Expressway: ಕರ್ನಾಟಕದಲ್ಲಿ 3 ಹೊಸ ಎಕ್ಸ್ಪ್ರೆಸ್ವೇ ಸಿದ್ಧಗೊಳ್ಳುತ್ತಿವೆ.. ಇನ್ನೂ ಊರಿಗೆ ಹೋಗುವುದು ಸುಲಭ!
ದೇಶದ ಅಭಿವೃದ್ಧಿಗೆ ಹೆದ್ದಾರಿಗಳು ಬಹುದೊಡ್ಡ ಪಾತ್ರವಹಿಸುತ್ತಿವೆ. ಕೇಂದ್ರ ಸರ್ಕಾರವು ಕ್ಷಿಪ್ರಗತಿಯಲ್ಲಿ ಎಕ್ಸ್ಪ್ರೆಸ್ವೇಗಳ ಕಾಮಗಾರಿ ನಡೆಸುತ್ತಿದೆ. ಕರ್ನಾಟಕದಲ್ಲಿಯೂ ಹಲವು ಎಕ್ಸ್ಪ್ರೆಸ್ವೇ ಅಭಿವೃದ್ಧಿ ಹಂತದಲ್ಲಿವೆ. ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣ ಕೆಲಸಗಳು ರಾಜ್ಯದಲ್ಲಿ ಬಹುತೇಕ ಮುಕ್ತಾಯಗೊಂಡಿದ್ದರೆ, ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ವೇ ನಿರ್ಮಾಣ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯ ವಿಸ್ತೃತವಾದ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು ಟೆಂಡರ್ ಕರೆಯಲಾಗಿದೆ. ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇ ಕೂಡ ಸಿದ್ದಗೊಳ್ಳುತ್ತಿದ್ದು, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ವೇ (Bengaluru-Mangaluru Expressway): ಶಿಕ್ಷಣ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆ ದೃಷ್ಟಿಯಿಂದ ಈ ಹೆದ್ದಾರಿ ತುಂಬಾ ಮುಖ್ಯವಾಗಿದೆ. ಬೆಂಗಳೂರು-ಮಂಗಳೂರು ಎಕ್ಸ್ಪ್ರೆಸ್ವೇ ಸಂಬಂಧ ಸಾರಿಗೆ ಸಚಿವಾಲಯ ಡಿಪಿಆರ್ ತರಿಸಲು ಟೆಂಡರ್ ಕರೆದಿದ್ದು, ಹಲವು ಕಂಪನಿಗಳು ಕೂಡ ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ.

ಸರಿ ಸುಮಾರು 335 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಇದಾಗಿರಲಿದ್ದು, 4 ರಿಂದ 6 ಪಥಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಹೆದ್ದಾರಿ ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನೂತನ ಎಕ್ಸ್ಪ್ರೆಸ್ವೇ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಅವಧಿಯನ್ನು ಹಲವು ಗಂಟೆಗಳ ಕಾಲ ಕಡಿಮೆಗೊಳಿಸಲಿದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Chennai Expressway): ಈ ಹೆದ್ದಾರಿ ಕಾಮಗಾರಿ ಕರ್ನಾಟಕದಲ್ಲಿ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಹೆಚ್ಚಿನ ಕೆಲಸಗಳು ಬಾಕಿ ಉಳಿದಿವೆ. ನೂತನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ರಾಜ್ಯದಲ್ಲಿ 71 ಕಿಲೋಮೀಟರ್ ಹಾದುಹೋಗಲಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಹೊಸ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ 262 ಕಿ.ಮೀ ಉದ್ದವಿದ್ದು, 4 ಪಥಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 2025ರ ಆಗಸ್ಟ್ ವೇಳೆಗೆ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ. ಈ ಹೆದ್ದಾರಿಯಲ್ಲಿ ವಾಹನಗಳು 120 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲು ಅವಕಾಶ ನೀಡಬಹುದು. ಜೊತೆಗೆ ಬೆಂಗಳೂರಿನಿಂದ ಚೆನ್ನೈಗೆ ಕೇವಲ 2 ಗಂಟೆಗಳಲ್ಲಿ ತಲುಪಬಹುದು ಎಂದು ಕೂಡ ಹೇಳಲಾಗಿದೆ.
ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇ (Surat-Chennai Expressway): ಈ ಹೆದ್ದಾರಿಯೂ ಒಂದಷ್ಟು ಕಿಲೋಮೀಟರ್ಗಳು ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ ರಾಯಚೂರು ಮತ್ತು ಯಾದಗಿರಿಗಳನ್ನು ಸಂಪರ್ಕಿಸುತ್ತದೆ. ಅಫಜಲಪುರ, ಗಾಣಗಾಪುರ, ಜೇವರ್ಗಿ, ಮುಂಡರಗಿ ಅಣಬಿ ಮೂಲಕ ಹಾದುಹೋಗುತ್ತದೆ. ರಾಜ್ಯದೊಟ್ಟಿಗೆ ಗುಜರಾತ್, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೂ ಸಂಪರ್ಕ ಕೊಂಡಿಯಾಗಿದೆ.

ಪ್ರಸ್ತುತ ಗುಜರಾತ್ನ ಸೂರತ್ನಿಂದ ಚೆನ್ನೈಗೆ 1600 ಕಿ.ಮೀ ದೂರವಿದೆ. ಈ ದೂರವನ್ನು ಕ್ರಮಿಸಲು ಬರೋಬ್ಬರಿ ಎರಡು ದಿನ ಬೇಕಾಗುತ್ತದೆ. ಹೊಸ ಎಕ್ಸ್ಪ್ರೆಸ್ವೇ 1270 ಕಿ.ಮೀ ಇದ್ದು, ಕೇವಲ 18 ಗಂಟೆಗಳಲ್ಲಿ ಈ ಅಂತರವನ್ನು ಮುಟ್ಟಬಹುದು. ಸುಮಾರು ರೂ.50,000 ಕೋಟಿ ಅನುದಾನದಲ್ಲಿ ಸಿದ್ದಗೊಳ್ಳುತ್ತಿರುವ ಎಕ್ಸ್ಪ್ರೆಸ್ವೇ ಇದಾಗಿದ್ದು, 6 ಪಥಗಳನ್ನು ಒಳಗೊಂಡಿದೆ.
ಇವುಗಳು ಮಾತ್ರವಲ್ಲದೆ, ಬೆಂಗಳೂರು-ಪುಣೆ ಹಾಗೂ ಬೆಂಗಳೂರು-ಹೈದರಾಬಾದ್ ಎಕ್ಸ್ಪ್ರೆಸ್ವೇಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಕಾರ್ಯಪ್ರವೃತವಾಗಿದೆ. ನೂತನ ಎಕ್ಸ್ಪ್ರೆಸ್ವೇಗಳ ನಿರ್ಮಾಣದಿಂದ ಕರ್ನಾಟಕದ ವಿವಿಧ ಕ್ಷೇತ್ರಗಳು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾಗಲಿದ್ದು, ಹೆಚ್ಚಿನ ಉದೋಗವಕಾಶಗಳು ಸಹ ಸೃಷ್ಟಿಯಾಗಲಿದೆ. ಜೊತೆಗೆ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೂ ವೇಗ ದೊರೆಯಲಿದೆ ಎಂದು ಹೇಳಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications