ಕರ್ನಾಟಕ: ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ, ಟಿಕೆಟ್ ದರ.. ಫುಲ್ ಡೀಟೇಲ್ಸ್
ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವಿನ ವಂದೇ ಭಾರತ್ (Vande Bharat) ಎಕ್ಸ್ಪ್ರೆಸ್ಗೆ ಇಂದು (ಜೂನ್ 27) ಪ್ರಧಾನಿ ನರೇಂದ್ರ ಮೋದಿ ಅವರು, ವರ್ಚುವಲ್ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ಒಟ್ಟು 5 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.
ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಬೆಂಗಳೂರು - ಹುಬ್ಬಳ್ಳಿ - ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್, ಭೋಪಾಲ್ (ರಾಣಿ ಕಮಲಾಪತಿ) - ಇಂದೋರ್ ವಂದೇ ಭಾರತ್ ಎಕ್ಸ್ಪ್ರೆಸ್, ಭೋಪಾಲ್ (ರಾಣಿ ಕಮಲಾಪತಿ) - ಜಬಲ್ಪುರ ವಂದೇ ಭಾರತ್ ಎಕ್ಸ್ಪ್ರೆಸ್, ರಾಂಚಿ - ಪಾಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ಗೋವಾ (ಮಡ್ಗಾಂವ್) - ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ದೊರೆತಿದೆ.

ಧಾರವಾಡದಲ್ಲಿ ನಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಉದ್ಘಾಟನೆ ಸಮಾರಂಭದಲ್ಲಿ ಗಣ್ಯರ ದಂಡೇ ಭಾಗವಹಿಸಿತ್ತು. ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅರವಿಂದ್ ಬೆಲ್ಲದ, ವಿವಿಧ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು. ಧಾರವಾಡ ರೈಲು ನಿಲ್ದಾಣವನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು.
ಇದೀಗ, ಧಾರವಾಡದಿಂದ ಬೆಂಗಳೂರಿನ ಕಡೆಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹೊರಟಿದ್ದು, ಉದ್ಘಾಟನಾ ದಿನದ ವಿಶೇಷವಾಗಿ ಈ ರೈಲು 14 ರೈಲು ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಸಂಜೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ನೂತನ ರೈಲು ಬೆಂಗಳೂರಿನಿಂದ ಧಾರವಾಡಕ್ಕಿರುವ 489 ಕಿಲೋಮೀಟರ್ ದೂರವನ್ನು ಕ್ರಮಿಸಲು ಕೇವಲ 6 ಗಂಟೆ 25 ನಿಮಿಷ ಸಮಯವನ್ನು ತೆಗೆದುಕೊಳ್ಳತ್ತದೆ.

ಈ ರೈಲು, 350 ಕಿಲೋಮೀಟರ್ ವರೆಗೆ 110 kmph ವೇಗದಲ್ಲಿ ಚಲಿಸುತ್ತದೆ. ಬೆಂಗಳೂರು - ಹುಬ್ಬಳ್ಳಿ - ಧಾರವಾಡ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್, ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳಲ್ಲಿಯು ಸಂಚಾರ ನಡೆಸಲಿದೆ. ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಶುರುವಾಗಿ ಯಶವಂತಪುರ, ದಾವಣಗೆರೆ ಹಾಗೂ ಹುಬ್ಬಳ್ಳಿಯಲ್ಲಿ ನಿಲುಗಡೆಯಾಗಿ ಧಾರವಾಡ ತಲುಪುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ 3+2 ಕಾನ್ಫಿಗರೇಶನ್ ಆನಸಗಳಿರುವ ಏಳು ಎಸಿ ಬೋಗಿ ಮತ್ತು 2+2 ಕಾನ್ಫಿಗರೇಶನ್ ಸೀಟ್ ಆಯ್ಕೆಯಿರುವ ಒಂದು ಎಕ್ಸಿಕ್ಯೂಟಿವ್ ಬೋಗಿ ಇರುತ್ತದೆ. ಟಿಕೆಟ್ ದರದ ವಿವರವನ್ನು ತಿಳಿಯುವುದಾದರೆ, ಕೆಎಸ್ಆರ್ ಬೆಂಗಳೂರಿಂದ ಯಶವಂತಪುರಕ್ಕೆ ಎಸಿ ಚೇರ್ ಕಾರ್ ನಲ್ಲಿ ರೂ.410 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ರೂ.545 ಟಿಕೆಟ್ ದರವಿದೆ.
ಕೆಎಸ್ಆರ್ ಬೆಂಗಳೂರಿಂದ ದಾವಣಗೆರೆಗೆ ರೂ.915 ಮತ್ತು ರೂ.1740, ಹುಬ್ಬಳ್ಳಿಗೆ ರೂ.1135 ಹಾಗೂ ರೂ.2180, ಧಾರವಾಡಕ್ಕೆ ರೂ.1165 ಮತ್ತು 2010 ಟಿಕೆಟ್ ದರವಿದೆ. ಧಾರವಾಡದಿಂದ ಕೆಎಸ್ಆರ್ ಬೆಂಗಳೂರಿಗೆ ಎಸಿ ಚೇರ್ ಕಾರ್ ನಲ್ಲಿ ರೂ.1330 ಹಾಗೂ ಎಕ್ಸಿಕ್ಯೂಟಿವ್ ಕ್ಲಾಸ್ ನಲ್ಲಿ ರೂ.2440, ಯಶವಂತಪುರಕ್ಕೆ ರೂ.1340 ಮತ್ತು 2440, ದಾವಣಗೆರೆಗೆ 745 ಹಾಗೂ 1282, ಹುಬ್ಬಳ್ಳಿಗೆ ರೂ.410 ಮತ್ತು ರೂ.545 ಟಿಕೆಟ್ ದರವಿದೆ.
ನೂತನ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ನೋಡುವುದಾದರೆ, ಈ ರೈಲು ಕೆಎಸ್ಆರ್ ಬೆಂಗಳೂರಿನಿಂದ ಮುಂಜಾನೆ 5.45ಕ್ಕೆ ಹೊರಟು ಮಧ್ಯಾಹ್ನ 12.10ಕ್ಕೆ ಧಾರವಾಡಕ್ಕೆ ಬರಲಿದೆ. ಇಲ್ಲಿಂದ 1.15ಕ್ಕೆ ಶುರುವಾಗಿ ರಾತ್ರಿ 7.45ಕ್ಕೆ ಬೆಂಗಳೂರಿಗೆ ತಲುಪಲಿದೆ. ಇನ್ನು, ಬೆಂಗಳೂರು, ಧಾರವಾಡ ನಡುವೆ ವಂದೇ ಭಾರತ್ ಸಂಚಾರ ಆರಂಭಿಸಿರುವುದು ಹಲವರಿಗೆ ಖುಷಿ ತಂದಿದೆ. ಮಾರ್ಗ ಮಧ್ಯೆ ಬರುವ ವಿವಿಧ ನಿಲ್ದಾಣಗಳಲ್ಲಿಯು ಈ ರೈಲು ನಿಲ್ಲಿಸುವಂತೆ ಒತ್ತಾಯವು ಕೇಳಿಬಂದಿದೆ.


Click it and Unblock the Notifications