Shivamogga: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಏರ್ಪೋರ್ಟ್ ವಿಶೇಷತೆಗಳಿವು.. ಈ ನಗರಗಳಿಗೆ ನೇರ ವಿಮಾನ ಸೇವೆ
ಮಲೆನಾಡಿನ ಹೆಬ್ಬಾಗಿಲು ಎಂದು ಶಿವಮೊಗ್ಗ (Shivamogga) ಖ್ಯಾತಿಗಳಿಸಿದೆ. ಇಲ್ಲಿನ ವಿಮಾನ ನಿಲ್ದಾಣ (Airport) ಹಲವು ವಿಶೇಷತೆಗಳನ್ನು ಹೊಂದಿದ್ದು, ಬೆಂಗಳೂರು, ತಿರುಪತಿ ಸೇರಿದಂತೆ ಹಲವು ನಗರಗಳಿಗೆ ನೇರ ವಿಮಾನ ಸೇವೆಯಿದೆ. ಪ್ರಯಾಣಿಕರು ಕೈಗೆಟುಕುವ ಖರ್ಚಿನಲ್ಲಿ ಬೇಗನೆ ಗಮ್ಯ ಸ್ಥಾನವನ್ನು ತಲುಪಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಸೋಗಾನೆಯಲ್ಲಿರುವ ಈ ವಿಮಾನ ನಿಲ್ದಾಣ ಶಿವಮೊಗ್ಗ ನಗರದಿಂದ 8.8 ಕಿ.ಮೀ, ಭದ್ರಾವತಿಯಿಂದ 8.2 ಕಿ.ಮೀ ದೂರದಲ್ಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ, ರೂ.450 ಕೋಟಿ ಖರ್ಚು ಮಾಡಿ, 662.38 ಎಕರೆ ಪ್ರದೇಶದಲ್ಲಿ ಶಿವಮೊಗ್ಗ ಏರ್ಪೋರ್ಟ್ನ್ನು ನಿರ್ಮಿಸಲಾಗಿದೆ. ವಿಮಾನ ನಿಲ್ದಾಣದ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡವು ಸುಸಜ್ಜಿತವಾಗಿದ್ದು, ಗಂಟೆಗೆ ಸರಿ ಸುಮಾರು 300 ಪ್ರಯಾಣಿಕರನ್ನು ಸುಲಭವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ವಿಶೇಷವಾಗಿ ದೇಶದ 148ನೇ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್ಪೋರ್ಟ್ ಸೇರ್ಪಡೆಗೊಂಡಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಬಳಿಕ, ಕರ್ನಾಟಕದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ 2ನೇ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೋಯಿಂಗ್ 737, ಏರ್ಬಸ್ A320ನಂತಹ ದೊಡ್ಡ ವಿಮಾನಗಳನ್ನು ಇಳಿಸಬಹುದು.
ಬೆಂಗಳೂರು (Bengaluru) ಮತ್ತು ಶಿವಮೊಗ್ಗ (Shivamogga) ಮಧ್ಯೆ ಇಂಡಿಗೋ ಸಂಸ್ಥೆಯ ವಿಮಾನ ಓಡಾಟ ನಡೆಸುತ್ತಿದ್ದು, ಪ್ರಯಾಣದ ಅವಧಿ 1 ಗಂಟೆ 15 ನಿಮಿಷವಿದೆ. ಹೈದರಾಬಾದ್ (Hyderabad), ತಿರುಪತಿ (Tirupati) ಮತ್ತು ಗೋವಾ (Goa)ಕ್ಕೆ ಶಿವಮೊಗ್ಗದಿಂದ ಸ್ಟಾರ್ ಏರ್ ನೇರ ವಿಮಾನ ಸೇವೆಯನ್ನು ಒದಗಿಸುತ್ತಿದೆ. ಟಿಕೆಟ್ ದರಗಳು ಸಹ ಸ್ಪರ್ಧಾತ್ಮಕವಾಗಿವೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಕ್ಕಪಕ್ಕದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಗಳಿಗೆ ರಸ್ತೆ ಮಾರ್ಗವಾಗಿ ಅಥವಾ ರೈಲಿನಲ್ಲಿ ಗಂಟೆಗಟ್ಟಲೇ ಪ್ರಯಾಣಿಸಬೇಕಿದೆ. ಆದರೆ, ನೇರ ವಿಮಾನ ಸೇವೆಯಿರುವುದರಿಂದ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಮಾನಗಳು ಸಂಚರಿಸುವುದರಿಂದ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೂ ನೆರವಾಗುತ್ತದೆ.
ಉತ್ತರ ಕರ್ನಾಟಕ ಜನರ ಬಹುದಿನದ ಕನಸು ಶೀಘ್ರದಲ್ಲಿಯೇ ನನಸಾಗಲಿದ್ದು, ರೂ.350 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಜಯಪುರ ಏರ್ಪೋರ್ಟ್ ವರ್ಷದೊಳಗೆ ಲೋಕಾರ್ಪಣೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ವಿಮಾನ ನಿಲ್ದಾಣದ ಕಾಮಗಾರಿ ಮುಕ್ತಾಯದ ಹಂತದಲಿದ್ದು, ಶೀಘ್ರವೇ ಕಾರ್ಯಚರಣೆ ಶುರುವಾಗಲಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಗೆ ರೂ.94 ಕೋಟಿ ಬಿಡುಗಡೆಗೊಳಿಸಲಾಗಿದೆ' ಎಂದು ಹೇಳಿದ್ದರು.
ವಿಜಯಪುರ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಭಿವೃದ್ಧಿಪಡಿಸುತ್ತಿದೆ. ಈ ಏರ್ಪೋರ್ಟ್ ನಗರದಿಂದ 15 ಕಿ.ಮೀ ದೂರದಲ್ಲಿರುವ ಮದಭಾವಿಯಲ್ಲಿದೆ. 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಶೇಕಡ 80% ಕೆಲಸಗಳು ಪೂರ್ಣಗೊಂಡಿವೆ ಎಂದು ವರದಿಯಾಗಿದೆ. ವಿಜಯಪುರ ಮಾತ್ರವಲ್ಲದೆ ಹಾಸನ ಮತ್ತು ರಾಯಚೂರು ವಿಮಾನ ನಿಲ್ದಾಣದ ಕೆಲಸಗಳು ಕೂಡ ಭರದಿಂದ ಸಾಗುತ್ತಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications