ಅಮೃತ್ ಭಾರತ್ ಎಕ್ಸ್ಪ್ರೆಸ್ ವಿಡಿಯೋ ಹಂಚಿಕೊಂಡ ಸಚಿವ: ಅತ್ಯಾಧುನಿಕ ಸೌಕರ್ಯ.. ಖರ್ಚು ತುಂಬಾ ಕಡಿಮೆ!
ದೇಶದಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕ ಜಾಲವನ್ನು ಸುಧಾರಿಸಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದ್ದು, ಅದಕ್ಕೆ ಪ್ರೀಮಿಯಂ ಸೆಮಿ ಹೈ-ಸ್ವೀಡ್ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲುಗಳನ್ನು ಪರಿಚಯಿಸಿರುವುದೇ ಸಾಕ್ಷಿ. ಕೆಲವೇ ದಿನಗಳಲ್ಲಿ ಕಡಿಮೆ ಖರ್ಚಿನ ಅಮೃತ್ ಭಾರತ್ ಎಕ್ಸ್ಪ್ರೆಸ್ ಕೂಡ ಲೋಕಾರ್ಪಣೆಯಾಗಲಿದೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು, ಮಂಗಳವಾರ ತಮ್ಮ 'ಎಕ್ಸ್' ಖಾತೆಯಲ್ಲಿ ಶೀಘ್ರ ಪ್ರಾರಂಭವಾಗಲಿರುವ ಅಮೃತ್ ಭಾರತ್ ಎಕ್ಸ್ಪ್ರೆಸ್ (Amrit Bharat Express) ರೈಲನ್ನು ನವದೆಹಲಿ ನಿಲ್ದಾಣದಲ್ಲಿ ಪರಿಶೀಲಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಅಗ್ಗದ ಸ್ಲೀಪರ್ ಆವೃತ್ತಿ ಎಂದು ಬಣ್ಣಿಸಲಾಗಿದ್ದು, ಈ ರೈಲಿಗೆ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ವಿಡಿಯೋದಲ್ಲಿ ಸಚಿವ ಅಶ್ವಿನಿ ವೈಷ್ಣವ್, ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲಿನ ಲೋಕೋಪೈಲೆಟ್ ಕ್ಯಾಬಿನ್ ಪರಿಶೀಲಿಸುವುದನ್ನು ನೋಡಬಹುದು. ಆ ನಂತರ ಬೋಗಿಯ ಒಳಭಾಗವನ್ನು ಪ್ರವೇಶಿಸುವ ಸಚಿವರು, ಸೀಟುಗಳು ಹಾಗೂ ಶೌಚಾಲಯವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು. ಅಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, 'ಈ ರೈಲನ್ನು ಸುಧಾರಿತ ತಂತ್ರಜ್ಞಾನ ಬಳಸಿ ವಿನ್ಯಾಸಗೊಳಿಸಲಿದ್ದು, ವೇಗವಾಗಿ ಚಲಿಸುವುದರಿಂದ ದೂರದ ಮಾರ್ಗಗಳಲ್ಲಿ ಕನಿಷ್ಠ 2 ಗಂಟೆ ಸಮಯಾವಕಾಶ ಉಳಿಯುತ್ತದೆ' ಎಂದಿದ್ದಾರೆ.
'ಅಮೃತ್ ಭಾರತ್ ಎಕ್ಸ್ಪ್ರೆಸ್ ಪುಶ್-ಪುಲ್ (push-pull) ತಂತ್ರಜ್ಞಾನದಿಂದಾಗಿ ಉತ್ತಮ ವೇಗವರ್ಧನೆಯನ್ನು (Better Acceleration) ಹೊಂದಿದ್ದು, ಬೇಗನೇ ವೇಗವನ್ನು ಪಡೆಯುತ್ತದೆ. ಅಷ್ಟೇ ತ್ವರಿತವಾಗಿ ನಿಲ್ಲುತ್ತದೆ. ಇದರಿಂದಾಗಿ ರೈಲು ಮಾರ್ಗದ ತಿರುವು ಹಾಗೂ ಸೇತುವೆಗಳ ಮೇಲೆ ಸುಲಭವಾಗಿ ಚಲಿಸಲು ಸಾಧ್ಯವಾಗಲಿದೆ. ಪ್ರತಿ ಸೀಟ್ ಸಮೀಪ ಚಾರ್ಜಿಂಗ್ ಪಾಯಿಂಟ್, ಅಂಗವಿಕಲರಿಗಾಗಿ ವಿಶೇಷ ಶೌಚಾಲಯ, ಅಗಲವಾದ ಬಾಗಿಲು ಸೇರಿದಂತೆ ಅತ್ಯಾಧುನಿಕ ಸೌಕರ್ಯವನ್ನು ಪಡೆದಿದೆ' ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

'ಈ ರೈಲಿನ ಎಂಜಿನ್ಗಳಲ್ಲಿ ಸಂಪೂರ್ಣ ಹೊಸ ತಂತ್ರಜ್ಞಾನವನ್ನು ಉಪಯೋಗ ಮಾಡಲಾಗಿದೆ. ಕನಿಷ್ಠ ನೀರಿನ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ರೈಲು ಶೌಚಾಲಯಗಳ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳಲ್ಲಿ ಬಳಕೆ ಮಾಡಿರುವ ತಂತ್ರಜ್ಞಾನವನ್ನು ಭಾರತದಲ್ಲಿಯೇ (made in India) ಅಭಿವೃದ್ದಿಪಡಿಸಲಾಗಿದೆ' ಎಂದು ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.
ಹೊಸ ರೈಲು ನಿಲ್ದಾಣ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ.30ಕ್ಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಅಂದು ದೆಹಲಿ - ಅಯೋಧ್ಯೆ - ದರ್ಬಂಗಾ ಹಾಗೂ ಪಶ್ಚಿಮ ಬಂಗಾಳದ ಮಾಲ್ಡಾ - ಬೆಂಗಳೂರು ನಡುವೆ ಸಂಚರಿಸಲಿರುವ ಎರಡು ಅಮೃತ್ ಭಾರತ್ ಎಕ್ಸ್ಪ್ರೆಸ್ (Amrit Bharat Express) ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಈ ಅಮೃತ್ ಭಾರತ್ ರೈಲುಗಳನ್ನು ಈ ಹಿಂದೆ, ವಂದೇ ಸಾಧಾರಣ್ (Vande Sadharan) ಎಂದು ಕರೆಯಲಾಗುತ್ತಿತ್ತು. ಅಮೃತ್ ಭಾರತ್ ರೈಲುವೊಂದನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ರೂ.65 ಕೋಟಿ ಖರ್ಚು ಮಾಡುತ್ತಿದೆ ಎಂದು ವರದಿಯಾಗಿದೆ. ಈ ರೈಲಿನಲ್ಲಿ ಸುಮಾರು 1,800 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ಗರಿಷ್ಠ ವೇಗಮಿತಿಯನ್ನು ಗಂಟೆಗೆ 130 ಕಿಮೀ.ಗೆ ಸೀಮಿತಗೊಳಿಸಬಹುದು.
ಅಮೃತ್ ಭಾರತ್ ಎಕ್ಸ್ಪ್ರೆಸ್ ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಕೋಚ್ಗಳನ್ನು ಒಳಗೊಂಡಿದ್ದು, ಹಗಲು - ರಾತ್ರಿ ಸಂಚಾರಕ್ಕೆ ಉಪಯೋಗವಾಗುವಂತೆ ವಿನ್ಯಾಸ ಮಾಡಲಾಗಿದ್ದು, 22 ಕೋಚ್ಗಳನ್ನು ಹೊಂದಿರುವ ಈ ರೈಲು, 800 ಕಿಲೋಮೀಟರ್ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಬಲ್ಲದು. ನವೆಂಬರ್ 8ರಂದು ಅಹಮದಾಬಾದ್ - ಮುಂಬೈ ನಡುವೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆಸಿತ್ತು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications