Shivamogga: ಮಗನಿಂದ ಮಾರುತಿ ಒಮ್ನಿ ಚಾಲನೆ: ತಂದೆಗೆ 25,000 ದಂಡ ಹಾಕಿದ ಶಿವಮೊಗ್ಗ ಕೋರ್ಟ್
ಮಾರುತಿ ಒಮ್ನಿ (Maruti Omni) ಕಾರನ್ನು ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಇಲ್ಲದೇ ಓಡಿಸಿದ್ದಕ್ಕಾಗಿ ಬಾಲಕನ ತಂದೆಗೆ ಶಿವಮೊಗ್ಗದ (Shivamogga) 3ನೇ ಎಸಿಜೆ ಹಾಗೂ ಜೆಎಂಎಫ್ ಕೋರ್ಟ್ 25,000 ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕಳೆದ ಸೆ.9 ರಂದು ಶಿವಮೊಗ್ಗ ನಗರದಲ್ಲಿ ಮಾರುತಿ ಒಮ್ನಿಯನ್ನು ಇಲಿಯಾಸ್ ಎಂಬುವವರ 17 ವರ್ಷದ ಮಗ ಓಡಿಸಿದ್ದಾನೆ. ಕರ್ನಾಟಕ ಸಂಘದ ಸಮೀಪದ ಬಿಎಚ್ ರಸ್ತೆಯಲ್ಲಿ ಪೊಲೀಸರು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಆಗ, ಬಾಲಕ ಡ್ರೈವಿಂಗ್ ಲೈಸೆನ್ಸ್ ಇಲ್ಲದೆಯೇ ಒಮ್ಮಿ ಕಾರನ್ನು ಚಲಾಯಿಸಿರುವುದು ತಿಳಿದುಬಂದಿದೆ.

ಈ ಹಿನ್ನೆಲೆ, ಶಿವಮೊಗ್ಗ ನಗರದ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಡ್ರೈವಿಂಗ್ ಮಾಡಲು ಅರ್ಹತೆ ಇಲ್ಲದಿದ್ದರೂ ಮಗನಿಗೆ ಮಾರುತಿ ಒಮ್ನಿ ನೀಡಿದ್ದ ತಂದೆ ಇಲಿಯಾಸ್ ವಿರುದ್ಧ ಪೊಲೀಸರು, ಶಿವಮೊಗ್ಗ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾಗಿದ್ದು, ನ್ಯಾಯಾಧೀಶರು, ದಂಡ ವಿಧಿಸಿದ್ದಾರೆ. ಚಿಕ್ಕಮಗಳೂರಿನ ಎನ್.ಆರ್.ಪುರದ ನಿವಾಸಿ ಇಲಿಯಾಸ್ ದಂಡ ಕಟ್ಟಿದ ವ್ಯಕ್ತಿಯಾಗಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮೇ.25 ರಂದು ಕ್ಯಾಂಟರ್, ಆಟೋ ನಡುವೆ ಅಪಘಾತವಾಗಿತ್ತು. ಈ ಕೇಸ್, ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆಯಲ್ಲಿ ಆಟೋವನ್ನು ಬಾಲಕ ಓಡಿಸುತ್ತಿದ್ದ ಎಂಬುದು ದೃಢವಾಗಿತ್ತು. ಪೊಲೀಸರು, ಆಟೋ ಮಾಲೀಕ ಸತೀಶ್ ವಿರುದ್ಧ ನ್ಯಾಯಾಲಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣೆ ವೇಳೆ, ಆರೋಪ ದೃಢವಾಗಿದ್ದು, ಶಿವಮೊಗ್ಗ ಕೋರ್ಟ್, ಆಟೋ ಮಾಲೀಕನಿಗೆ 25,000 ರೂಪಾಯಿ ದಂಡ ವಿಧಿಸಿದೆ. ಎಮಿಷನ್ ಟೆಸ್ಟ್ ಮಾಡಿಸದಿರುವುದಕ್ಕೆ 1000 ರೂಪಾಯಿ ಹೆಚ್ಚುವರಿಯಾಗಿ ಸೇರಿದೆ.
ಕಳೆದ ವರ್ಷವು ಇದೇ ರೀತಿಯ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ (Thirthahalli) ವರದಿಯಾಗಿತ್ತು. ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಕೊಟ್ಟ ತಂದೆಗೆ ನ್ಯಾಯಾಲಯ 25,000 ರೂಪಾಯಿ ದಂಡ ವಿಧಿಸಿ, ಆದೇಶ ಹೊರಡಿಸಿತ್ತು. ತೀರ್ಥಹಳ್ಳಿ ಪಟ್ಟಣದಲ್ಲಿ 16 ವರ್ಷದ ಬಾಲಕನೊಬ್ಬ ಹೆಲ್ಮೆಟ್ ಧರಿಸದೇ, ಬೈಕ್ ಚಾಲನೆ ಮಾಡುತ್ತಿದ್ದಾಗ ಪೊಲೀಸರು, ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ವಾಹನ ಚಲಾವಣೆ ಮಾಡಿದ್ದು ಗೊತ್ತಾಗಿತ್ತು.
ಇನ್ನು, ಸುರಕ್ಷತೆ ಸಲುವಾಗಿ ಸಂಚಾರಿ ನಿಯಮ ಪಾಲಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ಇದರಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಬಹುದು. ಪೋಷಕರು, ಪ್ರಾಪ್ತ ವಯಸ್ಸಿಗೆ ಬರುವವರೆಗೆ ಮಕ್ಕಳಿಗೆ ವಾಹನಗಳನ್ನು ಓಡಿಸಲು ನೀಡಬೇಡಿ. ಆ ಮೇಲೂ ಸಂಬಂಧಪಟ್ಟ ಇಲಾಖೆಯಿಂದ ಡ್ರೈವಿಂಗ್ ಲೈಸೆನ್ಸ್ ದೊರೆತಾಗ ಚಾಲನೆ ಮಾಡಲು ಅವಕಾಶ ನೀಡಿರಿ.
ಎಲ್ಲರೂ ನಿಗದಿತ ವೇಗಮಿತಿಯಲ್ಲಿ ವಾಹನ ಓಡಿಸಿ. ಹೆದ್ದಾರಿಯಲ್ಲಿ ಪಥ ಶಿಸ್ತು ಕಾಯ್ದುಕೊಳ್ಳಿ. ಯಾವುದೇ ಕಾರಣಕ್ಕೂ ಸಿಗ್ನಲ್ ಜಪ್ ಮಾಡಬೇಡಿ. ಮದ್ಯಪಾನ ಅಥವಾ ಫೋನ್ ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಚಲಾಯಿಸಬೇಡಿ. ಕಾರುಗಳಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ದ್ವಿಚಕ್ರ ವಾಹನಗಳಲ್ಲಿ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಮರೆಯದಿರಿ. ಈ ಮೂಲಕ ಮುಂದಾಗಬಹುದಾದ ಅಪಘಾತವನ್ನು ತಪ್ಪಿಸಬಹುದು.
ಇತ್ತೀಚೆಗೆ, ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಬಗ್ಗೆ ಸ್ವತಃ ಸಂಚಾರ, ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದರು. ಈ ವರ್ಷದ (2023) ಮೊದಲರ್ಧದಲ್ಲಿ 5830 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇನಲ್ಲಿ 1094, ಜೂನ್ 965, ಜುಲೈ 807, ಆಗಸ್ಟ್ 795 ಜನರು ಸಾವನ್ನಪಿದ್ದಾರೆ. ಬೆಂಗಳೂರು, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದಿದ್ದರು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications