ತಿರುಪತಿ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ: ಇಲ್ಲಿಂದ ಹೊರಡಲಿದೆ ಬಸ್.. ರೂ.855 ಟಿಕೆಟ್ ದರ
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯೂಕೆಆರ್ಟಿಸಿ - NWKRTC), ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾದಿಂದ ವೇಗದೂತ ಬಸ್ ಸೇವೆಯನ್ನು ಒದಗಿಸುತ್ತಿದೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಕೂಡ ಪೋಸ್ಟ್ ಮಾಡಿದೆ.
ಕುಮಟಾದಿಂದ ತಿರುಪತಿಗೆ ಪ್ರತಿದಿನ ವೇಗದೂತ ಸಾರಿಗೆ ಬಸ್ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಕುಮಟಾದಿಂದ ಸಂಜೆ 4 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 9.30ಕ್ಕೆ ತಿರುಪತಿಯನ್ನು ತಲುಪಲಿದೆ. ಶಿರಸಿ, ಸಿದ್ದಾಪುರ, ಶಿವಮೊಗ್ಗ ಹಾಗೂ ಬೆಂಗಳೂರು ಮಾರ್ಗವಾಗಿ ಈ ಬಸ್ ಓಡಾಡಲಿದ್ದು, ರೂ.855 ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.

ತಿರುಪತಿ (Tirupati)ಯಿಂದ ಸಂಜೆ 4 ಗಂಟೆಗೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 10.30ಕ್ಕೆ ಕುಮಟಾ (Kumta)ಗೆ ಬರುತ್ತದೆ. ಆಸಕ್ತ ಪ್ರಯಾಣಿಕರು, https://www.ksrtc.in/oprs-web/ ವೆಬ್ಸೈಟ್ಗೆ ಭೇಟಿ ನೀಡಿ, ತಾವು ಹಾಗೂ ತಮ್ಮ ಕುಟುಂಬದ ಸದಸ್ಯರಾಗಿ ಆಸನಗಳನ್ನು ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 77609 91730ಗೂ ಸಂಪರ್ಕಿಸಬಹುದು.
ಹುಬ್ಬಳ್ಳಿ - ಶಿರಡಿ, ಬೆಳಗಾವಿ - ಲಾತೂರ್, ರಾಮದುರ್ಗ - ಬೆಂಗಳೂರು, ಮುರುಡೇಶ್ವರ - ಬೆಂಗಳೂರು ಹಾಗೂ ಬೀಳಗಿ - ಬೆಂಗಳೂರು ಮಧ್ಯೆಯೂ ಎನ್ಡಬ್ಲ್ಯೂಕೆಆರ್ಟಿಸಿಯ ಪಲ್ಲಕ್ಕಿ (Pallakki) ನಾನ್ ಎಸಿ ಸ್ಲೀಪರ್ ಬಸ್ಗಳು ಸಂಚಾರವನ್ನು ನಡೆಸುತ್ತಿವೆ. ಹುಬ್ಬಳ್ಳಿಯಿಂದ ರಾತ್ರಿ 8.08ಕ್ಕೆ ಹೊರಡುವ ಈ ಬಸ್, ಮರುದಿನ ಬೆಳಗ್ಗೆ 8.44ರ ಸುಮಾರಿಗೆ ಶಿರಡಿಗೆ ತೆರಳುತ್ತದೆ.
ಶಿರಡಿಯಿಂದ ರಾತ್ರಿ 8 ಗಂಟೆಗೆ ಸಂಚಾರವನ್ನು ಪ್ರಾರಂಭಿಸಲಿದ್ದು, ಬೆಳಗ್ಗೆ 8.45ರ ಸುಮಾರಿಗೆ ಹುಬ್ಬಳ್ಳಿಗೆ ವಾಪಸ್ ಆಗುತ್ತದೆ. ಟಿಕೆಟ್ವೊಂದಕ್ಕೆ ರೂ.1300 ದರವಿದೆ. ಬೆಳಗಾವಿ - ಲಾತೂರ್ ಮಧ್ಯೆ ಕಾರ್ಯಾಚರಣೆಯನ್ನು ನಡೆಸುವ ಪಲ್ಲಕ್ಕಿ ಬಸ್, ಬೆಳಗಾವಿಯಿಂದ ರಾತ್ರಿ 8 ಗಂಟೆಗೆ ಹೊರಡಲಿದೆ. ಬೆಳಗ್ಗೆ 6.20ಕ್ಕೆ ಲಾತೂರ್ಗೆ ಹೋಗುತ್ತದೆ. ಅಲ್ಲಿಂದ ಸಂಜೆ 7.30ಕ್ಕೆ ಪ್ರಯಾಣವನ್ನು ಆರಂಭಿಸಲಿದ್ದು, ಬೆಳಗ್ಗೆ 5.30ರ ಸುಮಾರಿಗೆ ಬೆಳಗಾವಿಗೆ ಬರುತ್ತದೆ. ರೂ.924 ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
ಎನ್ಡಬ್ಲ್ಯೂಕೆಆರ್ಟಿಸಿಯು ಮುರುಡೇಶ್ವರ - ಬೆಂಗಳೂರು ಮಾರ್ಗವಾಗಿಯೂ ಪಲ್ಲಕ್ಕಿ ಬಸ್ ಸೇವೆಯನ್ನು ನಡೆಸುತ್ತಿದೆ. ಈ ಬಸ್ ಸಂಜೆ 7.15ಕ್ಕೆ ಮುರುಡೇಶ್ವರದಿಂದ ಹೊರಡಲಿದೆ. ಮರುದಿನ ಬೆಳಗ್ಗೆ 6.30ರ ಸುಮಾರಿಗೆ ಬೆಂಗಳೂರಿಗೆ ತೆರಳುತ್ತದೆ. ಬೆಂಗಳೂರಿನಿಂದ ಸಂಜೆ 7.15ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ಬೆಳಗ್ಗೆ 7ರ ಸುಮಾರಿಗೆ ಮುರುಡೇಶ್ವರಕ್ಕೆ ಹೋಗುತ್ತದೆ. ರೂ.1018 ಪ್ರಯಾಣದ ದರವಿದೆ.
ಇನ್ನು, ವಾಯುವ್ಯ ಸಾರಿಗೆ ಸಂಸ್ಥೆಯು ಬೆಳಗಾವಿ ಹಾಗೂ ಬಬಲಾದಿ ನಡುವೆಯೂ ವೇಗದೂತ ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ಬಸ್ ಯರಗಟ್ಟಿ, ಯಾದವಾಡ, ಮುಧೋಳ ಹಾಗೂ ಗಲಗಲಿ ಮಾರ್ಗವಾಗಿ ಸಂಚಾರವನ್ನು ನಡೆಸುತ್ತದೆ. ಬೆಳಗಾವಿ - ಹೈದರಾಬಾದ್ ಮಧ್ಯೆ ಐರಾವತ ಕ್ಲಬ್ ಕ್ಲಾಸ್ ಎಸಿ ಬಸ್ ಓಡಾಟ ಆರಂಭಗೊಂಡಿದ್ದು, ಯರಗಟ್ಟಿ, ಲೋಕಾಪುರ, ಮುಧೋಳ, ಜಮಖಂಡಿ, ವಿಜಯಪುರ, ಕಲಬುರಗಿ ಮತ್ತು ಹುಮ್ನಾಬಾದ್ ಮೂಲಕ ಚಲಿಸುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








