ದೇಶಾದ್ಯಂತ ಹೆಚ್ಚಾಯ್ತು ಸ್ವಂತ ವಾಹನ ಬಳಕೆ ಪ್ರಮಾಣ
ಗುಜರಾತ್ ರಾಜ್ಯದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುಜರಾತ್ನಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ ಎರಡಕ್ಕಿಂತ ಹೆಚ್ಚು ವಾಹನಗಳಿರುವುದೇ ಈ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ. ಗುಜರಾತ್ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 2.25 ವಾಹನಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಈ ಪ್ರಮಾಣವು ಭಾರತದಲ್ಲಿ ಮೂರನೇ ಅತಿ ಹೆಚ್ಚು. ಹಾಗಾದರೆ ಮೊದಲ ಎರಡು ಸ್ಥಾನದಲ್ಲಿರುವ ರಾಜ್ಯಗಳು ಯಾವುವು ಎಂಬ ಪ್ರಶ್ನೆ ಉದ್ಭವಿಸಬಹುದು. ಗೋವಾ ರಾಜ್ಯವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗೋವಾದಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 4.41 ವಾಹನಗಳಿವೆ. ಈ ಪಟ್ಟಿಯಲ್ಲಿ ದೆಹಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ.

ದೆಹಲಿಯಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 3.62 ವಾಹನಗಳಿವೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಮಾಹಿತಿಯ ಪ್ರಕಾರ, ಗುಜರಾತ್ ರಾಜ್ಯದಲ್ಲಿ 2.75 ಕೋಟಿ ನೋಂದಾಯಿತ ವಾಹನಗಳಿವೆ. ಗಮನಿಸಬೇಕಾದ ಸಂಗತಿಯೆಂದರೆ ಇದು ಕಳೆದ ಮಾರ್ಚ್ 31 ರಂದು ದೊರೆತ ಅಂಕಿ ಅಂಶವಾಗಿದೆ.

ಗುಜರಾತ್ನ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ವಾಹನಗಳಿವೆ ಎಂದು ತಿಳಿದು ಬಂದಿದೆ. ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವ ಬದಲು ಜನರು ತಮ್ಮ ಸ್ವಂತ ವಾಹನಗಳನ್ನು ಖರೀದಿಸುತ್ತಿದ್ದಾರೆ ಎಂಬುದು ಪರಿಣಿತರ ಅಭಿಪ್ರಾಯ.

ಇದೇ ವೇಳೆ ವಾಹನಗಳ ಸಂಖ್ಯೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಕುತೂಹಲಕಾರಿ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿದೆ. ಈ ಅಂಕಿ ಅಂಶಗಳ ಪ್ರಕಾರ, ಗುಜರಾತ್ ರಾಜ್ಯದಲ್ಲಿ ಪ್ರತಿ 1,000 ಜನರಿಗೆ ಸರಿ ಸುಮಾರು 436 ವಾಹನಗಳಿವೆ. ನೋಂದಾಯಿತ ವಾಹನಗಳ ಸಂಖ್ಯೆಯಲ್ಲಿ ಗುಜರಾತ್ ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಈ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯವು ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 3.95 ಕೋಟಿ ನೋಂದಾಯಿತ ವಾಹನಗಳಿವೆ. ಉತ್ತರ ಪ್ರದೇಶ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 3.83 ಕೋಟಿ ನೋಂದಾಯಿತ ವಾಹನಗಳಿವೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 3.36 ಕೋಟಿ ನೋಂದಾಯಿತ ವಾಹನಗಳಿವೆ.

ಭಾರತದಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳಲ್ಲಿ 49% ನಷ್ಟು ವಾಹನಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕ ರಾಜ್ಯಗಳಲ್ಲಿವೆ. ಅಂದರೆ ಭಾರತದ ಒಟ್ಟು ವಾಹನಗಳಲ್ಲಿ ಅರ್ಧದಷ್ಟು ವಾಹನಗಳು ಈ 5 ರಾಜ್ಯಗಳಲ್ಲಿವೆ. ವರದಿಗಳ ಪ್ರಕಾರ ಗುಜರಾತ್ ನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಹೆಚ್ಚು ಬಳಸುತ್ತಾರೆ.

ಇತರ ರಾಜ್ಯಗಳಲ್ಲಿಯೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಟ್ರೆಂಡ್ ಗುಜರಾತ್ ರಾಜ್ಯದಲ್ಲಿ ಅತಿ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಭಾರತದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯು ಸಂಚಾರ ದಟ್ಟಣೆಯಂತಹ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಸಾರ್ವಜನಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುವ ಬದಲು ಬಸ್, ರೈಲು ಹಾಗೂ ಮೆಟ್ರೋ ರೈಲಿನಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಸಿದರೆ, ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ಈಗ ಕರೋನಾ ವೈರಸ್ ಹರಡುವ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸಲು ಹಿಂಜರಿಯುತ್ತಿದ್ದಾರೆ.

ಸಾರ್ವಜನಿಕ ಸಾರಿಗೆಯಲ್ಲಿ ಅನೇಕ ಜನರೊಂದಿಗೆ ಪ್ರಯಾಣಿಸಬೇಕು. ಇದರಿಂದ ಕರೋನಾ ವೈರಸ್ ಸೋಂಕು ಹರಡ ಬಹುದು ಎಂಬುದು ಜನರಿಗಿರುವ ಭೀತಿ. ಈ ಭೀತಿಯಿಂದಾಗಿ ಸಾರ್ವಜನಿಕರು ಸಾರ್ವಜನಿಕ ಸಾರಿಗೆಯ ಬದಲು ತಮ್ಮ ಸ್ವಂತ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈಗ ಭಾರತದಲ್ಲಿ ವಾಹನಗಳ ಸಂಖ್ಯೆ ಹೆಚ್ಚಲು ಇದು ಒಂದು ಪ್ರಮುಖ ಕಾರಣವಾಗಿದೆ.

ಸರ್ಕಾರಗಳೂ ಸಹ ಕರೋನಾ ವೈರಸ್ ಹರಡ ಬಹುದು ಎಂಬ ಕಾರಣಕ್ಕೆ ಸಾರ್ವಜನಿಕ ಸಾರಿಗೆಯನ್ನು ಕಾಲ ಕಾಲಕ್ಕೆ ಸ್ಥಗಿತಗೊಳಿಸುತ್ತಿವೆ. ಇದರ ಜೊತೆಗೆ ಭಾರತದ ವಿವಿಧ ಭಾಗಗಳಲ್ಲಿ ರೈಲು ಸಂಚಾರನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಿಲ್ಲ ಎಂಬುದು ಗಮನಾರ್ಹ. ಕೆಲವೆಡೆ ಸಾರ್ವಜನಿಕ ಸಾರಿಗೆಗಳನ್ನು ಆರಂಭಿಸಿದ್ದರೂ ಸೀಮಿತ ಸಂಖ್ಯೆಯ ಪ್ರಯಾಣಿಕರ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಕರೋನಾ ವೈರಸ್ ಸಾಂಕ್ರಾಮಿಕದ ನಂತರ ದೇಶದಲ್ಲಿ ವಾಹನಗಳ ಮಾರಾಟ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಬಳಸಿದ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಪ್ರಮಾಣವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಖ್ಯಾತ ವಾಹನ ತಯಾರಕ ಕಂಪನಿಗಳು ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಉದ್ಯಮಕ್ಕೆ ಕಾಲಿಟ್ಟಿವೆ. Maruti Suzuki ಹಾಗೂ Mahindra and Mahindra ದಂತಹ ಕಂಪನಿಗಳು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಕ್ಕೆ ಮಳಿಗೆಗಳನ್ನು ತೆರೆದಿವೆ.

ಕರೋನಾ ವೈರಸ್ ಸಾಂಕ್ರಾಮಿಕದ ನಂತರ ಜನರು ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೈಕಲ್ ಗಳ ಮಾರಾಟ ಪ್ರಮಾಣವು ಸಹ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗಿದ್ದಾರೆ. ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಕ್ ಗಳ ಜೊತೆಯಲ್ಲಿ ಎಲೆಕ್ಟ್ರಿಕ್ ಸೈಕಲ್ ಗಳ ಮಾರಾಟವೂ ಸಹ ಹೆಚ್ಚಾಗಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications