ಆಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟ ರಾಯಲ್ ಎನ್ಫೀಲ್ಡ್ ಸವಾರ
ಆಂಬ್ಯುಲೆನ್ಸ್ನಂತಹ ತುರ್ತು ವಾಹನಗಳಲ್ಲಿ ಜೋರಾಗಿ ಶಬ್ದ ಬರುವಂತಹ ಸೈರನ್ಗಳನ್ನು ಅಳವಡಿಸಲಾಗಿದೆ. ಈ ಸೈರನ್ ಶಬ್ದ ಕೇಳಿದ ನಂತರ ಬೇರೆ ವಾಹನಗಳು ಆಂಬ್ಯುಲೆನ್ಸ್ ಗಳಿಗೆ ದಾರಿ ಕೊಡಲಿ ಎಂಬುದು ಇದರ ಹಿಂದಿರುವ ಉದ್ದೇಶ. ಆದರೆ ಭಾರತದಲ್ಲಿ ಎಷ್ಟೇ ಜೋರಾಗಿ ಶಬ್ದ ಮಾಡಿದರೂ, ಆಂಬ್ಯುಲೆನ್ಸ್ಗಳಂತಹ ತುರ್ತು ವಾಹನಗಳು ಮುಂದೆ ಹೋಗುವುದು ಅಷ್ಟು ಸುಲಭವಲ್ಲ.

ಆಂಬ್ಯುಲೆನ್ಸ್ಗಳ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡದೇ, ಅನೇಕ ರೋಗಿಗಳು ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರಾಣ ಬಿಟ್ಟ ಹಲವಾರು ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ, ಕೆಲವು ಉತ್ತಮ ನಾಗರಿಕರು ಮುಂದೆ ಬಂದು ಆಂಬ್ಯುಲೆನ್ಸ್ ಗಳಿಗೆ ದಾರಿ ಮಾಡಿಕೊಡುತ್ತಾರೆ. ಆಂಬ್ಯುಲೆನ್ಸ್ ಗಳಲ್ಲಿರುವವರ ಪ್ರಾಣ ಉಳಿಸುತ್ತಾರೆ.

ಎನ್ಸಿಆರ್ ಬೈಕರ್ಜ್ ಅಪ್ಲೋಡ್ ಮಾಡಿರುವ ವೀಡಿಯೊದಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಈ ವೀಡಿಯೊದಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಸವಾರನು ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡುತ್ತಾನೆ.

ಈ ವೀಡಿಯೊದಲ್ಲಿರುವ ಘಟನೆಯು ದೆಹಲಿಯಲ್ಲಿ ನಡೆದಿದೆ. ದೆಹಲಿಯು ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಹೊಂದಿರುವ ನಗರವಾಗಿದೆ. ಅತಿ ಹೆಚ್ಚು ವಾಹನಗಳ ಸಂಖ್ಯೆಯಿಂದಾಗಿ ವಾಹನ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ಸಂಗತಿಯಾಗಿದೆ.

ರಾಯಲ್ ಎನ್ಫೀಲ್ಡ್ ಬೈಕ್ ಸವಾರನು ಆಂಬ್ಯುಲೆನ್ಸ್ ಅನ್ನು ದಾಟುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಆತನು ಇತರ ನಾಲ್ಕು ಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ತಮ್ಮ ವಾಹನವನ್ನು ಒಂದು ಬದಿಗೆ ಸರಿಸಿ, ಆಂಬುಲೆನ್ಸ್ಗೆ ದಾರಿ ಮಾಡಿಕೊಡಲು ಕೇಳಿಕೊಳ್ಳುತ್ತಾನೆ.

ವೀಡಿಯೊದಲ್ಲಿ ತೋರಿಸಿರುವ ದಟ್ಟಣೆಯ ಸ್ಥಿತಿಯಂತೆ, ಆಂಬ್ಯುಲೆನ್ಸ್ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ತೆವಳಬೇಕಾಗಿತ್ತು. ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ರೋಗಿಗಳಿಗೆ, ಸಮಯವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದರೆ ಅವರು ವೈದ್ಯಕೀಯ ನೆರವು ಪಡೆಯುತ್ತಾರೆ. ಇಲ್ಲದಿದ್ದರೆ ಬದುಕುಳಿಯುವ ಸಾಧ್ಯತೆಗಳು ಕಡಿಮೆ.

ಆದ್ದರಿಂದ, ಈ ವೀಡಿಯೊದಲ್ಲಿರುವ ರಾಯಲ್ ಎನ್ಫೀಲ್ಡ್ ಬೈಕ್ ಸವಾರ, ತುರ್ತು ವೈದ್ಯಕೀಯ ನೆರವಿನ ಅಗತ್ಯವಿರುವವರಿಗೆ ನೆರವು ನೀಡಿ ಇನ್ನೊಬ್ಬರ ಜೀವ ಉಳಿಸಿದ್ದಾರೆ. ಅವರ ಪ್ರಯತ್ನದಿಂದಾಗಿ, ಆಂಬ್ಯುಲೆನ್ಸ್ ಸರಾಗವಾಗಿ ಮುಂದೆ ಚಲಿಸಲು ಸಾಧ್ಯವಾಯಿತು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಜನರು ಸೈರನ್ ಹಾಗೂ ಬೀಕನ್ಗಳನ್ನು ಆನ್ ಮಾಡಿರುವ ಆಂಬ್ಯುಲೆನ್ಸ್, ಪೊಲೀಸ್ ಕಾರು ಹಾಗೂ ಅಗ್ನಿಶಾಮಕ ಎಂಜಿನ್ಗಳಂತಹ ತುರ್ತು ಸೇವಾ ವಾಹನಗಳಿಗೆ ದಾರಿ ಮಾಡಿಕೊಡುತ್ತಾರೆ.

ಮೂಲಭೂತವಾಗಿ, ಅಂತಹ ವಾಹನಗಳು ಸೈರನ್ ಹಾಗೂ ಬೀಕನ್ಗಳನ್ನು ಹೊಂದಿರುವುದೇ, ತುರ್ತು ಪರಿಸ್ಥಿತಿಯ ಬಗ್ಗೆ ತಿಳಿಸಲು. ಆಂಬ್ಯುಲೆನ್ಸ್ ಗಳೂ ಸಹ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರೆ ಮಾತ್ರ ಅದರ ಬೀಕನ್ ಹಾಗೂ ಸೈರನ್ ಗಳನ್ನು ಶಬ್ದ ಮಾಡುತ್ತವೆ.

ಕೇರಳ ರಾಜ್ಯಕ್ಕೆ ಸಂಬಂಧಿಸಿದ, ಹಲವಾರು ವೀಡಿಯೊಗಳು ಈ ಹಿಂದೆ ಬಿಡುಗಡೆಯಾಗಿದ್ದವು. ಆ ವೀಡಿಯೊಗಳಲ್ಲಿ ಆಂಬ್ಯುಲೆನ್ಸ್ಗಳು ಸಂಚಾರ ದಟ್ಟಣೆಯ ರಸ್ತೆಗಳಲ್ಲಿ ಸುಲಭವಾಗಿ ಚಲಿಸುವುದನ್ನು ನೋಡಿದ್ದೇವೆ. ಕೆಲವು ವರ್ಷಗಳ ಹಿಂದೆ, ವೀಡಿಯೋವೊಂದು ಅನೇಕರ ಗಮನ ಸೆಳೆದಿತ್ತು.

ಆ ವೀಡಿಯೊದಲ್ಲಿ ಕೇರಳದ ಜನರು ಹಬ್ಬದ ಆಚರಣೆಯಲ್ಲಿದ್ದರೂ ಸೈರನ್ ಕೇಳಿದ ಕೂಡಲೇ ಆಂಬುಲೆನ್ಸ್ಗಳಿಗೆ ಹೇಗೆ ದಾರಿ ಮಾಡಿಕೊಡುತ್ತಾರೆ ಎಂಬುದನ್ನು ತೋರಿಸಲಾಗಿತ್ತು. ಹೆಚ್ಚಿನ ಸಂಖ್ಯೆಯ ಜನರು ಸಂಚಾರದ ಬಗ್ಗೆ ಅರಿವು ಮೂಡಿಸುತ್ತಿರುವುದರಿಂದ ದೇಶಾದ್ಯಂತ ಈಗ ಸನ್ನಿವೇಶವು ಬದಲಾಗುತ್ತಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಪೊಲೀಸ್ ಕಾರು, ಆಂಬ್ಯುಲೆನ್ಸ್ ಅಥವಾ ಅಗ್ನಿಶಾಮಕದಂತಹ ತುರ್ತು ವಾಹನಗಳಿಗೆ ಅಡ್ಡಿ ಪಡಿಸುವುದು ಕಾನೂನು ಬಾಹಿರವಾಗಿದ್ದು, ಅಪರಾಧಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಬಹುದು.

ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಡಿ, ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳದಂತಹ ತುರ್ತು ವಾಹನಗಳಿಗೆ ದಾರಿ ನೀಡದ ವಾಹನ ಸವಾರರಿಗೆ ರೂ.10,000 ದಂಡ ವಿಧಿಸಲಾಗುತ್ತದೆ.


Click it and Unblock the Notifications