ಹಡಗಿನಲ್ಲಿದ್ದ 37 ಜನರ ಪ್ರಾಣ ತೆಗೆದ ತೌಕ್ತೆ ಚಂಡಮಾರುತ
ಕರೋನಾ ವೈರಸ್ ಎರಡನೇ ಅಲೆ ಹರಡಬಾರದು ಎಂಬ ಕಾರಣಕ್ಕೆ ದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿರುವುದರಿಂದ ಜನರು ಮನೆಯಲ್ಲಿಯೇ ಇರುವಂತಾಗಿದೆ.

ಒಂದೆಡೆ ಕರೋನಾ ವೈರಸ್ ಮಹಾಮಾರಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರ ಜೊತೆಗೆ ತೌಕ್ತೆ ಚಂಡಮಾರುತ ಜನ ಜೀವನವನ್ನು ತತ್ತರಿಸುವಂತೆ ಮಾಡಿದೆ. ತೌಕ್ತೆ ಚಂಡಮಾರುತವು ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚು ಹಾನಿಯನ್ನುಂಟು ಮಾಡಿದೆ.

ತೌಕ್ತೆ ಚಂಡಮಾರುತದಿಂದಾಗಿ ಒಎನ್ಜಿಸಿ ಒಡೆತನದ ತೈಲ ಟ್ಯಾಂಕರ್ ಅರೇಬಿಯನ್ ಸಮುದ್ರದಲ್ಲಿ ಮುಳುಗಿತ್ತು. ಇದರ ಜೊತೆಗೆ ಈ ಚಂಡಮಾರುತದಿಂದಾಗಿ ಜನರು ವಿದ್ಯುತ್ ಹಾಗೂ ನೀರಿಲ್ಲದೆ ಪರದಾಡುವಂತಾಗಿತ್ತು.
MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಈ ಹಡಗಿನಲ್ಲಿದ್ದ 37 ಜನರು ಸಾವನ್ನಪ್ಪಿದರೆ, ಇನ್ನೂ 38 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಚಂಡಮಾರುತದಿಂದ ಹಡಗಿನ ಆಂಕರ್'ಗಳು ನಾಶವಾಗಿದ್ದರಿಂದ ಹಡಗನ್ನು ಎಳೆದು ಬದಿಗೆ ತರಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಹಡಗಿನಲ್ಲಿದ್ದ 800ಕ್ಕೂ ಹೆಚ್ಚು ಜನರನ್ನು ಹಾಗೂ ಹತ್ತಿರದ ಹಡಗುಗಳನ್ನು ರಕ್ಷಿಸಲಾಗಿದೆ. ಆದರೆ ಈ ಹಡಗಿನಲ್ಲಿದ್ದ 37 ಜನರ ಸಾವು ಸಹೋದ್ಯೋಗಿಗಳನ್ನು ದುಃಖಕ್ಕೆ ತಳ್ಳಿದೆ.
MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಲಕ್ಷದ್ವೀಪ ಬಳಿಯ ಅರೇಬಿಯನ್ ಸಮುದ್ರದಲ್ಲಿ ರೂಪುಗೊಂಡ ತೌಕ್ತೆ ಚಂಡಮಾರುತವು ಮೇ 17ರಂದು ಗುಜರಾತ್ ತೀರಕ್ಕೆ ಅಪ್ಪಳಿಸಿತ್ತು. ತೌಕ್ತೆ ಚಂಡಮಾರುತವು ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ ಮಾತ್ರವಲ್ಲದೆ ಕರ್ನಾಟಕ ಹಾಗೂ ಕೇರಳದಲ್ಲೂ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ.

ಕೇರಳದಲ್ಲಿ ತೌಕ್ತೆ ಚಂಡಮಾರುತದಿಂದ ಭಾರಿ ಮಳೆಯಾಗಿದೆ. ಇದರಿಂದಾಗಿ ಕೇರಳದ ಕರಾವಳಿ ಜಿಲ್ಲೆಗಳು ತೀವ್ರವಾಗಿ ತತ್ತರಿಸಿದ್ದವು. ಕರ್ನಾಟಕದಲ್ಲಿ ಕರಾವಳಿ ತೀರದಲ್ಲಿರುವ 200ಕ್ಕೂ ಗ್ರಾಮಗಳು ಈ ಚಂಡಮಾರುತದಿಂದ ಬಾಧಿತವಾಗಿವೆ.
MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಈ ಚಂಡಮಾರುತದಿಂದ ಮುಂಬೈನಲ್ಲಿ ಶೇ.70ರಷ್ಟು ಮರಗಳು ಧರೆಗುರುಳಿವೆ ಎಂದು ವರದಿಯಾಗಿದೆ. ಗುಜರಾತ್ನಲ್ಲಿ ತೌಕ್ತೆ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. 23 ವರ್ಷಗಳ ನಂತರ ಗುಜರಾತ್ನಲ್ಲಿ ಈ ರೀತಿಯ ಚಂಡಮಾರುತ ಅಪ್ಪಳಿಸಿದೆ.

ಗುಜರಾತ್ನ ಹಲವಾರು ಜಿಲ್ಲೆಗಳಲ್ಲಿ ವಿದ್ಯುತ್ ಕಡಿತವಾಗಿದ್ದು, ಸೆಲ್ಫೋನ್ ಸೇವೆ ಇಲ್ಲವಾಗಿದೆ. ಪ್ರಧಾನಿ ಮೋದಿ ಅವರು ಹೆಲಿಕಾಪ್ಟರ್ ಮೂಲಕ ಚಂಡಮಾರುತ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. ನೆರೆಯ ತಮಿಳುನಾಡಿನಲ್ಲೂ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ.


Click it and Unblock the Notifications