ನೋ ಪೆಟ್ರೋಲ್: ಫುಡ್ ಡೆಲಿವರಿಗೆ ಕುದುರೆ ಏರಿದ ಜೊಮ್ಯಾಟೊ ಬಾಯ್..!
ದೇಶಾದ್ಯಂತ ಟ್ರಕ್ ಮತ್ತು ಟ್ಯಾಂಕರ್ ಚಾಲಕರು ನಡೆಸುತ್ತಿದ್ದ ಪ್ರತಿಭಟನೆ ಹಿನ್ನೆಲೆ, ಹೈದರಾಬಾದ್ (Hyderabad) ನಗರದಲ್ಲಿ ಪೆಟ್ರೋಲ್ ದೊರೆಯುವುದಿಲ್ಲ ಎಂಬ ಭೀತಿಯಿಂದ ಅನೇಕ ವಾಹನ ಸವಾರರು ಫುಲ್ ಟ್ಯಾಂಕ್ ಮಾಡಿಕೊಳ್ಳಲು ಬಂಕ್ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಒಂದೆರೆಡು ದಿನದಿಂದ ಎಲ್ಲಿ ನೋಡಿದರಲ್ಲಿ ಕಾಣಿಸುತ್ತಿತ್ತು.
ಕೆಲವೆಡೆ ಪೆಟ್ರೋಲ್ ಪಂಪ್ಗಳು ಮುಚ್ಚಿದ್ದವು. ಇದು, ಸಾಮಾನ್ಯ ಜನರು ಮಾತ್ರವಲ್ಲದೆ, ಫುಡ್ ಡೆಲಿವರಿ ಬಾಯ್ಗಳಿಗೂ ತಲೆನೋವು ತಂದಿತು. ಆದರೆ, ಚಂಚಲ್ಗುಡದಲ್ಲಿ ಜೊಮ್ಯಾಟೊ ಏಜೆಂಟ್ನೊಬ್ಬ ಆಹಾರ ತಲುಪಿಸಲು ಕುದುರೆ ಏರಿ, ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣ (Social media)ದಲ್ಲಿ ಕಾಣಿಸಿಕೊಂಡಿತು. ಆ ಬಳಿಕ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆಯಿತು.

ಕುದುರೆ ಮೇಲೆ ತೆರಳುತ್ತಿದ್ದ ಜೊಮ್ಯಾಟೊ ಏಜೆಂಟ್ನನ್ನು ಕಂಡು ಹಲವು ವಾಹನ ಸವಾರರು ಆಶರ್ಯ ವ್ಯಕ್ತಪಡಿಸಿ, ಆತನನ್ನು ಪ್ರಶ್ನಿಸಿದ್ದಾರೆ. '3 ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತರೂ ತನ್ನ ಬೈಕ್ಗೆ ಪೆಟ್ರೋಲ್ ಸಿಗಲಿಲ್ಲ' ಎಂದು ಫುಡ್ ಡೆಲಿವರಿ ಬಾಯ್ ಉತ್ತರಿಸಿದ್ದಾನೆ. ಇದಕ್ಕೆ ನೆಟ್ಟಿಗರೂ ಕೂಡ ತರಹೇವಾರಿ ಕಾಮೆಂಟ್ ಮಾಡಿದ್ದು, ಈ ವಿಡಿಯೋವನ್ನು 'ಎಕ್ಸ್' ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರನೊಬ್ಬ, 'ಇದು ಟ್ರಿಕ್ ರೀತಿಯಲ್ಲಿ ಕಾಣುತ್ತಿದ್ದು, ಅವರು ಅದನ್ನು ಯಶಸ್ವಿಯಾಗಿ ಸುದ್ದಿ ಮಾಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಎಲ್ಲ ಅಲುಗಾಡಿದರೆ, ಆಹಾರದ ಸ್ಥಿತಿಯನ್ನು ಊಹಿಸಿ' ಎಂದಿದ್ದಾರೆ. ಮತ್ತೊಬ್ಬರು, 'ಇದು ಅತ್ಯುತ್ತಮ ಸಾರಿಗೆ ವಿಧಾನವೆಂದು ನಾನು ಭಾವಿಸುತ್ತೇನೆ. ಇದರಿಂದ ಪರಿಸರಕ್ಕೂ ಹೆಚ್ಚಿನ ಹಾನಿಯಾಗುವುದಿಲ್ಲ' ಎಂದು ಹೇಳಿದ್ದಾರೆ.

ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (ಐಪಿಸಿ) ಬದಲಿಗೆ ಕೇಂದ್ರ ಸರ್ಕಾರ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯನ್ನು ರೂಪಿಸಿದೆ. ಅದರಡಿ ಅಜಾಗರೂಕ ಚಾಲನೆಯಿಂದ ತೀವ್ರತರದ ರಸ್ತೆ ಅಪಘಾತಕ್ಕೆ ಕಾರಣರಾಗಿ, ಪೊಲೀಸರಿಗೆ ಮಾಹಿತಿ ನೀಡದೆ ತಪ್ಪಿಸಿಕೊಳ್ಳುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 7 ಲಕ್ಷ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗುತ್ತದೆ.
ಬದಲಾಗಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304ರ ಪ್ರಕಾರ, ಈ ರೀತಿಯ ಪ್ರಕರಣಗಳಲ್ಲಿ ಅಪರಾಧ ದೃಢಪಟ್ಟರೆ, ಆರೋಪಿಗಳಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಭಾರತೀಯ ನ್ಯಾಯ ಸಂಹಿತೆಯಲ್ಲಿ ಶಿಕ್ಷೆ ಹಾಗೂ ದಂಡದ ಪ್ರಮಾಣ ಹೆಚ್ಚಿರುವುದರಿಂದ ರಾಜಸ್ಥಾನ, ಪಶ್ಚಿಮ ಬಂಗಾಳ, ಚಂಡೀಗಢ, ಮಹಾರಾಷ್ಟ್ರ ಹಾಗೂ ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಟ್ರಕ್, ಟ್ಯಾಂಕರ್ ಚಾಲಕರು ಪ್ರತಿಭಟನೆಯನ್ನು ನಡೆಸಿದ್ದರು.
ಕೇಂದ್ರ ಸರ್ಕಾರದ ಮಧ್ಯೆ ಪ್ರವೇಶದಿಂದ ಅವರೆಲ್ಲ ಮಂಗಳವಾರ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, 'ನೂತನ ನಿಯಮಗಳು ಇನ್ನೂ ಜಾರಿಗೊಂಡಿಲ್ಲ. ಅದಕ್ಕೂ ಮೊದಲು ವಿವಿಧ ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗುತ್ತಿದೆ ಎಂದು ಭರವಸೆ ನೀಡಿದ ಬಳಿಕ, ಟ್ರಕ್ ಚಾಕಲರು ಮುಷ್ಕರವನ್ನು ವಾಪಾಸ್ ತೆಗೆದುಕೊಂಡಿದ್ದಾರೆ' ಎಂದಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications