ಹೊಸ ಮೋಟಾರು ಕಾಯ್ದೆ ನಂತರ ಮತ್ತಷ್ಟು ಹೆಚ್ಚಾಯ್ತು ಭ್ರಷ್ಟಾಚಾರ..!
ತಿದ್ದುಪಡಿಗೊಳಿಸಲಾದ ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೊಳಿಸಲಾಗಿದೆ. ಹಲವು ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಯು ಜನರಿಗೆ ಹೊರೆಯಾಗುವುದರ ಜೊತೆಗೆ ಭ್ರಷ್ಟಾಚಾರವೂ ಸಹ ಹೆಚ್ಚಾಗುವುದೆಂಬ ಕಾರಣಕ್ಕೆ ಈ ಕಾಯ್ದೆಯನ್ನು ಜಾರಿಗೆ ತರಲು ನಿರಾಕರಿಸಿದವು.

ಕೇಂದ್ರಾಡಳಿತ ಪ್ರದೇಶಗಳೂ ಸೇರಿದಂತೆ ಕೆಲ ರಾಜ್ಯಗಳು ಈ ಹೊಸ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿವೆ. ಹೊಸ ಕಾಯ್ದೆಯಲ್ಲಿ ದಂಡ ಹಾಗೂ ಚಲನ್ಗಳನ್ನು ಡಿಜಿಟಲಿಕರಣಗೊಳಿಸಿರುವುದರಿಂದ ಭ್ರಷ್ಟಾಚಾರವು ನಡೆಯುವ ಸಾಧ್ಯತೆಗಳಿಲ್ಲವೆಂದು, ನಿಯಮಗಳನ್ನು ಉಲ್ಲಂಘಿಸುವವರು ಪೂರ್ತಿ ಮೊತ್ತವನ್ನು ಪಾವತಿಸಲೇ ಬೇಕೆಂದು ಹೇಳಲಾಗಿತ್ತು.
ಭಾರೀ ಪ್ರಮಾಣದ ದಂಡಕ್ಕೆ ಹೆದರಿ ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸುವುದಿಲ್ಲವೆಂಬುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿತ್ತು. ಭ್ರಷ್ಟಾಚಾರವು ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಿಎನ್ಎನ್ ನ್ಯೂಸ್ 18 ಸ್ಟಿಂಗ್ ಆಪರೇಷನ್ ನಡೆಸಿದೆ.

ಈ ಸ್ಟಿಂಗ್ ಆಪರೇಷನ್ನಲ್ಲಿ ಭಾರೀ ಪ್ರಮಾಣದ ದಂಡವನ್ನು ತಪ್ಪಿಸಿಕೊಳ್ಳಲು ಹಲವು ಅಡ್ಡ ದಾರಿಗಳಿವೆ ಎಂಬುದು ಕಂಡು ಬಂದಿದೆ. ಸಿಎನ್ಎನ್ ನ್ಯೂಸ್ 18ನ ವರದಿಗಾರರಾದ ಸಾಹಿಲ್ ಮೆಂಘಾನಿರವರು ಹೊಸ ಕಾಯ್ದೆಯಲ್ಲಿಯೂ ಸಹ ಹೇಗೆ ಸಂಚಾರಿ ಪೊಲೀಸರು, ಕೋರ್ಟ್ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂಬುದನ್ನು ಈ ಸ್ಟಿಂಗ್ ಆಪರೇಷನ್ನಲ್ಲಿ ತೋರಿಸಿದ್ದಾರೆ.

ಸಾಹಿಲ್ರವರು ತಮ್ಮ ಬಳಿಯಿದ್ದ ರೂ.15,000ಗಳ ಚಲನ್ ಅನ್ನು ಸ್ಪೈ ಕ್ಯಾಮರಾದೊಂದಿಗೆ, ಗಾಜಿಯಾಬಾದ್ ಕೋರ್ಟ್ ಕಾಂಪ್ಲೆಕ್ಸಿಗೆ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೂ ಮೊದಲು ಗಾಜಿಯಾಬಾದ್ನಲ್ಲಿರುವ ಟ್ರಾಫಿಕ್ ಪೊಲೀಸರನ್ನು ಭೇಟಿಯಾಗಿ ದಂಡ ಕಟ್ಟುವ ವಿಧಾನದ ಬಗ್ಗೆ ವಿಚಾರಿಸಲಾಯಿತು.

ನಂತರ ಆ ಪೊಲೀಸ್ ವರದಿಗಾರನಿಗೆ ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದಾರೆ. ಆ ವ್ಯಕ್ತಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನ ಅಧಿಕಾರಿಯನ್ನು ಸಂಪರ್ಕಿಸಲು ಹೇಳಿದ್ದಾರೆ. ನಂತರ ವರದಿಗಾರನು ಆ ವ್ಯಕ್ತಿ ಹೇಳಿದಂತೆ ಆ ಅಧಿಕಾರಿಯನ್ನು ಭೇಟಿಯಾಗಿದ್ದಾರೆ.

ನಂತರ ದಂಡದ ಕುರಿತು ಮಾತುಕತೆ ನಡೆಸಿದ್ದಾರೆ. ಆ ಅಧಿಕಾರಿಯು ರೂ.5,000 ನೀಡಿದರೆ, ರೂ.15,000 ದಂಡವನ್ನು ಕಡಿಮೆ ಮಾಡುವುದಾಗಿ ತಿಳಿಸುತ್ತಾರೆ. ಇದಾದ ನಂತರ ವರದಿಗಾರರು ಹಿರಿಯ ವಕೀಲರನ್ನು ಭೇಟಿಯಾಗುತ್ತಾರೆ. ಅವರೂ ಸಹ ದಂಡದ ಪ್ರಮಾಣವನ್ನು ಕಡಿಮೆ ಮಾಡಲಾಗುವುದು, ಆದರೆ ಇದಕ್ಕಾಗಿ ಲಂಚ ನೀಡಬೇಕೆಂದು ಕೇಳುತ್ತಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಎಲ್ಲಾ ಘಟನೆಯು ಗಾಜಿಯಾಬಾದ್ನಲ್ಲಿರುವ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಈ ವೀಡಿಯೊದಲ್ಲಿರುವ ವ್ಯಕ್ತಿಯು ಹೇಳುವ ಪ್ರಕಾರ ದಂಡದ ಮೊತ್ತವನ್ನು ತಕ್ಷಣವೇ ಪಾವತಿಸುವ ಅವಶ್ಯಕತೆಯಿಲ್ಲ. ಎರಡು ತಿಂಗಳು ಸುಮ್ಮನಿರಬೇಕು.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಯಾವ ವ್ಯಕ್ತಿಗೆ ದಂಡ ವಿಧಿಸಲಾಗಿದೆಯೋ ಆ ವ್ಯಕ್ತಿಗೆ ಎರಡು ತಿಂಗಳ ನಂತರ ದಂಡವನ್ನು ಪಾವತಿಸುವಂತೆ ಅಧಿಕೃತ ನೋಟಿಸ್ ನೀಡಲಾಗುವುದು. ಆಗಲೂ ದಂಡ ಪಾವತಿಸದೇ ಸುಮ್ಮನಿರಬೇಕು. ನಿಯಮಗಳನ್ನು ಉಲ್ಲಂಘಿಸಿ ದಂಡವನ್ನು ಪಾವತಿಸದವರ ದಾಖಲೆಗಳನ್ನು ಹಾಗೂ ಚಲನ್ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ದಾಖಲೆಗಳನ್ನು ನ್ಯಾಯಾಲಯದಲ್ಲಿರುವ ಅಧಿಕಾರಿಗಳು ಪಡೆಯುತ್ತಾರೆ. ಚಲನ್ ಪಡೆಯುವ ಅವರು ಅದರಲ್ಲಿರುವ ದಂಡಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳನ್ನು ತೆಗೆದು ಹಾಕಿ ದಂಡವನ್ನು ಕಡಿಮೆ ಮಾಡಬಲ್ಲರು. ಇದಕ್ಕೆ ಬದಲಿಗೆ ಅವರಿಗೆ ರೂ.5,000 ಲಂಚ ಪಾವತಿಸಬೇಕು.

ಈ ಲಂಚದ ಹಣವನ್ನು ದಂಡದ ಮೊತ್ತದ ಮೇಲೆ ನಿಗದಿಪಡಿಸಲಾಗುತ್ತದೆಯೇ ಅಥವಾ ಎಲ್ಲರಿಗೂ ರೂ.5,000ವನ್ನು ಲಂಚವಾಗಿ ಪಡೆಯುತ್ತಾರೆಯೇ ಎಂಬುದು ತಿಳಿದು ಬಂದಿಲ್ಲ. ಈ ಸ್ಟಿಂಗ್ ಆಪರೇಷನ್ ನ್ಯಾಯಾಲಯದ ಮೇಲೆ ಜನ ಸಾಮಾನ್ಯರು ಇಟ್ಟಿರುವ ನಂಬಿಕೆಗೆ ಪೆಟ್ಟು ನೀಡುವಂತಿದೆ.

ಈ ವೀಡಿಯೊದಲ್ಲಿ ಸರ್ಕಾರದ ಅಧಿಕಾರಿಗಳು ಹಾಗೂ ವಕೀಲರು ಲಂಚ ಪಡೆದು ದಂಡದ ಮೊತ್ತವನ್ನು ಕಡಿಮೆ ಮಾಡುತ್ತಿರುವುದನ್ನು ಕಾಣಬಹುದು. ನ್ಯಾಯಾಲಯದ ವ್ಯವಸ್ಥೆಯು ಹೀಗೆ ಮುಂದುವರೆದರೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿರುವ ಹೆಚ್ಚಿನ ಪ್ರಮಾಣದ ದಂಡದ ಉದ್ದೇಶವೇ ವಿಫಲವಾಗಲಿದೆ. ಲಂಚ ಪಡೆದು ದಂಡದ ಮೊತ್ತವನ್ನು ಕಡಿಮೆಗೊಳಿಸಿದರೆ, ಹಣವಂತರು ಹೆಚ್ಚಿನ ಪ್ರಮಾಣದ ಉಲ್ಲಂಘನೆ ಮಾಡುವುದಕ್ಕೆ ದಾರಿಯಾಗಲಿದೆ.
Source: CNN/News18


Click it and Unblock the Notifications