ಇನ್ನೂ ಬೆಂಗಳೂರಿನಿಂದ ಈ ದೊಡ್ಡ ನಗರ ಬಲುಹತ್ತಿರ, 3 ಗಂಟೆ ಅಷ್ಟೇ.. ಹೊಸ ಎಕ್ಸ್ಪ್ರೆಸ್ವೇ ವಿಶೇಷತೆಗಳೇನು?
ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Chennai Expressway) ಕಾಮಗಾರಿ ಭರದಿಂದ ಸಾಗುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ಹೆದ್ದಾರಿ ಮುಂಬರುವ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ನೂತನ ಎಕ್ಸ್ಪ್ರೆಸ್ವೇ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕೊಂಡಿಯಾಗಿದೆ. ಸಂಪೂರ್ಣವಾಗಿ ವಾಹನ ಸಂಚಾರಕ್ಕೆ ಮುಕ್ತವಾದ ಬಳಿಕ ಪ್ರಯಾಣದ ಅವಧಿಯು ಒಂದಷ್ಟು ಗಂಟೆಗಳ ಕಾಲ ಕಡಿಮೆಯಾಗುವ ನಿರೀಕ್ಷೆಯಿದೆ. ಬನ್ನಿ, ಹೊಸ ಹೆದ್ದಾರಿಯ ವಿಶೇಷತೆಗಳ ಕುರಿತಾದ ಒಂದಷ್ಟು ವಿವರಗಳನ್ನು ತಿಳಿಯೋಣ.
ನೂತನ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ 2026ರ ಜೂನ್ನಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. ಈ ಮೊದಲು ಇದೇ ಹೆದ್ದಾರಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) 2025ರ ಆಗಸ್ಟ್ ತಿಂಗಳಲ್ಲಿ ಎಕ್ಸ್ಪ್ರೆಸ್ವೇಯನ್ನು ತೆರೆಯಲು ಉದ್ದೇಶಿಸಿತ್ತು. ಆದರೆ ಹಲವೆಡೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆ, ಲೋಕಾರ್ಪಣೆಗೊಳ್ಳುವುದು ಕೂಡ ತಡವಾಗಿದೆ.

ಈ ಎಕ್ಸ್ಪ್ರೆಸ್ವೇ 262 ಕಿಲೋಮೀಟರ್ ಉದ್ದವಿದೆ. ಕರ್ನಾಟಕದಲ್ಲಿ 71 ಕಿಲೋಮೀಟರ್ ಹಾದುಹೋಗುತ್ತದೆ. ಕಾಮಗಾರಿಯೂ ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸುತ್ತಿವೆ. ಅದರ ಹೊರತಾಗಿಯೂ ಇದೇ ಮಾರ್ಚ್ನಲ್ಲಿ ಕೋಲಾರದ ಬಂಗಾರಪೇಟೆ ಸಮೀಪ ಅಪಘಾತ ಸಂಭವಿಸಿ 4 ಜನರು ಮೃತಪಟ್ಟಿದ್ದರು. ಆ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ದ್ವಿಚಕ್ರ ವಾಹನಗಳ ಸಂಚಾರಕ್ಕೂ ನಿರ್ಬಂಧ ಹೇರಿತ್ತು.
ಹೊಸ ಹೆದ್ದಾರಿ ಮೂಲಕ ಬೆಂಗಳೂರಿಗರು ಚೆನ್ನೈ ನಗರಕ್ಕೆ ಸುಲಭವಾಗಿ ತಲುಪಬಹುದು. ಅಲ್ಲಿನ ಜನರು ಇಲ್ಲಿಗೂ ಬರಬಹುದು. ಹಾಗೆಯೇ ಎಕ್ಸ್ಪ್ರೆಸ್ವೇ ಹಾದು ಹೋಗುವ ರಾಜ್ಯದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರುಗಳ ನಿವಾಸಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ.
ನೂತನ ಎಕ್ಸ್ಪ್ರೆಸ್ವೇಯನ್ನು ಸರಿ ಸುಮಾರು ರೂ.17,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದು 4 ಪಥಗಳ ಹೆದ್ದಾರಿಯಾಗಿದ್ದು, ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು. ಸದ್ಯ ಬೆಂಗಳೂರಿನಿಂದ ಚೆನ್ನೈ ತಲುಪಲು 5 ರಿಂದ 6 ಗಂಟೆ ಸಮಯಾವಕಾಶ ಬೇಕಾಗಿದೆ. ಅದು 2 ರಿಂದ 3 ಗಂಟೆಗಳಿಗೆ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ಹೆದ್ದಾರಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹತ್ತಿರ ಶುರುವಾಗಲಿದ್ದು, ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಹೊಸ ಎಕ್ಸ್ಪ್ರೆಸ್ವೇ 17 ಮೇಲ್ಸೇತುವೆ ಹಾಗೂ 41 ಕೆಳ ಸೇತುವೆಗಳನ್ನು ಒಳಗೊಂಡಿದೆ. ಇಲ್ಲಿ ಕಾರು ಸೇರಿದಂತೆ ಇತರೆ ವಾಹನಗಳ ಗರಿಷ್ಠ ವೇಗವನ್ನು 120 ಕೆಎಂಪಿಹೆಚ್ಗೆ ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ.
ಇನ್ನು, ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಮೂರು ರಾಜ್ಯದ ಜನರಿಗೆ ತುಂಬಾನೇ ಪ್ರಯೋಜನಗಳಿವೆ. ಈ ಹೆದ್ದಾರಿ ಮೂಲಕ ತ್ವರಿತ ಪ್ರಯಾಣ ಸಾಧ್ಯವಿರುವುರುವ ಕಾರಣ ಪ್ರವಾಸೋದ್ಯಮ, ವ್ಯಾಪಾರ - ವಹಿವಾಟು ಹಾಗೂ ಶೈಕ್ಷಣಿಕ ಚಟುವಟಿಕೆಗಳು ಸಹ ಗರಿಗೆದರಲಿವೆ. ಜೊತೆಗೆ ಎಕ್ಸ್ಪ್ರೆಸ್ವೇ ಹಾದು ಹೋಗುವ ಪಟ್ಟಣಗಳ ಅಕ್ಕ - ಪಕ್ಕ ಭೂಮಿಗೆ ಬಂಗಾರದ ಬೆಲೆ ಬಂದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೂ ಹೆಚ್ಚಿನ ಲಾಭವಾಗಲಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








