ಬೆಂಗಳೂರು: ಕಾರ್ಗಿಲ್ ಯುದ್ಧದ ಸವಿನೆನಪಿಗಾಗಿ ಬೈಕ್ ರ್ಯಾಲಿ, ಮೈನವಿರೇಳಿಸಿದ ಬಿಎಸ್ಎಫ್ ಯೋಧರ ಸಾಹಸ
ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಬೆಂಗಳೂರಿನಲ್ಲಿ ಭಾನುವಾರ ಸೈನಿಕರೊಂದಿಗೆ ಸವಾರಿ (Ride With Soldiers) ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು. ನೂರಾರು ರೈಡರ್ ಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ವೇಳೆ, ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿತು ಹಾಗೂ ಬದುಕುಳಿದವ ವೀರ ಸೈನಿಕರಿಗೆ ಗೌರವಿಸಲಾಯಿತು.
ಸೈನಿಕರೊಂದಿಗೆ ಸವಾರಿ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ಶೀ ಫಾರ್ ಸೊಸೈಟಿ, ಮಹಿಳಾ ಬೈಕರ್ಸ್ ಎನ್ಜಿಒ ಮತ್ತು ಎ7 ಎಂಟರ್ಟೈನ್ಮೆಂಟ್ ಜಂಟಿಯಾಗಿ ಏರ್ಪಡಿಸಿದ್ದವು. ಬೈಕ್ ರ್ಯಾಲಿಯನ್ನು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಉದ್ಘಾಟಿಸಿದರು. ರ್ಯಾಲಿಯಲ್ಲಿ ಬಿಎಸ್ಎಫ್ ಯೋಧರು, ಬಿಎಸ್ಎಫ್ ಟೊರ್ನಾಡೋಸ್, ನಿವೃತ್ತ ಯೋಧರು ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ 6 ಗಂಟೆಗೆ ಸಮಾರಂಭ ಶುರುವಾಯಿತು. ಅಲ್ಲಿ ನೂರಾರರು ಸಂಖ್ಯೆಯಲ್ಲಿ ಬೈಕ್ ರೈಡರ್ ಗಳು ಜಮಾಯಿಸಿದ್ದರು. 7.30ಕ್ಕೆ ಬ್ರಿಗೇಡಿಯರ್ ರಾಜೇಶ್ ಪಣಿಕ್ಕರ್ (ವಿಎಸ್ಎಂ) ಬೈಕ್ ರ್ಯಾಲಿ ಫ್ಲಾಗ್ ಆಫ್ ಮಾಡಿದರು. ವಿಜಯನಗರದ ಬಿಜಿಎಸ್ ಮೈದಾನದಲ್ಲಿ ರ್ಯಾಲಿ ಕೊನೆಗೊಂಡಿತು. ಇದೇ ವೇಳೆಯಲ್ಲಿ ವಿಶೇಷ ಉಡುಗೆ ತೊಟ್ಟು ಬೈಕ್ನೊಂದಿಗೆ ಬಂದ ಸವಾರನೊಬ್ಬ ನೆರೆದಿದ್ದವರರನ್ನು ತನ್ನತ್ತ ಸೆಳೆದರು.
ಕಾರ್ಯಕ್ರಮದಲ್ಲಿ 1,000 ಅಡಿ ಎತ್ತರದ ಬೃಹತ್ ಗಾತ್ರದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಲಾಯಿತು. ಕಾರ್ಗಿಲ್ ವೀರ ಯೋಧರಾದ ನವೀನ್ ನಾಗಪ್ಪ ಮತ್ತು ಕರ್ನಲ್ ಉಮ್ಮನ್ ಜಾಕೋಬ್ ಸೇರಿದಂತೆ 300 ವೀರ ನಾರಿಗಳೊಂದಿಗೆ ಸನ್ಮಾನಿಸಲಾಯಿತು. ಜೊತೆಗೆ ಅಮರ್ ಜವಾನ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಿಎಸ್ಎಫ್ ಟೊರ್ನಾಡೋಸ್ ತಂಡವು ವಿವಿಧ ಮೋಟಾರ್ ಸೈಕಲ್ ಸ್ಟಂಟ್ ಪ್ರದರ್ಶಿಸಿ, ನೆರೆದಿದ್ದ ಪ್ರೇಕ್ಷಕರನ್ನು ಆಕರ್ಷಿಸಿತು.

'ಈ ಸಮಾರಂಭವನ್ನು ಕಾರ್ಗಿಲ್ ವಿಜಯ್ ದಿವಸ್ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು, ದೇಶಭಕ್ತಿ ಮತ್ತು ಏಕತೆಯನ್ನು ಸಾರಲು ಆಯೋಜಿಸಲಾಗುತ್ತದೆ. ಜೊತೆಯಲ್ಲಿಯೇ ಕಾರ್ಗಿಲ್ ಯುದ್ಧದ ವೇಳೆ ದೇಶಕ್ಕಾಗಿ, ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ. ಅಲ್ಲದೆ, ಬದುಕುಳಿದ ಸೈನಿಕರನ್ನು ಹಾಗೂ ವೀರನಾರಿಯರನ್ನು ಗೌರವಿಸಲಾಗುತ್ತದೆ' ಎಂದು ಆಯೋಜಕರು ತಿಳಿಸಿದ್ದಾರೆ.
ಇನ್ನು, ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಸಹಭಾಗಿತ್ವದಲ್ಲಿ ಭಾರತೀಯ ಸೇನೆಯ ನಾಗಾ ರೆಜಿಮೆಂಟ್, ಜುಲೈ 2ರಂದು ನಾಗಾಲ್ಯಾಂಡ್ನ ಕೊಹಿಮಾದಿಂದ ರೈಡ್ ಆರಂಭಿಸಿತ್ತು. ಅಧಿಕಾರಿಗಳು ಮತ್ತು ಸೈನಿಕರನ್ನು ಒಳಗೊಂಡ 24 ಸವಾರರ ತಂಡ ರೈಡ್ ಉದ್ದಕ್ಕೂ ದೇಶಭಕ್ತಿ ಮತ್ತು ಏಕತೆಯನ್ನು ಸಾರಿತು. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು 3,620 ಕಿಲೋಮೀಟರ್ ಬೈಕ್ ರೈಡ್ ನಡೆಸಿತ್ತು.

ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಜುಲೈ 26 ರಂದು ಈ ರೈಡ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ನಾಗಾಲ್ಯಾಂಡ್ನ ಕೊಹಿಮಾ ದಿಮಾಪುರ್, ಗುವಾಹಟಿ, ಸಿಲಿಗುರಿ, ದಾನಪುರ, ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಡೆಹ್ರಾಡೂನ್ ಹಾಗೂ ಕಾರ್ಗಿಲ್ ಜಿಲ್ಲೆಯ ದ್ರಾಸ್ನಲ್ಲಿ ಸೇರಿದಂತೆ ದೇಶದ ಪ್ರಮುಖ ನಗರಗಳ ಮೂಲಕ ಈ ರೈಡ್ ಸಾಗಿದ್ದು ವಿಶೇಷವಾಗಿತ್ತು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications