ಪಾನ್ ಶಾಪ್ಗೆ ವ್ಯಾಪಾರವಿಲ್ಲವೆಂದು ಮಾರುತಿ 800 ಕಾರಿನ ಮಾಡಿಫೈ... ಮುಗಿಬಿದ್ದ ಜನ
ಭಾರತವು ಹೆಚ್ಚು ಕ್ರಿಯಾಶೀಲ ವ್ಯಕ್ತಿಗಳಿಂದ ತುಂಬಿರುವ ದೇಶವೆಂದು ಹೇಳಿದರೆ ತಪ್ಪಾಗಲಾರದು. ಪ್ರತಿದಿನ ಹೊಸ ಐಡಿಯಾದಲ್ಲಿ ಮಾಡಿದ ಒಂದಲ್ಲ ಒಂದು ಕೆಲಸಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಬ್ಬ ವ್ಯಕ್ತಿ ತನ್ನ ಬುದ್ದಿವಂತಿಕೆಯಿಂದ ಕಾರನ್ನೇ ಪಾನ್ ಅಂಗಡಿಯಾಗಿ ಬದಲಾಯಿಸಿದ್ದಾನೆ. ಆತನ ಸೂಪರ್ ತಲೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಒಂದು ಕಾಲದಲ್ಲಿ ಮಧ್ಯಮ ವರ್ಗದವರ ಫೆವರೇಟ್ ಕಾರ್ ಆಗಿದ್ದ ಮಾರುತಿ 800ನ ಟಾಪ್ ಅನ್ನು ವ್ಯಾಪಾರಿಯೊಬ್ಬ ವಿಭಜಿಸಿ, ಅಲ್ಲಿ ಸಣ್ಣದೊಂದು ಪಾನ್ ಅಂಗಡಿಯನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಜೀವನವನ್ನು ನಡೆಸಲು ಉತ್ತಮ ದಾರಿಯೊಂದನ್ನು ಹುಡುಕಿಕೊಂಡಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಮೆಚ್ಚಿಕೊಂಡಿದ್ದು, ಇಂತಹ ಕ್ರಿಯಾಶೀಲ ವ್ಯಕ್ತಿಗಳ ಐಡಿಯಾವನ್ನು ವಿದೇಶಿಗರು ಏಕೆ ಅನುಸರಿಸಬಾರದು ಎಂದು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಫೋಟೋ ಜೊತೆಗೆ ಅಂಗಡಿಯ ವಿಡಿಯೋ ಕೂಡ ವೈರಲ್ ಆಗುತ್ತಿದೆ. @ಮನವ್ ಸಿಂಗ್_IND ಹೆಸರಿನ ಬಳಕೆದಾರ ಖಾತೆ ಹೆಸರಿನಲ್ಲಿTwitterನಲ್ಲಿ ಶೇರ್ ಮಾಡಲಾಗಿದ್ದು, ಅದರಲ್ಲಿ ಈ ರೀತಿಯಾಗಿ ಬರೆಯಲಾಗಿದ್ದು, 'ಕಳೆದ ಸಂಜೆ ನಾನು ಈ ಅಂಗಡಿಗೆ ಹೋಗಿ, ಸ್ವೀಟ್ ಪಾನ್ ಸೇವಿಸಿದೆ. ತನ್ನ ದಿನನಿತ್ಯದ ಜೀವನೋಪಾಯಕ್ಕೆ ಹಣ ಸಂಪಾದಿಸಲು, ಅಂಗಡಿ ಮಾಲೀಕ ತನ್ನ ಕ್ರಿಯಾಶೀಲ ಐಡಿಯಾದಿಂದ ಕಾರನೇ ಅಂಗಡಿಯನ್ನಾಗಿ ಮಾಡಿದ್ದಾರೆ. ಆತ ಒಳ್ಳೆಯ ಸ್ವಭಾವವನ್ನು ಹೊಂದಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ಕಾರು, ಆಟೋಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹಲವಾರು ಮಂದಿ ಮಾಡಿಫೈ ಮಾಡಿದ್ದಾರೆ. ಅಷ್ಟೇಏಕೆ ಈ ಹಿಂದೆ ಧರ್ಮಸ್ಥಳದಲ್ಲಿ ಹಳೇಯ ಅಂಬಾಸಿಡರ್ ಕಾರಿನ ಹಿಂಭಾಗದಲ್ಲಿ ರೆಡಿ ಮಾಡಿದ್ದ ಎತ್ತಿನಗಾಡಿಯ ವಿಡಿಯೋ ಭಾರೀ ವೈರಲ್ ಆಗಿತ್ತು. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಉಜರೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕಾರು, ಅಂಬಾಸಿಡರ್ ಕಾರಿನ ಹಿಂಭಾಗವನ್ನು ಉಪಯೋಗ ಮಾಡಿಕೊಂಡು ಮುಂದೆ ಎರಡು ಎತ್ತು ಎಳೆಯುವ ರೀತಿ ವಿನ್ಯಾಸ ಮಾಡಿದ್ದರು. ಇದು ಧರ್ಮಸ್ಥಳಕ್ಕೆ ಹೋದವರನ್ನು ಆಕರ್ಷಿಸುತ್ತಿತ್ತು.
ಭಾರೀ ವೈರಲ್ ಆಗಿದ್ದ ಈ ವಿಡಿಯೋವನ್ನು ದೇಶದ ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿ, 'ನಾನು ಯೋಚಿಸುವುದಿಲ್ಲ @ಎಲಾನ್ ಮಸ್ಕ್ ತಮ್ಮ ಮಾಲೀಕತ್ವದ 'ಟೆಸ್ಲಾ' ಈ ನವೀಕರಿಸಬಹುದಾದ ಇಂಧನ ಕಾರೂಗಳನ್ನು ಕಡಿಮೆ ವೆಚ್ಚವನ್ನು ಹೊಂದಿಸಬಹುದು. ಮೀಥೇನ್ ಅನ್ನು ಪರಿಗಣನೆಗೆ ತೆಗೆದುಕೊಂಡರೆ ಯಾವುದೇ ಹೊರಸೂಸುವಿಕೆ' ಇರುವುದಿಲ್ಲ ಎಂದು ಬರೆದುಕೊಂಡಿದ್ದರು. ಆ ಬಳಿಕ, ಇದನ್ನು ನೆಟ್ಟಿಗರು ಸಹ ಮೆಚ್ಚಿಕೊಂಡು ಈ ಐಡಿಯಾಕ್ಕೆ ಭೇಷ್ ಎಂದಿದ್ದರು.
ಇತಿಹಾಸದ ಪುಟ ಸೇರಿದ 'ಮಾರುತಿ 800'
ಸ್ವಾತಂತ್ರ್ಯ ಬಂದು ಸುಮಾರು 36 ವರ್ಷಗಳ ಬಳಿಕ, ಭಾರತದಲ್ಲಿ ಡಿಸೆಂಬರ್ 14, 1983ರಂದು ದೇಶದ ಸ್ವಂತ ಮತ್ತು ಸಾಮಾನ್ಯ ಜನರ ಪ್ರಸಿದ್ಧ ಕಾರು ಮಾರುತಿ 800 ಜನಿಸಿತು. ಇದು ಇಲ್ಲಿಯವರೆಗೆ ಭಾರತದ ಅತ್ಯಂತ ಯಶಸ್ವಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಬಿಡುಗಡೆಯಾದಾಗ ದೆಹಲಿಯ ಹರ್ಪಾಲ್ ಸಿಂಗ್ ದೇಶದ ಮೊದಲ ಮಾರುತಿ 800 ಗ್ರಾಹಕರಾದರು. ಸ್ವತಃ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಈ ಕಾರಿನ ಕೀಯನ್ನು ಹಸ್ತಾಂತರಿಸಿದ್ದರು. ದೇಶದ ಮೊದಲ ಮಾರುತಿ 800ನ ನೋಂದಣಿ ಸಂಖ್ಯೆ (DIA 6479).
ಆ ಸಮಯದಲ್ಲಿ 70,000 ರೂ. ದರವಿತ್ತು. ಈ ಕಾರು, ಮೊದಲ ಬಾರಿಗೆ ಪರಿಚಯಿಸಿದಾಗ 25.95 kmpl ಮೈಲೇಜ್ ನೀಡುತ್ತಿತ್ತು. ಆದರೂ ಕಾರನ್ನು ಗಂಟೆಗೆ 50 kmph ವೇಗದಲ್ಲಿ ಮಾತ್ರ ಓಡಿಸಬಹುದಾಗಿತ್ತು. ಸದ್ಯ ಯಾವುದೇ ಕಾರು ಖರೀದಿ ಮಾಡಿದರೆ, ಒಂದೆರಡು ತಿಂಗಳಲ್ಲಿ ಡೆಲಿವರಿ ಸಿಗುತ್ತದೆ. ಆದರೆ, 80-90ರ ದಶಕದಲ್ಲಿ ವರ್ಷಗಟ್ಟಲೆ 'ಮಾರುತಿ 800' ಕಾರಿಗೆ ಕಾಯಬೇಕಾಗಿತ್ತು. ಅದರಲ್ಲೂ ಮೊದಮೊದಲು ಲಾಟರಿ ಮೂಲಕ ಗ್ರಾಹಕರ ಹೆಸರನ್ನು ಆಯ್ಕೆ ಮಾಡಲಾಗುತ್ತಿತ್ತು.
ಭಾರತದಲ್ಲಿ ಬರೋಬ್ಬರಿ 27 ಲಕ್ಷ 'ಮಾರುತಿ 800' ಕಾರು ಮಾರಾಟವಾಗಿರುವುದು ದೊಡ್ಡ ದಾಖಲೆಯಾಗಿದೆ. ಆರಂಭದ ವರ್ಷಗಳಲ್ಲಿ 40,000 ಕಾರುಗಳು ಮಾರಾಟವಾಗುತ್ತಿದ್ದವು. ಬಳಿಕ, ಪ್ರತಿ ವರ್ಷ 1 ಲಕ್ಷ ಕಾರ್ ಸೇಲ್ ಆಗುತ್ತಿತ್ತು. ಆದರೆ, ಕಾಲಾನಂತರ ವಿವಿಧ ಕಂಪನಿಗಳ ತೀವ್ರ ಪೈಪೋಟಿ ಜೊತೆಗೆ ಮಾರುತಿ 800 ಜಾಗಕ್ಕೆ ಬಂದ ಮುಂದಿನ ಪೀಳಿಗೆಯ ಮಾರುತಿ ಆಲ್ಟೊ ಕೆ 1, ಸ್ಫಿಪ್ಟ್ ಕಾರುಗಳ ಪ್ರಭಾವದಿಂದ 2014ರಲ್ಲಿ ಮಾರುತಿ 800 ಉತ್ಪಾದನೆ ಸ್ಥಗಿತ ಮಾಡಲಾಯಿತು. ಈ ಮೂಲಕ ಕಾರೊಂದು ಇತಿಹಾಸದ ಪುಟ ಸೇರಿತು.


Click it and Unblock the Notifications