ಗಿಡಮೂಲಿಕೆ ಪೆಟ್ರೋಲ್, ಡೀಸೆಲ್ ಉತ್ಪಾದನೆಗೆ ಮುಂದಾದ ರಾಮರ್ ಪಿಳ್ಳೈ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ಹೆಚ್ಚಿನ ತೆರಿಗೆಗಳಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿದೆ. ಈ ಕಾರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ವಾಹನ ಸವಾರರು ಹಲವಾರು ದಿನಗಳಿಂದ ಒತ್ತಾಯಿಸುತ್ತಿದ್ದಾರೆ.

ಆದರೆ ಕೇಂದ್ರ ಸರ್ಕಾರವು ವಾಹನ ಸವಾರರ ಈ ಬೇಡಿಕೆಗೆ ಮಣೆ ಹಾಕಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳಿಂದ ಬರುವ ಆದಾಯವನ್ನು ಸರ್ಕಾರಗಳು ಕಳೆದುಕೊಳ್ಳಲು ಬಯಸುತ್ತಿಲ್ಲವೆಂಬುದು ವಾಹನ ಸವಾರರ ಆರೋಪ. ವಾಹನ ಸವಾರರು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟೇ ದುಬಾರಿಯಾದರೂ ಬೇರೆ ದಾರಿ ಕಾಣದೇ ಖರೀದಿಸುತ್ತಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕಾರಣಕ್ಕೆ ವಾಹನ ಸವಾರರಿಗೆ ತಮಿಳುನಾಡಿನ ರಾಮರ್ ಪಿಳ್ಳೈ ನೆನಪಾಗುತ್ತಾರೆ. ಗಿಡಮೂಲಿಕೆಗಳಿಂದ ತಯಾರಾಗುವ ಪೆಟ್ರೋಲ್ ಬೆಲೆ ಕಡಿಮೆ ಎಂಬುದು ರಾಮರ್ ಪಿಳ್ಳೈರವರ ವಾದ. ಕೆಲವರು ರಾಮರ್ ಪಿಳ್ಳೈ ಅವರನ್ನು ಬೆಂಬಲಿಸುತ್ತಾರೆ.
MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಇನ್ನೂ ಕೆಲವರು ರಾಮರ್ ಪಿಳ್ಳೈ ಅವರ ಸಂಶೋಧನೆಯೇ ನಕಲಿ ಎಂದು ವಾದಿಸುತ್ತಾರೆ. ಒಟ್ಟಿನಲ್ಲಿ ಹಲವಾರು ವರ್ಷಗಳಿಂದ ರಾಮರ್ ಪಿಳ್ಳೈ ಹಾಗೂ ಅವರ ಗಿಡಮೂಲಿಕೆ ಪೆಟ್ರೋಲ್ ಡೀಸೆಲ್ ಸಂಶೋಧನೆ ಬಗ್ಗೆ ಹಲವಾರು ವಿವಾದಗಳು ಏರ್ಪಟ್ಟಿವೆ. ಈಗ ರಾಮರ್ ಪಿಳ್ಳೈರವರು ಹೊಸ ಮಾಹಿತಿಯನ್ನು ನೀಡಿದ್ದಾರೆ.

ಸೆಪ್ಟೆಂಬರ್ 4ರಂದು ಸುದ್ದಿಗಾರರ ಜೊತೆಗೆ ಮಾತನಾಡಿದ ರಾಮರ್ ಪಿಳ್ಳೈರವರು ಕೃಷಿ ತ್ಯಾಜ್ಯ, ತ್ಯಾಜ್ಯ ನೀರು ಹಾಗೂ ಗಿಡಮೂಲಿಕೆಗಳಿಂದ ಜೈವಿಕ ಪೆಟ್ರೋಲ್, ಜೈವಿಕ ಡೀಸೆಲ್ ಹಾಗೂ ಜೈವಿಕ ಅಡುಗೆ ಅನಿಲ ಉತ್ಪಾದನೆಯನ್ನು ಸೆಪ್ಟೆಂಬರ್ 10ರಿಂದ ಆರಂಭಿಸಲಾಗುವುದು ಎಂದು ಹೇಳಿದರು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕೇರಳ ಸರ್ಕಾರವು ಗಿಡಮೂಲಿಕೆಗಳಿಂದ ಪೆಟ್ರೋಲ್ ಉತ್ಪಾದಿಸಲು ನಮಗೆ ಅನುಮತಿ ನೀಡಿದೆ. ಕೇರಳ ರಾಜ್ಯದ ಮೂರು ಭಾಗಗಳಲ್ಲಿ ಸುಮಾರು 1,600 ಎಕರೆ ಭೂಮಿಯನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಗಿಡಮೂಲಿಕೆಗಳ ಪೆಟ್ರೋಲ್ಗೆ ಸಂಬಂಧಿಸಿದಂತೆ ನನ್ನ ಮೇಲೆ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು. ಆದರೆ ನ್ಯಾಯಾಲಯವು ನನ್ನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ. ನನ್ನನ್ನು ಬಿಡುಗಡೆಗೊಳಿಸುವಾಗ ನನ್ನ ಮೇಲಿನ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ನಾನು ಸಂಶೋಧಿಸಿರುವ ಗಿಡಮೂಲಿಕೆಗಳ ಪೆಟ್ರೋಲ್ನಲ್ಲಿ ಯಾವುದೇ ರಾಸಾಯನಿಕಗಳಿಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ್ದೇನೆ. ಆದರೂ ಕೆಲವರು ಈ ಗಿಡಮೂಲಿಕೆ ಪೆಟ್ರೋಲ್ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಗಿಡಮೂಲಿಕೆ ಪೆಟ್ರೋಲ್ ಉತ್ಪಾದನೆಯನ್ನು ಆರಂಭಿಸಲು ಕೇರಳ ಸರ್ಕಾರವು ನಮಗೆ ಅವಕಾಶ ನೀಡಿದೆ ಎಂದು ರಾಮರ್ ಪಿಳ್ಳೈ ಹೇಳಿದ್ದಾರೆ.

ಕೇರಳ ರಾಜ್ಯದಲ್ಲಿ ಉತ್ಪಾದನೆಯಾಗುವ ಗಿಡಮೂಲಿಕೆ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಪ್ರತಿ ಲೀಟರಿಗೆ ರೂ.39ರಂತೆ ಮಾರಾಟ ಮಾಡಲಾಗುವುದು. ಇದರಲ್ಲಿ ತೆರಿಗೆಯೂ ಸಹ ಸೇರಿದೆ. ಇದರ ಜೊತೆಗೆ 16 ಲೀಟರ್ ಬಯೋ ಗ್ಯಾಸ್ ಅನ್ನು ರೂ.250ಗಳಿಗೆ ಮಾರಾಟ ಮಾಡಲು ನಿರ್ಧರಿಸಿದ್ದೇವೆ. ತಮಿಳುನಾಡಿನಲ್ಲಿ ಗಿಡಮೂಲಿಕೆ ಪೆಟ್ರೋಲ್ ಹಾಗೂ ಡೀಸೆಲ್ ತಯಾರಿಸಲು ಅಲ್ಲಿನ ಸರ್ಕಾರದ ಅನುಮತಿಗೆ ಕಾಯಲಾಗುತ್ತಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ತಮಿಳುನಾಡಿನಲ್ಲಿ ತಯಾರಾಗುವ ಒಂದು ಲೀಟರ್ ಗಿಡಮೂಲಿಕೆ ಪೆಟ್ರೋಲ್ ಅನ್ನು ರೂ.20 ರೂಪಾಯಿಗಳಿಗೆ ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದರು. ವಾಹನ ಸವಾರರು ಪೆಟ್ರೋಲ್, ಡೀಸೆಲ್ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದರೂ ರಾಮರ್ ಪಿಳ್ಳೈರವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲ ಸಲವಲ್ಲ ಎಂಬುದನ್ನು ಗಮನಿಸಬೇಕು.
ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.


Click it and Unblock the Notifications