ಪೆಟ್ರೋಲ್, ಡೀಸೆಲ್ ಇಂಧನಗಳಿಗೆ ಪರ್ಯಾಯ ಇಂಧನ ಒದಗಿಸಲಿದೆ ರಾವ್ಮತ್ ಇಂಡಸ್ಟ್ರೀಸ್
ರಾವ್ಮತ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿಯು ವೈವಿಧ್ಯಮಯ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ರಾವ್ಮತ್ ಕಂಪನಿಯು ಬಯೋ ಸಿಎನ್ಜಿ ಹಾಗೂ ನೈಸರ್ಗಿಕ ಅನಿಲ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ಕಂಪನಿಯು ಈಗ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುವಂತಹ ವಾಹನವನ್ನು ಉತ್ಪಾದಿಸಿದೆ. ಕಂಪನಿಯು ಮಾಡಿದ ಪ್ರಯತ್ನವನ್ನು ಆಧರಿಸಿ ಈ ವಾಹನವನ್ನು ರಚಿಸಲಾಗಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳಿಂದ ಪರಿಸರ ವಾಯುಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಇಂಧನಗಳಿಗೆ ಪರ್ಯಾಯವಾಗಿರುವ ಇಂಧನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇವುಗಳಲ್ಲಿ ನೈಸರ್ಗಿಕ ಅನಿಲ ಹಾಗೂ ಜೈವಿಕ ಅನಿಲಗಳು ಸಹ ಸೇರಿವೆ. ಪೆಟ್ರೋಲ್, ಡೀಸೆಲ್ ಇಂಧನಗಳಿಗೆ ಹೋಲಿಸಿದರೆ ಈ ಇಂಧನಗಳು ಕಡಿಮೆ ವಾಯು ಮಾಲಿನ್ಯ ಉಂಟು ಮಾಡುತ್ತವೆ.

ಕಂಪನಿಯು ಈ ವರ್ಷದ ಫೆಬ್ರವರಿ 12 ರಂದು ತನ್ನ ಮೊದಲ ಸಿಎನ್ಜಿ ಚಾಲಿತ ಟ್ರಾಕ್ಟರ್ ಅನ್ನು ಬಿಡುಗಡೆಗೊಳಿಸಿತು. ಇದು ಭಾರತದ ಮೊದಲ ಸಿಎನ್ಜಿ ಟ್ರಾಕ್ಟರ್ ಆಗಿದೆ. ಈ ಟ್ರಾಕ್ಟರ್ ಅನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಡುಗಡೆಗೊಳಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯ ಮೋತಿಲಾಲ್ ನೆಹರು ಅರಮನೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಎನ್ಜಿ ಟ್ರ್ಯಾಕ್ಟರ್ ಬಿಡುಗಡೆ ಸಮಾರಂಭದಲ್ಲಿ ನರೇಂದ್ರ ಸಿಂಗ್ ತೋಮರ್, ಧರ್ಮೇಂದ್ರ ಪ್ರಧಾನ್, ಜನರಲ್ ವಿಕೆ ಸಿಂಗ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.

ಜೈವಿಕ ಅನಿಲವು ನೈಸರ್ಗಿಕ ತ್ಯಾಜ್ಯಗಳಿಂದ ಉತ್ಪತ್ತಿಯಾಗುವ ಅನಿಲವಾಗಿದೆ. ಈ ಅನಿಲವನ್ನು ಕೃಷಿ ತ್ಯಾಜ್ಯ, ಆಹಾರ ತ್ಯಾಜ್ಯ, ಕಾಂಪೋಸ್ಟ್, ಪುರಸಭೆ ತ್ಯಾಜ್ಯ, ಸಸ್ಯಗಳ ತ್ಯಾಜ್ಯ ಹಾಗೂ ಒಳಚರಂಡಿಗಳ ತ್ಯಾಜ್ಯದಿಂದ ತಯಾರಿಸಲಾಗುತ್ತದೆ.

ರಾವ್ಮತ್ ಮೋಟಾರ್ಸ್ ಈ ಅನಿಲವನ್ನು ಉತ್ಪಾದಿಸುತ್ತಿದೆ. ಈ ಅನಿಲವನ್ನು ವಾಹನಗಳಲ್ಲಿ ಮಾತ್ರವಲ್ಲದೆ ರೆಸ್ಟೋರೆಂಟ್ಗಳಲ್ಲಿ ಹಾಗೂ ಕಾರ್ಖಾನೆಗಳಲ್ಲಿಯೂ (ವೆಲ್ಡಿಂಗ್ ಕಾರ್ಯಾಗಾರಗಳು) ಬಳಸಲಾಗುತ್ತದೆ.

ಇತ್ತೀಚೆಗೆ ಭಾರತದಲ್ಲಿ ಸಿಎನ್ಜಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಿಎನ್ಜಿ ವಾಹನಗಳು ಕಡಿಮೆ ಮಾಲಿನ್ಯವನ್ನು ಹೊರ ಸೂಸುವುದರ ಜೊತೆಗೆ ಹೆಚ್ಚು ಇಂಧನ ಆರ್ಥಿಕತೆಯನ್ನು ಹೊಂದಿರುತ್ತವೆ.

ಈ ಕಾರಣಕ್ಕಾಗಿಯೇ ಸಿಎನ್ಜಿ ವಾಹನಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಬಯೋ ಸಿಎನ್ಜಿ ವಾಹನಗಳನ್ನು ಹೆಚ್ಚು ಬಳಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಜೊತೆಗೆ ವಿದೇಶಿ ವಿನಿಮಯದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಇಟಿ ಆಟೋ ವರದಿ ಮಾಡಿದೆ.


Click it and Unblock the Notifications