ಕಾರಿಗೆ ಒರಗಿ ನಿಂತಿದ್ದಕ್ಕೆ ಬಲೂನ್ ಮಾರುವ ಮಗುವನ್ನು ಜಾಡಿಸಿ ಒದ್ದ ವ್ಯಕ್ತಿ: ವಿಡಿಯೋ ವೈರಲ್, ಶಿಹಶಾದ್ ಬಂಧನ
ಉತ್ತರ ಕೇರಳ ಜಿಲ್ಲೆಯ ತಲಸ್ಸೆರಿಯಲ್ಲಿ ತನ್ನ ಕಾರಿನ ಮೇಲೆ ಒರಗಿ ನಿಂತಿದ್ದ ಆರು ವರ್ಷದ ಬಾಲಕನನ್ನು ಅಮಾನುಷವಾಗಿ ಒದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ವಿಡಿಯೋವನ್ನು ಆಧರಿಸಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ PTI ವರದಿ ಮಾಡಿದೆ.

ಘಟನೆ ಕುರಿತ ದೃಷ್ಯಾವಳಿಗಳು ಆನ್ಲೈನ್ನಲ್ಲಿ ಭಾರೀ ವೈರಲ್ ಆಗಿವೆ. ಜೊತೆಗೆ ಈ ಕುರಿತ ಸುದ್ದಿ ಬಹುತೇಕ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ನಂತರ ಆರೋಪಿ ಶಿಹಶಾದ್ ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ವಿಷಯಕ್ಕೆ ಬಂದರೆ ಕಳೆದ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಕೇರಳದ ತಲಸ್ಸೆರಿಯಲ್ಲಿ ಈ ಘಟನೆ ನಡೆದಿದೆ. ನೋ ಪಾರ್ಕಿಂಗ್ ವಲಯದಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಗಣೇಶ್ ಎಂದು ಗುರುತಿಸಲಾಗಿರುವ ಆರು ವರ್ಷದ ಮಗು ಬೀದಿಗಳಲ್ಲಿ ಬಲೂನ್ಗಳನ್ನು ಮಾರಾಟ ಮಾಡುತ್ತಿದ್ದ.

ಕಾರು ನಿಲ್ಲಿಸಿರುವುದನ್ನು ಕಂಡು ವಾಹನದ ಮೇಲೆ ಒರಗಿದ್ದಾನೆ. ವಾಹನದಲ್ಲಿ ಇಲ್ಲದ ಶಿಹಶಾದ್ ತನ್ನ ಟಾಟಾ ಟಿಯಾಗೋ ಮೇಲೆ ಮಗು ಒರಗಿರುವುದನ್ನು ನೋಡಿದ್ದಾನೆ. ಮಗುವಿಗೆ ಒಂದು ಮಾತನ್ನೂ ಹೇಳದೇ ತಕ್ಷಣ ಅವನನ್ನು ಜಾಡಿಸಿ ಒದ್ದಿದ್ದಾನೆ. ಕಾರು ಮಾಲೀಕನ ಹಿಂಸಾತ್ಮಕ ವರ್ತನೆಯನ್ನು ಕಂಡು ಮಗು ಬೆಚ್ಚಿಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಜಾಡಿಸಿ ಒದ್ದ ಬಳಿಕ ಗಾಬರಿಗೊಂಡ ಮಗು ಸ್ವಲ್ಪ ಹೊತ್ತು ಅಲ್ಲೇ ನಿಂತು ಅಲ್ಲಿಂದ ಹೊರಟು ಹೋದ. ಘಟನೆ ಬಳಿಕ ಆರೋಪಿಯೂ ಸ್ಥಳದಿಂದ ಹೊರಟಿದ್ದಾನೆ. ಈ ಎಲ್ಲಾ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಮಾಹಿತಿ ನೀಡಿದರೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಈ ವಿಡಿಯೋ ಕುರಿತು ಭಾರತೀಯ ಜನತಾ ಪಕ್ಷದ (ಕೇರಳ) ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಕೂಡ ಪ್ರತಿಕ್ರಿಯಿಸಿದ್ದಾರೆ. ಟ್ವಿಟರ್ನಲ್ಲಿ ಅವರು ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದನ್ನು ಪ್ರಸ್ತಾಪಿಸಿದ ಅವರು, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

"ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ, ದುಷ್ಕರ್ಮಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಸ್ಥಳೀಯರೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಈ ಘಟನೆಯು ಕೇರಳೀಯರ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ. ಈ ಘಟನೆಯನ್ನು ಮುಚ್ಚಿಡಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಶೀಘ್ರವೇ ಪ್ರಕರಣ ದಾಖಲಿಸಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಹಾಗೂ ತಲಶ್ಶೇರಿ ಶಾಸಕ ಎಎನ್ ಶಂಸೀರ್ ಹೇಳಿದ್ದಾರೆ.

ಕೇರಳ ರಾಜ್ಯ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮಾನವೀಯತೆ ನೀವು ಅಂಗಡಿಗಳಿಂದ ಖರೀದಿಸುವ ವಸ್ತುವಲ್ಲ."ಕಾರಿಗೆ ಒರಗಿದ್ದಕ್ಕಾಗಿ ಆರು ವರ್ಷದ ಮಗುವನ್ನು ಒದೆಯುವುದು ಎಷ್ಟು ಕ್ರೂರವಾಗಿದೆ. ಎಲ್ಲಾ ಕಾನೂನು ಕ್ರಮಗಳನ್ನು ಖಾತ್ರಿಪಡಿಸಲಾಗುವುದು. ಇಂತಹ ಘಟನೆಗಳು ಮರುಕಳಿಸಬಾರದು" ಎಂದು ಸಚಿವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ವಾಹನ ವಶಕ್ಕೆ, ಆರೋಪಿ ಜೈಲಿಗೆ
ಆರೋಪಿ ಶಿಹಶಾದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ಅಪರಾಧ ನರಹತ್ಯೆಗೆ ಯತ್ನ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಜೈಲಿಗಟ್ಟಲಾಗಿದೆ. ಸೆಕ್ಷನ್ 308 ಜಾಮೀನು ರಹಿತ ಅಪರಾಧ ಎಂದು ಎಸಿಪಿ ಮಿಧುನ್ ರಾಜ್ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆಚ್ಚಿನ ಮೆಟ್ರೋಪಾಲಿಟನ್ ನಗರಗಳು ಈಗ ಸಿಸಿಟಿವಿ ನೆಟ್ವರ್ಕ್ ಅನ್ನು ಹೊಂದಿದ್ದು, ಅದನ್ನು ಪೊಲೀಸ್ ಸಿಬ್ಬಂದಿಯ ತಂಡವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ. ಕಾನೂನು ಉಲ್ಲಂಘಿಸುವವರನ್ನು ಬಂಧಿಸಲು ಪೊಲೀಸರು ಸಿಸಿಟಿವಿಗಳ ಸಾಕ್ಷ್ಯವನ್ನು ಬಳಸುತ್ತಾರೆ. ಈ ಪ್ರಕರಣದಲ್ಲೂ ಆರೋಪಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ನೆರವನ್ನು ಪಡೆದುಕೊಂಡಿದ್ದಾರೆ.

ಸಿಸಿಟಿವಿಗಳು ದೇಶದ ಪ್ರತಿಯೊಂದು ನಗರದ ಭದ್ರತೆಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ನಗರಗಳನ್ನು ಅಪರಾಧ ಮುಕ್ತವಾಗಿಡಲು ಪೊಲೀಸರು ಈ ಕ್ಯಾಮೆರಾಗಳ ಜಾಲಗಳನ್ನು ಸಹ ಬಳಸುತ್ತಾರೆ. ನೋಂದಣಿ ಸಂಖ್ಯೆಯನ್ನು ಟ್ರ್ಯಾಕ್ ಮಾಡುವ ಮೂಲಕ ಉಲ್ಲಂಘನೆಯ ಆಧಾರದ ಮೇಲೆ ಪೊಲೀಸರು ಚಲನ್ ನೀಡುತ್ತಾರೆ.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ನಡಿಯುವ ದೇಶಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರಮುಖ ಕಾರಣ ಅತಿವೇಗದ ಚಾಲನೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸದಿರುವುದಾಗಿದೆ. ರಸ್ತೆಗಳಲ್ಲಿ ಅಪಾಯಕಾರಿ ಸ್ಟಂಟ್ಗಳನ್ನು ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡುವುದು ಸಿಸಿಟಿವಿ ಕಣ್ಗಾವಲಿನ ಉದ್ದೇಶವಾಗಿದೆ. ಜೊತೆಗೆ ನಿಯಮ ಪಾಲಿಸದವರನ್ನು ಗುರ್ತಿಸಿ ದಂಡ ಹಾಕಬಹುದಾಗಿದೆ.


Click it and Unblock the Notifications