ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗಬಹುದು.. 50 ಅಮೃತ್ ಭಾರತ್ ರೈಲುಗಳ ಘೋಷಣೆ
ದೇಶದ ಸಾಮಾನ್ಯ ವರ್ಗದ ಜನರು ಕಡಿಮೆ ಖರ್ಚಿನಲ್ಲಿ ದೂರದ ಊರುಗಳಿಗೆ ಪ್ರಯಾಣಿಸಲು ರೈಲ್ವೆ ಇಲಾಖೆಯು ಅಮೃತ್ ಭಾರತ್ ಎಕ್ಸ್ಪ್ರೆಸ್ (Amrit Bharat Express) ರೈಲುಗಳನ್ನು ಪರಿಚಯಿಸಿತ್ತು. ಈ ರೈಲುಗಳಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರವು ಮತ್ತೊಂದು ದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ.
ಡಿ.30ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮಾಲ್ಡಾ-ಬೆಂಗಳೂರು ಮತ್ತು ದೆಹಲಿ-ಅಯೋಧ್ಯೆ-ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ ರೈಲುಗಳನ್ನು ಲೋಕಾರ್ಪಣೆಗೊಳಿಸಿದ್ದರು. ಇವುಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 'ಅಮೃತ್ ಭಾರತ್ ರೈಲುಗಳ ಭಾರೀ ಯಶಸ್ಸಿನ ಬಳಿಕ, 50 ಹೊಸ (ಅಮೃತ್ ಭಾರತ್) ರೈಲುಗಳಿಗೆ ಅನುಮೋದನೆ ನೀಡಲಾಗಿದೆ' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೃತ್ ಭಾರತ್ ಎಕ್ಸ್ಪ್ರೆಸ್ (Amrit Bharat Express) ರೈಲಿನ ವಿಶೇಷತೆಗಳ ಕುರಿತು ಹೇಳುವುದಾದರೆ, ಇದು ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಮುಂಭಾಗ - ಹಿಂಭಾಗ ಎಂಜಿನ್ ಒಳಗೊಂಡಿದ್ದು, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಕೋಚ್ಗಳನ್ನು ಹೊಂದಿದೆ. ಈ ರೈಲಿನಲ್ಲಿ ಹವಾನಿಯಂತ್ರಿತ (ಎಸಿ) ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲುಗಳು ಇರುವುದಿಲ್ಲ.
ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್ಇಡಿ ಲೈಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ. ಫುಡ್ ಟೇಬಲ್, ಮೊಬೈಲ್ ಮತ್ತು ಬಾಟಲ್ ಹೋಲ್ಡರ್, ಸುರಕ್ಷತೆಗಾಗಿ ಸಿಸಿಟಿವಿಯನ್ನು ಹೊಂದಿದೆ. ಈ ಅಮೃತ್ ಭಾರತ್ ರೈಲುಗಳನ್ನು ಹಗಲು - ರಾತ್ರಿ ಸಂದರ್ಭದಲ್ಲಿ ಓಡಾಟ ನಡೆಸಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ. ಒಟ್ಟು 22 ಕೋಚ್ಗಳನ್ನು ಹೊಂದಿರುವ ಈ ರೈಲು, 800 ಕಿಲೋಮೀಟರ್ ಗಳಿಗಿಂತ ಹೆಚ್ಚು ದೂರದ ಮಾರ್ಗಗಳಲ್ಲಿ ಸಂಚಾರಿಸುತ್ತದೆ.

ಈ ಹಿಂದೆ, ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲು ವಂದೇ ಸಾಧಾರಣ್ (Vande Sadharan) ಎಂಬ ಹೆಸರನ್ನು ಹೊಂದಿತ್ತು. ಅಮೃತ್ ಭಾರತ್ ರೈಲುವೊಂದನ್ನು ತಯಾರಿಸಲು ರೈಲ್ವೆ ಇಲಾಖೆ ರೂ.65 ಕೋಟಿ ಖರ್ಚು ಮಾಡುತ್ತಿದೆ ಎಂದು ಎಂದು ವರದಿಯಾಗಿದೆ. ಈ ರೈಲಿನಲ್ಲಿ ಸುಮಾರು 1,834 ಜನರು ಆರಾಮದಾಯವಾಗಿ ಪ್ರಯಾಣಿಸುವ ಮೂಲಕ ನೀರಿಕ್ಷಿತ ಗಮ್ಯ ಸ್ಥಾನವನ್ನು ತಲುಪಬಹುದು.
ಮೊದಲ ಅಮೃತ್ ಭಾರತ್ ಎಕ್ಸ್ಪ್ರೆಸ್ (Amrit Bharat Express) ರೈಲು, ಕಳೆದ ವರ್ಷದ ಅಕ್ಟೋಬರ್ 29ರಂದು ಮುಂಬೈನ ವಾಡಿ ಬಂದರ್ ಯಾರ್ಡ್ಗೆ ಆಗಮಿಸಿತ್ತು. ನವೆಂಬರ್ 8ರಂದು ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಸುಮಾರು 400 ಅಮೃತ್ ಭಾರತ್ ರೈಲುಗಳನ್ನು ಚೆನ್ನೈ ಕೋಚ್ ಇಂಟಿಗ್ರೇಟೆಡ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 50 ಹೊಸ ಅಮೃತ್ ಭಾರತ್ ರೈಲುಗಳ ಘೋಷಣೆ ಮಾಡಿರುವುದು ಪ್ರಯಾಣಿಕರಿಗೆ ಖುಷಿ ನೀಡಿದೆ. ಈ ರೈಲುಗಳು ಕರ್ನಾಟಕವು ಸೇರಿದಂತೆ ದೇಶಾದ್ಯಂತ ಯಾವ ಮಾರ್ಗದಲ್ಲಿ ಸಂಚರಿಸಲಿವೆ ಎಂಬ ಮಾಹಿತಿ ಮುಂಬರುವ ದಿನಗಳಲ್ಲಿ ತಿಳಿಯಲಿದೆ. ರೈಲ್ವೆ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಅಮೃತ್ ಭಾರತ್ ಮಾತ್ರವಲ್ಲದೆ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications