರೂಪದರ್ಶಿ ಹೆಸರು ಕೊಹಿಮಾ ಮೆಹ್ರಾ ಎಂದು ತಿಳಿದು ಬಂದಿದೆ. ಕುಡಿದು ಆಕೆ ಸುಖಾ ಸುಮ್ಮನೆ ಆ ರಸ್ತೆಯಲ್ಲಿ ಸಾಗುತ್ತಿದ್ದ ಹಾದು ಹೋಗುತ್ತಿದ್ದ ಹಲವು ವಾಹನಗಳನ್ನು ತಡೆದು ನಿಲ್ಲಿಸಿದ್ದಾಳೆ. ಜೊತೆಗೆ ಅನಗತ್ಯವಾಗಿ ಆ ವಾಹನಗಳ ಚಾಲಕರು ಹಾಗೂ ಸವಾರರೊಂದಿಗೆ ಜಗಳವಾಡಿದ್ದಾಳೆ. ಆ ವಾಹನಗಳಲ್ಲಿ ಭಾರತೀಯ ಸೇನೆಗೆ ಸೇರಿದ Maruti Suzuki Gypsy ಸಹ ಸೇರಿತ್ತು.

ಆಕೆ ಆ ಜಿಪ್ಸಿಯನ್ನು ನಿಲ್ಲಿಸಿ ಚಾಲಕನನ್ನು ವಿನಾ ಕಾರಣ ನಿಂದಿಸಿದ್ದಾಳೆ. ಜೊತೆಗೆ ವಾಹನದ ಹೆಡ್ಲೈಟ್ ಅನ್ನು ಮುರಿದಿದ್ದಾಳೆ. ಇದನ್ನು ನೋಡಿದ ಜಿಪ್ಸಿ ಚಾಲಕ ವಾಹನದಿಂದ ಇಳಿದು ಆಕೆಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಶಾಂತವಾಗುವ ಬದಲು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದಾಳೆ.

ಈ ಘಟನೆಯು ಜನರನ್ನು ಗುಂಪುಗೂಡುವಂತೆ ಮಾಡಿದೆ. ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ರೂಪದರ್ಶಿ ಅಲ್ಲಿದ್ದ ಜನರನ್ನು ಸಹ ನಿಂದಿಸಿದ್ದಾಳೆ. ಈ ವೇಳೆ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಬಂದು ಆಕೆಯನ್ನು ಹಿಡಿದು ಕೊಂಡಿದ್ದಾರೆ.

ಆಕೆ ಮಹಿಳಾ ಕಾನ್ಸ್ಟೇಬಲ್ ರವರಿಂದ ಬಿಡಿಸಿ ಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಕೆಲವು ಸಮಯದ ನಂತರ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಅತಿಯಾಗಿ ಮದ್ಯ ಸೇವಿಸಿರುವುದು ಕಂಡು ಬಂದಿದೆ.

ಅಬಕಾರಿ ಕಾಯ್ದೆ 34 ರ ಅಡಿಯಲ್ಲಿ ಮದ್ಯದ ಅಮಲಿನಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ರೂಪದರ್ಶಿಗೆ ದಂಡ ವಿಧಿಸಲಾಗಿದೆ. ರೂಪದರ್ಶಿಯ ಇಬ್ಬರು ಸ್ನೇಹಿತರು ಆಕೆಗೆ ಜಾಮೀನು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಮೂಲದ ರೂಪದರ್ಶಿ ಹತ್ತಿರದ ಹೋಟೆಲ್ನಲ್ಲಿ ಪಾರ್ಟಿ ಮಾಡುತ್ತಿದ್ದಳು.

ಪಾರ್ಟಿ ಮಾಡುವ ಸಂದರ್ಭದಲ್ಲಿ ಆಕೆ ಜಗಳವಾಡುತ್ತಾ ರಸ್ತೆಗೆ ಬಂದಿದ್ದಾಳೆ. ಮದ್ಯದ ಅಮಲಿನಲ್ಲಿದ್ದ ಕಾರಣ ರಸ್ತೆಯಲ್ಲಿ ಗದ್ದಲ ಸೃಷ್ಟಿಸಿದ್ದಾಳೆ. ಈ ರೂಪದರ್ಶಿ ಮೊದಲು ತಾನು ದೆಹಲಿಯಿಂದ ಬಂದಿರುವುದಾಗಿ ಹೇಳಿಕೊಂಡಿದ್ದಳು. ನಂತರ ಹರಿಯಾಣದಿಂದ ಬಂದಿರುವುದಾಗಿ ಹೇಳಿದ್ದಾಳೆ. ಆದರೆ ದಂಡದ ರಸೀದಿಯಲ್ಲಿ ರಾಜಸ್ಥಾನದ ವಿಳಾಸವನ್ನು ನೀಡಿದ್ದಾಳೆ.

ಮದ್ಯದ ಅಮಲಿನಲ್ಲಿ ಕಿರಿ ಕಿರಿ ಸೃಷ್ಟಿಸುವುದು ಕುಡಿದ ವ್ಯಕ್ತಿಗೆ ಮಾತ್ರವಲ್ಲದೇ ದಾರಿಹೋಕರಿಗೂ ಕೂಡ ಹಾನಿಕಾರಕವಾಗಿದೆ. ಈ ಇಡೀ ಘಟನೆಯು ಅನಗತ್ಯವಾಗಿ ಜರುಗಿದೆ ಎಂದೇ ಹೇಳಬಹುದು. ಈ ಘಟನೆಯಲ್ಲಿ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿದೆ. ಇದರಲ್ಲಿ ರೂಪದರ್ಶಿ ಹಾಗೂ ಚಾಲಕ ಇಬ್ಬರೂ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿಗೆ ದೇಶದಲ್ಲಿ ಕಾರು ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಪದವಿಧರರೇ ಕಾರುಗಳ್ಳತನ ಪ್ರಕರಣಗಳಲ್ಲಿ ಹೆಚ್ಚು ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ. ಈ ವರ್ಷದ ಜನವರಿ 26 ರಂದು ಹೈದರಾಬಾದ್'ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ Toyota Fortuner ಕಾರನ್ನು ಕಳುವು ಮಾಡಲಾಗಿತ್ತು. ಈ ಕಾರು ಸ್ಯಾಂಡಲ್ ವುಡ್ ನಿರ್ಮಾಪಕ ಮಂಜುನಾಥ್ ರವರಿಗೆ ಸೇರಿದ್ದು.

ಕೆಎ 04 ಎಂಎಕ್ಸ್ 1000 ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರ್ ಅನ್ನು ಕಳುವು ಮಾಡಲಾಗಿತ್ತು. ಈ ಕಾರಿನ ಮಾಲೀಕರು ಜನಪ್ರಿಯ ವ್ಯಕ್ತಿಯಾಗಿರುವುದರಿಂದ ಕಳುವಾದ ಕಾರು ಹಾಗೂ ಕಳುವು ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಲು ಬಂಜಾರಾ ಹಿಲ್ಸ್ ಪೊಲೀಸರು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಕಾರ್ ಅನ್ನು ಕಳುವು ಮಾಡಿದ್ದ ವ್ಯಕ್ತಿಯನ್ನು ಸತ್ಯೇಂದ್ರ ಸಿಂಗ್ ಶೇಖಾವತ್ ಎಂದು ಗುರುತಿಸಲಾಗಿದೆ.
ಆತ ವಿವಿಧ ರಾಜ್ಯಗಳಲ್ಲಿ ಕಾರುಗಳನ್ನು ಕಳುವು ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸತ್ಯೇಂದ್ರ ಸಿಂಗ್ ಶೇಖಾವತ್ ಎಂಬಿಎ ಪದವಿಧರ ಎಂಬುದು ಗಮನಾರ್ಹ. ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ವಿವಿಧ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಹೀಗೆ ಪರಿಶೀಲಿಸಿದ ನಂತರ ಸತ್ಯೇಂದ್ರ ಸಿಂಗ್ ಶೇಖಾವತ್ ಕಾರ್ ಅನ್ನು ಕಳುವು ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತ ಕುಖ್ಯಾತ ಕಾರುಗಳ್ಳ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಹೈದರಾಬಾದ್ನಲ್ಲಿ ವಿವಿಧ ಕಾರುಗಳು ಕಳುವಾದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಬಂಜಾರಾ ಹಿಲ್ಸ್ ಪೊಲೀಸರು ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಸತ್ಯೇಂದ್ರ ಸಿಂಗ್ ಶೇಖಾವತ್ ವಾಟ್ಸಾಪ್ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದಾನೆ ಎಂದು ಹೇಳಲಾಗಿದೆ. ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಆತ ಪೊಲೀಸರಿಗೆ ಸವಾಲು ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ ಪೊಲೀಸರು ಆತನನ್ನು ಬಂಧಿಸಲು ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಗಮನಿಸಿ: ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications