ಮಳೆ ನೀರಿನಲ್ಲಿ ಸಿಲುಕಿದ ಸಂಸದರ ಇನೋವಾ ಕ್ರಿಸ್ಟಾ ಕಾರು
ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇತ್ತೀಚಿಗೆ ಮುಂಬೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು.

ಇದರಿಂದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ಮಳೆ ನೀರಿನಲ್ಲಿ ಸಿಲುಕಿದ್ದವು. ಈಗ ಸಂಸತ್ ಸದಸ್ಯರೊಬ್ಬರ ಕಾರು, ಮಳೆ ನೀರು ತುಂಬಿದ ರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಗ್ಗೆ ವರದಿಯಾಗಿದೆ. ದೇವಿ ಮಧ್ಯಪ್ರದೇಶದಲ್ಲಿರುವ ಅತ್ಯಂತ ಚಿಕ್ಕ ಗ್ರಾಮ. ಈ ಗ್ರಾಮದ ಮೂಲಕ ಹಾದು ಹೋಗುವಾಗ ಸಂಸದರ ಕಾರು ನೀರಿನಲ್ಲಿ ಸಿಲುಕಿಕೊಂಡಿದೆ.

ಚಿಂದ್ವಾರ ಸಂಸದ ನಕುಲ್ ನಾಥ್'ರವರ ಕಾರು ಮಳೆ ನೀರಿನಲ್ಲಿ ಸಿಲುಕಿತ್ತು. ಈ ಗ್ರಾಮದ ಜನರು ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ಫ್ಲೈಓವರ್ ಬೇಕೆಂದು ಒತ್ತಾಯಿಸುತ್ತಿದ್ದರು. ಆದರೆ ಸಂಸದರಾದ ನಕುಲ್ ನಾಥ್ ಕೇವಲ ಆಶ್ವಾಸನೆ ನೀಡುತ್ತಿದ್ದರೆ ಹೊರತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಈಗ ಸಂಸದ ನಕುಲ್ ನಾಥ್'ರವರು ಚಲಿಸುತ್ತಿದ್ದ ಟೊಯೊಟಾ ಇನೋವಾ ಕಾರು ಮಳೆ ನೀರು ನಿಂತಿದ್ದ ರಸ್ತೆಯಲ್ಲಿ ಸಿಲುಕಿಕೊಂಡಿದೆ. ನಕುಲ್ ನಾಥ್, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್'ರವರ ಪುತ್ರ.

ಕಮಲ್ ನಾಥ್ ಹಲವು ದಶಕಗಳ ಕಾಲ ಚಿಂದ್ವಾರದ ಸಂಸದರಾಗಿದ್ದರು. ಆದರೂ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಮೂಲಗಳ ಪ್ರಕಾರ ನಕುಲ್ ನಾಥ್ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.

ಬುಧವಾರ ಅವರು ನವದೆಹಲಿಗೆ ತೆರಳುವ ಸಲುವಾಗಿ ನಾಗ್ಪುರಕ್ಕೆ ತೆರಳುತ್ತಿದ್ದರು. ಮುಂಜಾನೆಯಿಂದ ಚಿಂದ್ವಾರ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಕಾರಣ ನಾಗ್ಪುರ-ಚಿಂದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಮಕೋಣ ಗ್ರಾಮದ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ನಕುಲ್ ನಾಥ್ ಅವರ ವಿಮಾನಕ್ಕೆ ತಡವಾಗುತ್ತಿದ್ದ ಕಾರಣ ಅವರು ಇತರ ಕೆಲವು ನಾಯಕರೊಂದಿಗೆ ಬೇರೆ ಮಾರ್ಗದ ಮೂಲಕ ತೆರಳಲು ನಿರ್ಧರಿಸಿದ್ದಾರೆ. ಅವರು ದೇವಿ ಗ್ರಾಮದ ಮೂಲಕ ಹಾದುಹೋಗುವಾಗ ಅವರಿದ್ದ ಇನೋವಾ ಕ್ರಿಸ್ಟಾ ಕಾರು ಮಳೆ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದೆ.

ಅವರ ಭದ್ರತೆಗೆ ನೀಡಲಾಗಿದ್ದ ಪೊಲೀಸ್ ವಾಹನವು ಯಾವುದೇ ತೊಂದರೆಯಿಲ್ಲದೆ ಮಳೆ ನೀರನ್ನು ದಾಟಿ ಮುಂದೆ ಚಲಿಸಿದೆ. ಮಳೆ ನೀರಿನಲ್ಲಿ ಸಿಲುಕಿದ್ದ ಸಂಸದರಿದ್ದ ಇನೋವಾ ಕಾರ್ ಅನ್ನು ಮಹೀಂದ್ರಾ ಬೊಲೆರೋ ಕಾರಿನ ನೆರವಿನಿಂದ ಹೊರ ತರಲಾಯಿತು.

ಈ ಬಗ್ಗೆ ಮಾತನಾಡಿದ ಗ್ರಾಮಸ್ಥರು, ನಮ್ಮ ಮಾತನ್ನು ಯಾರೂ ಕೇಳದ ಕಾರಣ ನಾವು ನಮ್ಮ ಬೇಡಿಕೆಯನ್ನು ನಿಲ್ಲಿಸಿದ್ದೇವೆ. ಸಂಸದರಿಗೆ ಈಗ ನಮ್ಮ ನೋವು ಅರ್ಥವಾಗಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಈ ರೀತಿಯ ಹಲವು ಸನ್ನಿವೇಶಗಳಿವೆ. ರಸ್ತೆ ಬೇಕು, ಸೇತುವೆ ಬೇಕು ಎಂದು ಸ್ಥಳೀಯರು ಒತ್ತಾಯಿಸಿದರೂ, ಪ್ರತಿಭಟನೆ ನಡೆಸಿದರೂ ಸರ್ಕಾರಗಳು ಅವರ ಸಮಸ್ಯೆಯನ್ನು ಪರಿಹರಿಸಲು ಮುಂದಾಗುವುದೇ ಇಲ್ಲ.

ಈ ಹಿಂದೆ ಭಾರತದ ವಿವಿಧೆಡೆ ವಾಹನಗಳು ಪ್ರವಾಹದ ಸಂದರ್ಭದಲ್ಲಿ ರಸ್ತೆಗಳಲ್ಲಿ ಹಾಗೂ ಸೇತುವೆಗಳ ಅಡಿ ಸಿಲುಕಿ ಅನಾಹುತಗಳು ಸಂಭವಿಸಿದ್ದವು. ಸದ್ಯ ಈ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ.
ಚಿತ್ರ ಮೂಲ: ಫ್ರೀ ಪ್ರೆಸ್ ಜರ್ನಲ್


Click it and Unblock the Notifications