ಕಷ್ಟ ಕಾಲದಲ್ಲಿ ಕೈಹಿಡಿದವರನ್ನು ಸನ್ಮಾನಿಸಿದ ಟೋಕಿಯೊ ಒಲಂಪಿಕ್ಸ್ ಪದಕ ವಿಜೇತೆ
2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತವು ಹೊಸ ಸಾಧನೆ ಮಾಡಿದೆ. ಭಾರತವು ಈ ಹಿಂದಿನ ಎಲ್ಲಾ ಒಲಿಂಪಿಕ್ಸ್ಗಳಿಗಿಂತ ಈ ಬಾರಿ ಹೆಚ್ಚು ಪದಕಗಳನ್ನು ಗೆದ್ದಿದೆ. ಭಾರತವು 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಒಟ್ಟು ಏಳು ಪದಕಗಳನ್ನು ಗೆದ್ದಿದೆ.

ಜಪಾನ್ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆದ್ದರು. ಇದು 2020 ರ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಮೊದಲ ಚಿನ್ನದ ಪದಕವಾಗಿದೆ. ಈ ಮೂಲಕ ಭಾರತವು ಇದೇ ಮೊದಲ ಬಾರಿಗೆ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದೆ.

ಕೆಲವು ದಿನಗಳ ಹಿಂದಷ್ಟೇ ಇದೇ ಒಲಿಂಪಿಕ್ಸ್ನಲ್ಲಿ ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಿದ್ದರು. ಅವರು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಮೀರಾಬಾಯಿ ಚಾನು ಮಣಿಪುರದ ರಾಜಧಾನಿ ಇಂಫಾಲದಿಂದ 25 ಕಿ.ಮೀ ದೂರದಲ್ಲಿರುವ ಹಳ್ಳಿಯೊಂದರಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ.

ಮೀರಾಬಾಯಿ ಚಾನು ಅವರ ಪೋಷಕರು ಯಾವುದೇ ಸ್ವಂತ ವಾಹನವನ್ನು ಹೊಂದಿಲ್ಲ. ಅವರು ವಾಸಿಸುತ್ತಿರುವ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಇದರ ಜೊತೆಗೆ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಮೀರಾಬಾಯಿ ಚಾನುರವರು ತಮ್ಮ ಗ್ರಾಮದಿಂದ 25 ಕಿ.ಮೀ ದೂರದಲ್ಲಿರುವ ಇಂಫಾಲದ ತರಬೇತಿ ಕೇಂದ್ರಕ್ಕೆ ತೆರಳಲು ತಮ್ಮ ಗ್ರಾಮದ ಮೂಲಕ ಹಾದು ಹೋಗುವ ಲಾರಿಗಳಲ್ಲಿ ಲಿಫ್ಟ್ ಕೇಳುತ್ತಿದ್ದರು.

ಅಂತಹ ಕಠಿಣ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ದೊರೆತಿದೆ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ನಂತರ ತಮ್ಮ ತವರಿಗೆ ಮರಳಿದ ಮೀರಾಬಾಯಿ ಚಾನು ತಮಗೆ ಲಿಫ್ಟ್ ನೀಡಿದ್ದ ಸುಮಾರು 150 ಲಾರಿ ಚಾಲಕರಿಗೆ ಕರೆ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.

ಇಷ್ಟು ಸಾಲದೆಂಬಂತೆ ಆ ಲಾರಿ ಚಾಲಕರಿಗೆ ಸನ್ಮಾನವನ್ನೂ ಸಹ ಮಾಡಿದ್ದಾರೆ. ಮೀರಾಬಾಯಿ ಚಾನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹೆಮ್ಮೆಯಿಂದ ಶೇರ್ ಮಾಡುತ್ತಿದ್ದಾರೆ.

ನೆರವು ನೀಡಿದವರನ್ನು ಮರೆತು ಹೋಗುವ ಈ ಕಾಲದಲ್ಲಿ ತಮಗೆ ನೆರವಾದವರಿಗೆ ಧನ್ಯವಾದ ಸಲ್ಲಿಸುವ ಮೂಲಕ ಮೀರಾಬಾಯಿ ಚಾನು ಕೃತಜ್ಞತೆ ತೋರಿಸಿದ್ದಾರೆ. ಮೀರಾಬಾಯಿ ಚಾನು ಒಲಿಂಪಿಕ್ ಪದಕ ಗೆದ್ದ ನಂತರ ತಮಗೆ ಪದಕ ನೀಡಿದವರಿಗೆ ತಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

ಮೀರಾಬಾಯಿ ಚಾನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಮಹಿಳೆಯರ 49 ಕೆ.ಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ 202 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದರು. ಅವರು ಪದಕ ಗೆದ್ದಿರುವುದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸಿದ್ದರು. ಅದರಲ್ಲೂ ಅವರ ಸ್ವಗ್ರಾಮದಲ್ಲಿ ವಿಜಯೋತ್ಸವ ಆಚರಿಸಲಾಗಿತ್ತು.

ಈ ಸಂದರ್ಭದಲ್ಲಿ 150 ಲಾರಿ ಚಾಲಕರನ್ನು ಆಹ್ವಾನಿಸಿ ಸನ್ಮಾನಿಸಲಾಯಿತು. ಮೀರಾಬಾಯಿ ಚಾನು ಈ ಗೌರವ ನೀಡಿದ್ದಕ್ಕಾಗಿ ಗ್ರಾಮಸ್ಥರಿಗೂ ಧನ್ಯವಾದ ಸಲ್ಲಿಸಿದ್ದಾರೆ. ಇಂಫಾಲ್ನಿಂದ ಬಂದ ವರದಿಗಳ ಪ್ರಕಾರ, ಮೀರಾಬಾಯಿ ಚಾನು ಪ್ರತಿಯೊಬ್ಬ ಲಾರಿ ಚಾಲಕರಿಗೂ ಒಂದು ಅಂಗಿ, ಮಣಿಪುರ ಸ್ಕಾರ್ಫ್ ನೀಡುವುದರ ಜೊತೆಗೆ ಊಟ ಹಾಕಿ ಸನ್ಮಾನಿಸಿದ್ದಾರೆ.

ಲಾರಿ ಚಾಲಕರನ್ನು ಸನ್ಮಾನಿಸುವ ಸಂದರ್ಭದಲ್ಲಿ ಮೀರಾಬಾಯಿ ಚಾನು ಭಾವುಕರಾಗಿದ್ದರು. ತರಬೇತಿ ಪಡೆಯುವ ಸಂದರ್ಭದಲ್ಲಿ ಲಾರಿ ಚಾಲಕರು ಲಿಫ್ಟ್ ನೀಡದೇ ಹೋಗಿದ್ದರೆ ವೇಟ್ ಲಿಫ್ಟರ್ ಆಗಲು ಸಾಧ್ಯವಾಗುತ್ತಿರಲಿಲ್ಲವೆಂದು ಅವರು ಹೇಳಿದರು. ಈ ಲಾರಿ ಚಾಲಕರನ್ನು ಎಂದಿಗೂ ಮರೆಯುವುದಿಲ್ಲವೆಂದು ಅವರು ಹೇಳಿದ್ದಾರೆ.

ನನಗೆ ಮನೆಯಿಂದ ತರಬೇತಿ ಕೇಂದ್ರಕ್ಕೆ ಲಿಫ್ಟ್ ನೀಡಿದ ಲಾರಿ ಚಾಲಕರನ್ನು ನೋಡಲು ಹಾಗೂ ಅವರ ಆಶೀರ್ವಾದವನ್ನು ಪಡೆಯಲು ನಾನು ಬಯಸುತ್ತೇನೆ. ನನ್ನ ಕಷ್ಟದ ಸಮಯದಲ್ಲಿ ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ಪದಕ ಗೆದ್ದ ನಂತರ ಮೀರಾಬಾಯಿ ಚಾನು ಹೇಳಿಕೊಂಡಿದ್ದರು.

ನಾನು ನನಗೆ ನೆರವಾದವರನ್ನು ಹುಡುಕುತ್ತಿದ್ದೇನೆ. ಈಗ ಅವರಿಗೆ ನನ್ನಿಂದ ಸಾಧ್ಯವಾಗುವ ಸಹಾಯವನ್ನು ಮಾಡುತ್ತೇನೆ ಎಂದು ಅವರು ಹೇಳಿದರು. ಸಾರಿಗೆ ವೆಚ್ಚವನ್ನು ಉಳಿಸಿದ ಕಾರಣ ತರಬೇತಿಯ ಸಮಯದಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಹಣವನ್ನು ಸಾಧ್ಯವಾಯಿತು ಎಂದು ಮೀರಾಬಾಯಿ ಹೇಳಿದರು.

ಮೀರಾಬಾಯಿ ಚಾನು ಅವರ ಈ ಕೃತಜ್ಞತೆಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಮೀರಾಬಾಯಿ ಚಾನು ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದರೂ ತಮಗೆ ನೆರವಾದವರನ್ನು ಮರೆತ್ತಿಲ್ಲ. ಇದು ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ದೇವರು ನಿಮಗೆ ಮತ್ತಷ್ಟು ಸಾಧನೆ ಮಾಡಲು ಶಕ್ತಿ ನೀಡಲಿ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಕ್ರೀಡೆಗಳಲ್ಲಿ ಮಾತ್ರವಲ್ಲದೆ ಮಾನವೀಯತೆಯಲ್ಲೂ ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಹೇಳಿದ್ದಾರೆ.


Click it and Unblock the Notifications