ಪೊಲೀಸರಿಗೆ ಸಿಕ್ಕಿಬಿದ್ದ ಯುವತಿ: ತಿಳಿಯದೆ ಮಾಡಿದ್ರು ವಿನಮ್ರತೆ ಮುಖ್ಯ: ಸವಾಲೆಸೆದು ಜೈಲುಪಾಲು!
ಭಾರತದಲ್ಲಿ ಅಂತರಾಷ್ಟ್ರೀಯ ಮಟ್ಟದ ಎಕ್ಸ್ಪ್ರೆಸ್ವೇಗಳು ನಿರ್ಮಾಣಗೊಳ್ಳುತ್ತಿವೆ, ಹಲವೆಡೆ ಸಂಚಾರಕ್ಕೆ ಮುಕ್ತವಾಗಿವೆ. ಇಂತಹ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧವಿರುತ್ತದೆ. ಕೇವಲ ಇವು ಮಾತ್ರವಲ್ಲ ಈ ಹಿಂದೆಯೇ ನಿರ್ಮಿಸಲಾಗಿರುವ ಭಾರತದಲ್ಲಿನ ಕೆಲವು ಎಕ್ಸ್ಪ್ರೆಸ್ವೇಗಳು ಮತ್ತು ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧವಿದೆ. ಇದನ್ನು ತಿಳಿಯದೇ ಪೊಲೀಸರ ಅಥಿತಿಯಾದ ಯುವತಿಯ ವಿಡಿಯೋ ವೈರಲ್ ಆಗಿದೆ.
ಏಕೆ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂಬುದನ್ನು ಮೊದಲು ತಿಳಿಯೋಣ. ಎಕ್ಸ್ಪ್ರೆಸ್ವೇಗಳಲ್ಲಿ ಕಾರುಗಳು, ಬೃಹತ್ ಟ್ರಕ್ಗಳು ಹೆಚ್ಚಿನ ವೇಗದಲ್ಲಿ ಬರುತ್ತವೆ. ಆದರೆ ದ್ವಿಚಕ್ರ ವಾಹನಗಳು ನಿಧಾನವಾಗಿರುತ್ತವೆ, ಈ ಕಾರಣದಿಂದಾಗಿ ದ್ವಿಚಕ್ರ ವಾಹನಗಳು ವೇಗದಲ್ಲಿರುವ ಇತರರಿಗೆ ಹಾನಿ ಉಂಟುಮಾಡುವ ಸಂಭವಗಳು ಹೆಚ್ಚಾಗಿರುವುದರಿಂದ ನಿಷೇಧಿಸಲಾಗಿದೆ. ಈಗ ನಾವು ಹೇಳಲು ಹೊರಟಿರುವ ಘಟನೆ ಮುಂಬೈನಲ್ಲಿ ನಡಿದಿದೆ.

ಮುಂಬೈನಲ್ಲಿನ ಬಾಂದ್ರಾ-ವರ್ಲಿ ಸೀ ಲಿಂಕ್ ರಸ್ತೆಯು ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ನಿಷೇಧಿಸಿರುವ ಸೇತುವೆಗಳಲ್ಲಿ ಒಂದಾಗಿದೆ. ಇದು ಮುಂಬೈ ನಗರದಲ್ಲಿನ ಸಮುದ್ರದ ಮೇಲಿರುವ ಸೇತುವೆಯಾಗಿದೆ. ಇಲ್ಲಿ ಬೈಕ್, ಸ್ಕೂಟರ್ ನಂತಹ ದ್ವಿಚಕ್ರ ವಾಹನಗಳನ್ನು ನಿರ್ಬಂಧಿಸಲಾಗಿದೆ. ಆದ್ರೆ ಕೆಲ ದಿನಗಳ ಹಿಂದೆ ಯುವತಿಯೊಬ್ಬರು ಈ ವಿಷಯ ತಿಳಿಯದೇ ದ್ವಿಚಕ್ರ ವಾಹನದಲ್ಲಿ ಈ ಸೇತುವೆ ಮೇಲೆ ಬಂದಿದ್ದರು.
ಏಕೆಂದರೆ ಈಕೆ ಹೊರರಾಜ್ಯದಿಂದ ಬಂದಿದ್ದ ಕಾರಣ ರಸ್ತೆಗೆ ನಿರ್ಬಂಧವಿರುವುದು ತಿಳಿದಿರಲಿಲ್ಲ. ಮಧ್ಯಪ್ರದೇಶ ರಾಜ್ಯದ 26 ವರ್ಷದ ಯುವತಿ ನುಬುರ್ ಪಟೇಲ್ ಮುಂಬೈನಲ್ಲಿ ನೆಲೆಸಿರುವ ತನ್ನ ಸಹೋದರನನ್ನು ಭೇಟಿಯಾಗಲು ಬಂದಿದ್ದರು ಎಂದು ತಿಳಿದುಬಂದಿದೆ. ಅಣ್ಣನ ಮನೆಗೆ ಹೋಗುವ ಮಾರ್ಗಮಧ್ಯದಲ್ಲಿ ಸಿಗುವ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಸೇತುವೆಯ ಮೇಲೆ ದ್ವಿಚಕ್ರ ವಾಹನದಲ್ಲಿ ಎಂಟ್ರಿಯಾಗಿದ್ದಾರೆ.

ಸೇತುವೆಯ ಆರಂಭದಲ್ಲೇ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಬರೆದಿರುವುದನ್ನು ಗಮನಿಸದೇ, ನುಬುರ್ ಪಟೇಲ್ ತಮ್ಮ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸೇತುವೆ ಏರಿದ್ದರು. ಇದನ್ನು ಕಂಡು ಸುತ್ತಮುತ್ತಲ ಚಾಲಕರು ವಿಚಿತ್ರವಾಗಿ ನೋಡಿದ್ದಾರೆ. ಮುಂದೆ ಸಾಗುತ್ತಿದ್ದಾಗ ಇವರನ್ನು ಗಮನಿಸಿದ ಮುಂಬೈ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಡೆದು ವಿಚಾರಣೆ ನಡೆಸಿದ್ದಾರೆ.
ಆಗ ನುಬುರ್ ಪಟೇಲ್ ಅವರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮಾತು ಮಾತು ಬೆಳೆದ ಕಾರಣ ಜಗಳವಾಗಿದೆ. ಮುಂಬೈ ಟ್ರಾಫಿಕ್ ಪೊಲೀಸರು ನುಬುರ್ ಪಟೇಲ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಅವರ ರಾಯಲ್ ಎನ್ಫೀಲ್ಡ್ ಬೈಕ್ ಕೂಡ ಜಪ್ತಿ ಮಾಡಲಾಗಿದೆ. ಇದಲ್ಲದೇ ನುಬುರ್ ಪಟೇಲ್ ಬಳಿ ಬಂದೂಕಿನಂಥ ವಸ್ತುವೂ ಇತ್ತು. ಇದನ್ನು ನೋಡಿದ ಸಂಚಾರಿ ಪೊಲೀಸ್ ಅಧಿಕಾರಿಗಳು ಬೆಚ್ಚಿಬಿದ್ದರು.

ಆದರೆ ಅದು ಬಂದೂಕಲ್ಲ, ಬದಲಿಗೆ ಲೈಟರ್ ಆಗಿತ್ತು. ಅದನ್ನೂ ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಮುಂಬೈ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ನುಬುರ್ ಪಟೇಲ್ ಜಗಳವಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ವಾದದಿಂದ ಆ ಪ್ರದೇಶದಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು. ತಿಳಿಯದೇ ಮಾಡಿದ ತಪ್ಪಾದರು ನಿಯಮ ಉಲ್ಲಂಘನೆಯಾದ್ದರಿಂದ ಕಾನೂನು ಕ್ರಮ ಎದುರಿಸಲೇಬೇಕು.
ಕಾನೂನು ಅಡಿಯಲ್ಲಿ ಎಲ್ಲರು ಒಂದೇ ಆಗಿರುವುದರಿಂದ ರಸ್ತೆಯಲ್ಲಿ ಯಾರಿಗೂ ತೊಂದರೆಯಾಗದಂತೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ರಸ್ತೆ ಅಪಘಾತಗಳು ಮತ್ತು ಸಂಚಾರ ದಟ್ಟಣೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅದರಲ್ಲೂ ಹೊಸ ನಗರಗಳಿಗೆ ನಾವು ಭೇಟಿ ನೀಡಿದಾಗ ನಿಯಮಗಳನ್ನು ಎಚ್ಚರಿಕೆಯಿಂದ ಪಾಲನೆ ಮಾಡುವುದು ಅತ್ಯಗತ್ಯವಾಗಿರುತ್ತದೆ.
ಪರಿಚಯವಿಲ್ಲದ ಹೊಸ ಸ್ಥಳಗಳಿಗೆ ಭೇಟಿ ನೀಡಿದಾಗ ಮೊದಲು ಚಾಲನೆ ಮಾಡಲು ಅನುಮತಿಸಲಾಗುವುದಿಲ್ಲವೇ? ಏಕಮುಖ ರಸ್ತೆಗಳು ಯಾವುವು? ಅಂತಹ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೇ ವಾಹನವನ್ನು ಚಾಲನೆ ಮಾಡಲು ಮುಂದಾಗಬಾರದು. ಇಂತಹ ಸಂದರ್ಭಗಳಲ್ಲಿ ತಿಳಿಯದೇ ನಿಯಮ ಉಲ್ಲಂಘನೆ ಮಾಡಿದ್ರೆ ಅಲ್ಲಿನ ಕಾನೂನು ಕ್ರಮಗಳನ್ನು ಬದ್ಧವಾಗಿ ಎದುರಿಸಬೇಕು. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.


Click it and Unblock the Notifications