ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಹೋಗುವವರಿಗೆ ಸಿಹಿಸುದ್ದಿ: ಶೀಘ್ರ ಸೇತುವೆ ಪೂರ್ಣ.. ವಿಡಿಯೋ!
ಶಿವಮೊಗ್ಗ (Shivamogga) ಜನರ ಹತ್ತಾರು ವರ್ಷಗಳ ಕನಸು ಆದಷ್ಟು ಬೇಗನೆ ಸಾಕಾರಗೊಳ್ಳಲಿದೆ. ಕೆಲವೇ ತಿಂಗಳಲ್ಲಿ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ ವಾಹನಗಳ ಸಂಚಾರಕ್ಕೆ ಮುಕ್ತಾಯವಾಗಲಿದೆ. ನೂತನ ಸೇತುವೆ ನಿರ್ಮಾಣದಿಂದ ಸಿಗಂದೂರು ಚೌಡೇಶ್ವರಿ (Sigandur Chowdeshwari) ದೇಗುಲಕ್ಕೂ ಹೋಗುವ ಭಕ್ತರಿಗೂ ಹೆಚ್ಚಿನ ಅನುಕುಲವಾಗಲಿದೆ. ಇದರೊಟ್ಟಿಗೆ ಹಿನ್ನೀರಿನ ಪ್ರದೇಶದ ಹಲವು ಹಳ್ಳಿಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೂಡ ದೊಡ್ಡಮಟ್ಟದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಇತ್ತೀಚೆಗೆ 'ಟ್ರಾವೆಲ್ ಶಿವಮೊಗ್ಗ' ಹೆಸರಿನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ನಿರ್ಮಾಣ ಹಂತದಲ್ಲಿರುವ ಸಿಗಂದೂರು ಸಂಪರ್ಕ ಸೇತುವೆಯ ಡ್ರೋನ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಸೇತುವೆ ನಿರ್ಮಾಣದ ಬಹುಭಾಗದ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿರುವುದನ್ನು ಕಾಣಬಹುದು. ಜೊತೆಗೆ ಶರಾವತಿ ನದಿಯ ಮನಮೋಹಕ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

ಸರಿ ಸುಮಾರು ರೂ.423 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಳೆಬಾಗಿಲು - ಸಿಗಂದೂರು ಸಂಪರ್ಕ ಸೇತುವೆ ನಿರ್ಮಾಣಕ್ಕೆ 2018ರ ಫೆಬ್ರವರಿಯಲ್ಲಿ ಅಡಿಗಲ್ಲು ಹಾಕಲಾಗಿತ್ತು. ರಸ್ತೆ ಮೂಲಕ ಸಾಗರದಿಂದ ಸಿಗಂದೂರು/ ತುಮರಿಗೆ ಹೋಗಲು ಹೆಚ್ಚು ದೂರ ಪ್ರಯಾಣಿಸಬೇಕು. ಈ ಸೇತುವೆ ಪೂರ್ಣಗೊಂಡ ಮೇಲೆ ಆ ದೂರ ಅರ್ಧದಷ್ಟು ಕಡಿಮೆಯಾಗಲಿದೆ.
ನೂತನ ಸಿಗಂದೂರು ಕೇಬಲ್ ಸೇತುವೆ 2.44 ಕಿ.ಮೀ ವರೆಗೆ ಉದ್ದವಿದ್ದು, 16 ಮೀಟರ್ನಷ್ಟು ಅಗಲವಿದೆ. 17 ಪಿಲ್ಲರ್ಗಳ ಮೇಲೆ ನಿರ್ಮಾಣವಾಗುತ್ತಿದೆ. ಸದ್ಯ ಸಾಗರದಿಂದ ಸಿಗಂದೂರು 32 ಕಿ.ಮೀ ದೂರದಲ್ಲಿದ್ದು, ಹೊಳೆಬಾಗಿಲುವರೆಗೆ ರಸ್ತೆಯಿದೆ. ಅಲ್ಲಿಂದ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಲ್ಲಿ ಲಾಂಚ್ ಮೂಲಕ ಪ್ರಯಾಣಿಸಿ, ಸಿಗಂದೂರನ್ನು ತಲುಪಬೇಕು.

ಸಿಗಂದೂರು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಚೌಡೇಶ್ವರಿ ತಾಯಿಯ ದೇವಸ್ಥಾನವಿದೆ. ಪ್ರತಿದಿನ ಸುಮಾರು 5,000 ಭಕ್ತರು ಸಿಗಂದೂರು ಚೌಡೇಶ್ವರಿ ಸನ್ನಿಧಿಗೆ ಭೇಟಿ ನೀಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ 10,000ಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ. ಜೊತೆಗೆ 5,000ಕ್ಕೂ ಅಧಿಕ ಕುಟುಂಬಗಳು ಇಲ್ಲಿ ನೆಲೆಸಿದ್ದು, ವರ್ಷಗಳಿಂದ ತಮ್ಮ ಪ್ರಯಾಣಕ್ಕೆ ಲಾಂಚ್ನ್ನೇ ಅವಲಂಭಿಸಿದ್ದಾರೆ. ಆದರೆ, ಈ ಲಾಂಚ್ ಸೇವೆಯನ್ನು ಸಂಜೆ 6:30ರ ನಂತರ ಸ್ಥಗಿತಗೊಳಿಸಲಾಗುತ್ತದೆ.
2023ರ ಫೆಬ್ರವರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಜನರ ಬಹು ವರ್ಷಗಳ ಕನಸೊಂದು ನನಸಾಗಿತ್ತು. ಅದು ಸೋಗಾನೆಯಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಿತ್ತು. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ 662 ಎಕರೆ ಪ್ರದೇಶದಲ್ಲಿ ಈ ವಿಮಾನದಲ್ಲಿ ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸಾಕಷ್ಟು ಸುಸಜ್ಜಿತವಾಗಿದೆ.
ದೇಶದ 148ನೇ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಗೊಂಡಿತ್ತು. ಬೆಂಗಳೂರಿನ 'ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಬಳಿಕ, ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ 2ನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಈ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ತಿರುಪತಿ ಹಾಗೂ ಗೋವಾಕ್ಕೂ ವಿಮಾನಗಳು ಸಂಚರಿಸುತ್ತವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications