Shivamogga: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 1 ವರ್ಷದ ಸಂಭ್ರಮ.. ಇಲ್ಲಿಂದ ಎಲ್ಲಿಗೆ ಹೋಗಬಹುದು?
ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಫೆಬ್ರವರಿ 27ಕ್ಕೆ 1 ವರ್ಷಗಳನ್ನು ಪೂರೈಸಿದೆ. ಕಳೆದ ವರ್ಷದ ಇದೇ ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಏರ್ಪೋರ್ಟ್ನ್ನು ಲೋಕಾರ್ಪಣೆಗೊಳಿಸಿದ್ದರು. ಈ ಮೂಲಕ ಮಲೆನಾಡು ಜನರ ದಶಕಗಳ ಕನಸು ನನಸಾಗಿತ್ತು.
ಈ ಬಗ್ಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗಬೇಕು ಎಂಬ ಬಿ.ಎಸ್.ಯಡಿಯೂರಪ್ಪನವರ ಕನಸು ಸಾಕಾರಗೊಂಡ ದಿನಕ್ಕೆ ಈಗ ಒಂದು ವರ್ಷದ ಸಂಭ್ರಮ. ಪ್ರಯಾಣಿಕರಿಂದ ಹಾಗೂ ವಿಮಾನಯಾನ ಸಂಸ್ಥೆಗಳಿಂದ ಅತ್ಯುತ್ತಮ ಸ್ಪಂದನೆ ದೊರೆತಿರುವುದು ಸಂತಸ ತಂದಿದೆ' ಎಂದು ಬರೆದುಕೊಂಡಿದ್ದಾರೆ.

ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ವಿಮಾನ ನಿಲ್ದಾಣ (Shivamogga airport) ಮೂಲಕ 25,000ಕ್ಕೂ ಹೆಚ್ಚು ಮಂದಿ ಓಡಾಟವನ್ನು ನಡೆಸಿದ್ದಾರೆ. ವಿಮಾನ ಸಂಚಾರ ಆರಂಭವಾಗಿ ಕೇವಲ 6 ತಿಂಗಳ (ಆಗಸ್ಟ್.31, 2023 - ಫೆಬ್ರವರಿ.26, 2024) ಅವಧಿಯಲ್ಲಿ ಆಗಮನ (Arrival) ಮತ್ತು ನಿರ್ಗಮನ (Departure) ಸೇರಿದಂತೆ 288 ಬಾರಿ ವಿಮಾನಗಳು ಹಾರಾಟವನ್ನು ನಡೆಸಿವೆ.
ಸೋಗಾನೆಯಲ್ಲಿರುವ ಈ ಏರ್ಪೋರ್ಟ್ ಶಿವಮೊಗ್ಗದಿಂದ 8.8 ಕಿಲೋಮೀಟರ್, ಭದ್ರಾವತಿಯಿಂದ 8.2 ಕಿಲೋಮೀಟರ್ ದೂರದಲ್ಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ, 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಏರ್ಪೋರ್ಟ್ನ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡವು ಬಹಳಷ್ಟು ಸುಸಜ್ಜಿತವಾಗಿದ್ದು, ಪ್ರತಿ ಗಂಟೆಗೆ 300 ಪ್ರಯಾಣಿಕರನ್ನು ನಿಭಾಯಿಸಬಹುದು.

ಭಾರತದ 148ನೇ ವಿಮಾನ ನಿಲ್ದಾಣವಾಗಿ ಸೇರ್ಪಡೆಗೊಂಡ ಶಿವಮೊಗ್ಗ ಏರ್ಪೋರ್ಟ್, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಂತರ ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ 2ನೇ ಏರ್ಪೋರ್ಟ್ ಎಂಬ ಖ್ಯಾತಿಯನ್ನು ಗಳಿಸಿದೆ. ಇಲ್ಲಿ ಬೋಯಿಂಗ್ 737 (Boeing 737), ಏರ್ಬಸ್ ಎ320 (Airbus A320) ನಂತಹ ವಿಮಾನಗಳನ್ನು ಲ್ಯಾಂಡ್ ಮಾಡಬಹುದು.
ಸದ್ಯ, ಶಿವಮೊಗ್ಗ ಏರ್ಪೋರ್ಟ್ನಿಂದ ರಾಜ್ಯ ಹೊರ ರಾಜ್ಯಗಳಿಗೆ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಕಡಿಮೆ ಅವಧಿಯಲ್ಲಿ ಗರಿಷ್ಠ ದೂರವನ್ನು ಕ್ರಮಿಸುತ್ತಿವೆ. ಪ್ರಮುಖವಾಗಿ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಇಂಡಿಗೋ (IndiGo) ಸಂಸ್ಥೆಯ ವಿಮಾನ ಸಂಚರಿಸುತ್ತಿದೆ. ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಸ್ಟಾರ್ ಏರ್ (Star Air) ನೇರ ವಿಮಾನ ಸೇವೆಯನ್ನು ನೀಡುತ್ತಿದೆ.
ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ ಮಾತ್ರವಲ್ಲದೆ ಅಕ್ಕಪಕ್ಕದ ಉತ್ತರ ಕನ್ನಡ (Uttara Kannada), ಚಿತ್ರದುರ್ಗ (Chitradurga) ದಾವಣಗೆರೆ (Davanagere) ಹಾಗೂ ಹಾವೇರಿ (Haveri) ಜಿಲ್ಲೆಗಳ ಜನರಿಗೂ ಹೆಚ್ಚಿನ ಅನುಕೂಲವಾಗುತ್ತಿದೆ. ಇಲ್ಲಿನ ವ್ಯಾಪಾರ ವಹಿವಾಟು ವೃದ್ಧಿಸಲಿದೆ. ಜೊತೆಗೆ ಪ್ರವಾಸೋದ್ಯಮ ಹಾಗೂ ಶೈಕ್ಷಣಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಲು ನೆರವಾಗುತ್ತಿದೆ.
ಇನ್ನು, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೊಂಡು 1 ವರ್ಷ ಕಳೆದರೂ ಇದುವರೆಗೆ ನಾಮಕರಣವನ್ನು ಮಾಡಿಲ್ಲ. ರಾಜ್ಯ ಸರ್ಕಾರವು 'ಕುವೆಂಪು' ಅವರ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ. ಅಲ್ಲಿನ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆಯಬೇಕಾಗಿದೆ. ಶೀಘ್ರದಲ್ಲಿಯೇ ನೈಟ್ ಲ್ಯಾಂಡಿಂಗ್ (ರಾತ್ರಿ ಇಳಿಯುವ) ವ್ಯವಸ್ಥೆಯನ್ನು ಕಲ್ಪಿಸುವ ಕಾಮಗಾರಿಯು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications