New 3 Expressway Karnataka: ಇವೇ ಕರ್ನಾಟಕದ ಹೊಸ ಎಕ್ಸ್ಪ್ರೆಸ್ವೇಗಳು, ನಿಮ್ಮೂರಿಗೆ ಬೇಗ ಹೋಗಬಹುದು!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶಾದ್ಯಂತ ಮೂಲ ಸೌಕರ್ಯ ಅಭಿವೃದ್ಧಿಗೆ ಎಕ್ಸ್ಪ್ರೆಸ್ವೇಗಳನ್ನು ನಿರ್ಮಾಣ ಮಾಡುತ್ತಿದೆ. ಅದರ ಭಾಗವಾಗಿ ಕರ್ನಾಟಕ (Karnataka)ದಲ್ಲಿಯೂ ಹೊಸ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿದ್ದು, ಈಗಾಗಲೇ ಲೋಕಾರ್ಪಣೆಗೊಂಡಿರುವ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ (Bengaluru - Mysuru expressway)ಯಿಂದ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡ 118 ಕಿಮೀ ಉದ್ದದ ಈ ದಶಪಥ ಹೆದ್ದಾರಿಯಿಂದ ಪ್ರಯಾಣದ ಅವಧಿಯು ಸಾಕಷ್ಟು ಕಡಿಮೆಯಾಗಿದ್ದು, ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ತೆರಳಬಹುದು. ಅದೇ ರೀತಿಯಲ್ಲಿ ಚೆನ್ನೈ - ಬೆಂಗಳೂರು, ಬೆಂಗಳೂರು - ಪುಣೆ ಎಕ್ಸ್ಪ್ರೆಸ್ವೇಗಳು ಮುಂಬರುವ ವರ್ಷಗಳಲ್ಲಿ ಉದ್ಘಾಟನೆಗೊಳ್ಳಲಿದೆ. ನೆಲಮಂಗಲ - ತುಮಕೂರು ನಡುವೆಯೂ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಮೊದಲಿಗೆ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru - Chennai Expressway) ಬಗ್ಗೆ ತಿಳಿಯೋಣ. ಈ ಹೆದ್ದಾರಿ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದ್ದು, 2024ರ ಮಾರ್ಚ್ ವೇಳೆಗೆ ಎಕ್ಸ್ಪ್ರೆಸ್ವೇ ಲೋಕಾರ್ಪಣೆಗೊಳ್ಳಬಹುದು. ಭಾರತಮಾಲಾ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು ನಿರ್ಮಿಸುತ್ತಿದ್ದು, 2022ರ ಮೇ 26 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಎಕ್ಸ್ಪ್ರೆಸ್ವೇಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.
262 ಕಿಮೀ ಉದ್ದದ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನ ಜನರಿಗೆ ಭಾರೀ ಅನುಕೂಲವಾಗಲಿದೆ. ಈಗ ಬೆಂಗಳೂರು - ಚೆನ್ನೈ ನಡುವೆ ಪ್ರಯಾಣಿಸಲು ಏನೆಲ್ಲ ಅಂದರೂ 5 - 6 ಗಂಟೆಬೇಕು. ಈ ಹೆದ್ದಾರಿ ಉದ್ಘಾಟನೆಗೊಂಡ ಮೇಲೆ ಅದು 2 ಗಂಟೆ 30 ನಿಮಿಷಗಳಿಗೆ ಇಳಿಕೆಯಾಗುವ ನೀರಿಕ್ಷೆಯಿದೆ. ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಬರೋಬ್ಬರಿ ರೂ.17,000 ಕೋಟಿ ವ್ಯಯಿಸಲಾಗುತ್ತಿದೆ.

ಸದ್ಯ, 4 ಪಥದ ಹೆದ್ದಾರಿಯಾಗಿರಲಿದ್ದು, ವಾಹನ ದಟ್ಟಣೆಗೆ ತಕ್ಕಂತೆ 8 ಪಥಗಳಿಗೆ ವಿಸ್ತರಿಸಬಹುದು. ಈ ಎಕ್ಸ್ಪ್ರೆಸ್ವೇ 17 ಫ್ಲೈಓವರ್ಗಳು, 41 ವೆಹಿಕಲ್ ಅಂಡರ್ಪಾಸ್, 52 ಪಾದಚಾರಿ ಅಂಡರ್ಪಾಸ್, 162 ಸೇತುವೆಗಳನ್ನು ಒಳಗೊಂಡಿರಲಿದ್ದು, ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಹಾಗೂ ಶ್ರೀಪೆರಂಬದೂರಿನ ಮೂಲಕ ಹಾದುಹೊಗಲಿದೆ. ಬೆಂಗಳೂರು - ಚೆನ್ನೈ ನಡುವೆ ಈಗಿರುವ 2 ಹೆದ್ದಾರಿಗಳ ಮೇಲೆ ಒತ್ತಡವನ್ನು ಕಡಿಮೆಗೊಳಿಸಲಿದೆ.
ಬೆಂಗಳೂರು ಪುಣೆ ನಡುವಯೂ ಹೊಸ ಎಕ್ಸ್ಪ್ರೆಸ್ವೇ (Bangalore Pune Expressway) ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ನಡೆಸುತ್ತಿದೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. 719.26 ಕಿಲೋಮೀಟರ್ ಉದ್ದದ ಎಕ್ಸ್ಪ್ರೆಸ್ವೇ ಇದಾಗಿರಲಿದ್ದು, ಕರ್ನಾಟಕದ 9 ಜಿಲ್ಲೆಗಳು (ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ) ಮತ್ತು ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ (ಪುಣೆ, ಸತಾರ ಸಾಂಗ್ಲಿ) ಈ ಹೆದ್ದಾರಿ ಹಾದುಹೋಗಲಿದೆ.

ಪ್ರಸ್ತುತ, 6 ಪಥದಲ್ಲಿ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ. ಎರಡು ನಗರಗಳ ನಡುವೆ 95 ಕಿ.ಮೀಯಷ್ಟು ಅಂತರ ಕಡಿಮೆಯಾಗಲಿದೆ. ಜೊತೆಗೆ ಪ್ರಯಾಣದ ಅವಧಿಯು ಇಳಿಕೆಯಾಗಲಿದ್ದು, ಈಗ ಬೆಂಳೂರಿನಿಂದ ಪುಣೆ ತಲುಪಲು 15 ಗಂಟೆಬೇಕು. ಅದು, ಈ ಹೆದ್ದಾರಿ ನಿರ್ಮಾಣವಾದ ಮೇಲೆ 7 ಗಂಟೆಗೆ ಕಡಿಮೆಯಾಗಲಿದೆ ಎನ್ನಲಾಗಿದೆ.
ನೆಲಮಂಗಲ - ತುಮಕೂರು ನಡುವೆ ದಶಪಥ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಆದರೆ, ನಿಧಾನಗತಿಯಲ್ಲಿ ಸಾಗುತ್ತಿದೆ. 44.04 ಕಿಲೋಮೀಟರ್ ಉದ್ದದ ರಸ್ತೆ ಇದಾಗಿದ್ದು, ಒಟ್ಟು ರೂ.844 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, 2025ರ ಆಗಸ್ಟ್ ತಿಂಗಳ ಕೊನೆಯಲ್ಲಿ ಉದ್ಘಾಟನೆಗೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ರಸ್ತೆ ನಿರ್ಮಾಣದಿಂದ ಚಿತ್ರದುರ್ಗ, ದಾವಣೆಗೆರೆ, ಹಾವೇರಿ ಹಾಗೂ ಧಾರವಾಡಕ್ಕೆ ಪ್ರಯಾಣದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ.
ಕರ್ನಾಟಕದಲ್ಲಿ ಎಕ್ಸ್ಪ್ರೆಸ್ವೇಗಳ ನಿರ್ಮಾಣದಿಂದ ಸಾರ್ವಜನಿಕರಿಗೆ ಪ್ರಯಾಣದ ಅವಧಿ ಉಳಿತಾಯವಾಗುತ್ತದೆ. ಜೊತೆಗೆ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಾಗಲಿದೆ. ಮುಂಬರುವ ಕೆಲವೇ ತಿಂಗಳಲ್ಲಿ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಇದಿಷ್ಟೇ ಅಲ್ಲದೆ, ದೇಶದ ಹಲವೆಡೆ ಹೊಸ ಹೆದ್ದಾರಿ ನಿರ್ಮಾಣಕ್ಕೂ ಕೇಂದ್ರ ಸರ್ಕಾರ ಯೋಜಿಸಿದೆ.


Click it and Unblock the Notifications