ಶೀಘ್ರದಲ್ಲೇ ಟ್ರಾಫಿಕ್ ಮುಕ್ತವಾಗಲಿದೆ ಬೆಂಗಳೂರು: ಸ್ಕೈಬಸ್ ಯೋಜನೆ ಪ್ರಸ್ತಾಪಿಸಿದ ಸಚಿವ ಗಡ್ಕರಿ
ಬೆಂಗಳೂರು ನಗರದಲ್ಲಿ ಮಿತಿ ಮೀರುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೊಸ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ. ಈಗ ಬಳಕೆಯಲ್ಲಿರುವ ಮೆಟ್ರೋ ರೈಲುಗಳಂತೆಯೇ ಸ್ಕೈಬಸ್ ಸೇವೆಯ ಮೂಲಕ ಸಂಚಾರ ದಟ್ಟಣೆಯನ್ನು ತಗ್ಗಿಸಲು ಯೋಜಿಸುತ್ತಿದ್ದಾರೆ.

ಈ ಯೋಜನೆ ಬಗ್ಗೆ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ನಾನು ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದೇನೆ. ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಸ್ಕೈಬಸ್ ಉತ್ತಮ ಆಯ್ಕೆಯಾಗಿದೆ. ಇದು ಒಂದು ಬಾರಿಗೆ 200 ಜನರನ್ನು ಸಾಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ರಸ್ತೆಗಳ ಮೇಲೆ ಬ್ರಿಡ್ಜ್ ನಿರ್ಮಿಸಿ ಅದರ ಕೆಳಗೆ ಹೊಂದಿಕೆಯಾಗುವಂತೆ ಗಾಳಿಯಲ್ಲಿ ಓಡುತ್ತದೆ.

ನಾವು ವಾರಣಾಸಿಯಲ್ಲಿ ಸ್ಕೈಬಸ್ ನಿರ್ಮಾಣಕ್ಕೆ ಯೋಜಿಸುತ್ತಿದ್ದೇವೆ. ಈ ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಲು ವಿಶ್ವದಲ್ಲಿ ಕೇವಲ ಎರಡು ಕಂಪನಿಗಳಿವೆ. ಒಂದು ಫ್ರಾನ್ಸ್ನಲ್ಲಿದ್ದರೇ ಮತ್ತೊಂದು ಆಸ್ಟ್ರಿಯಾದಲ್ಲಿದೆ. ಈ ಎರಡು ಕಂಪನಿಗಳು ಸ್ಕೈಬಸ್ ನಿರ್ಮಾಣದಲ್ಲಿ ಪರಿಣತಿಯನ್ನು ಹೊಂದಿವೆ ಎಂದು ತಿಳಿಸಿದರು.

ಮೂರು ತಿಂಗಳಲ್ಲಿ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಲು ಅಂತರರಾಷ್ಟ್ರೀಯ ಸಲಹೆಗಾರರಿಗೆ ಹೇಳಿದ್ದೇವೆ, ವರದಿ ಬಂದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿಗೆ ಸಲ್ಲಿಸಲಾಗುವುದು. ನಂತರ ನಾವು ಪ್ರಸ್ತಾವನೆಯನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

ಸದ್ಯ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು, ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರುತ್ತದೆ. ಹಾಗಾಗಿ ಕೇಂದ್ರ ಸಚಿವರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ವಿವಿಧ ಯೋಜನೆಗಳ ಆಯ್ಕೆಯನ್ನು ಸಿಎಂ ಬೊಮ್ಮಯಿ ಮುಂದಿಟ್ಟಿದ್ದಾರೆ.

ಗಡ್ಕರಿಯವರು ಟ್ರಾಫಿಕ್ ಸಮಸ್ಯೆಗೆ ಇನ್ನೊಂದು ಆಯ್ಕೆಯನ್ನು ಸಹ ನೀಡಿದ್ದು, ಟ್ರಾಲಿ- ಬಸ್ ಬಗ್ಗೆ ವಿವರಿಸಿದ್ದಾರೆ. ಇದು 88 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಕಾರಿನಲ್ಲಿ ಪ್ರಯಾಣಿಸುವವರು ಐಟಿ ಜನಸಮೂಹ ಆರಾಮವಾಗಿ ಇದರಲ್ಲಿ ಪ್ರಯಾಣಿಸಬಹುದು ಎಂದು ಅವರು ಹೇಳಿದರು.

ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಗರದೊಳಗೆ ಬಹುಪದರದ ಮೇಲ್ಸೇತುವೆಗಳನ್ನು ಪ್ರಸ್ತಾಪಿಸಿದ ಗಡ್ಕರಿ ಅವರು ಬೆಂಗಳೂರು- ಮೈಸೂರು, ಬೆಂಗಳೂರು- ಚೆನ್ನೈ, ಬೆಂಗಳೂರು- ಟೌನ್ ರಿಂಗ್ ರೋಡ್ ಎಕ್ಸ್ಪ್ರೆಸ್ವೇ ಮುಂತಾದ ಯೋಜನೆಗಳು ಹೊರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತವೆ ಎಂದು ಹೇಳಿದರು.

ನಗರದೊಳಗೆ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಲ್ಲಿ ಮಿತಿಗಳಿರುವುದರಿಂದ ನಾವು ಬಹು- ಪದರದ ಎಲಿವೇಟೆಡ್ ಫ್ಲೈಓವರ್ಗಳನ್ನು ಯೋಜಿಸುತ್ತಿದ್ದೇವೆ ಎಂದು ಹೇಳಿದರು.

ರಸ್ತೆ ಸುರಕ್ಷತೆ
ಕರ್ನಾಟಕ ಸೇರಿದಂತೆ ಬಹುಪಾಲು ರಾಜ್ಯಗಳು ಸಾರಿಗೆ ಕ್ಷೇತ್ರದಲ್ಲಿ ಇನ್ನೂ ಹಲವಾರು ಸುಧಾರಣೆಗಳನ್ನು ಕಾಣಬೇಕಿದೆ ಎಂದ ಗಡ್ಕರಿ ಅವರು, ರಸ್ತೆ ಸುರಕ್ಷತಾ ಲೆಕ್ಕಪರಿಶೋಧನೆಗಳನ್ನು ನಡೆಸುವಂತೆ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು. ದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಬಸ್ಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುವುದು ಮತ್ತು ಮೊಬೈಲ್ ಆಧಾರಿತ/ ಸ್ಮಾರ್ಟ್ ಕಾರ್ಡ್ ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸುವುದು ಎಸ್ಟಿಯುಗಳನ್ನು ಲಾಭದಾಯಕವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು. ರಸ್ತೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಮೂಲಕ ಅಪಘಾತಗಳು ಮತ್ತು ಸಾವುಗಳನ್ನು ಕಡಿಮೆ ಮಾಡುವ ಅಗತ್ಯತೆಯ ಬಗ್ಗೆಯೂ ಹೇಳಿದರು.

ನಾವು ಒಟ್ಟಾಗಿ ಕೆಲಸ ಮಾಡುವ ಮೂಲಕ 2024ರ ಅಂತ್ಯದ ಮೊದಲೇ ನಮ್ಮ ರಸ್ತೆಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಶೇಕಡಾ50 ರಷ್ಟು ಕಡಿಮೆ ಮಾಡಬಹುದು ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.

ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ
ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಭಾರತ ಸರ್ಕಾರವು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಕಾರಿನಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಮಾಡಲಾಗಿದೆ.

ಈಗ ನೀವು ಕಾರಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಕುಳಿತಿದ್ದರೂ ಎಲ್ಲರೂ ಸೀಟ್ ಬೆಲ್ಟ್ ಅನ್ನು ಧರಿಸಬೇಕಾಗುತ್ತದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದ್ದಾರೆ. ಭಾರತ ಸರ್ಕಾರದ ಈ ನಿರ್ಧಾರವು ಸೈರಸ್ ಮಿಸ್ತ್ರಿ ಅವರ ಸಾವಿನ ಗಂಭಿರ ಪರಿಣಾಮವಾಗಿದೆ.

ಈಗಾಗಲೇ ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಬಳಸುವುದನ್ನು ಕಡ್ಡಾಯಗೊಳಿಸಿದ್ದರೂ ಜನರು ಅದನ್ನು ಪಾಲಿಸುತ್ತಿಲ್ಲ ಎಂದು ಗಡ್ಕರಿ ಹೇಳಿದರು. ಇನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಒಂದು ವೇಳೆ ಉಲ್ಲಂಘಿಸಿರುವುದು ಕಂಡಬಂದರೆ ದಂಡ ವಿಧಿಸಲಾಗುತ್ತದೆ ಎಚ್ಚರಿಸಿದರು.

ಕಾರಿನ ಮುಂಭಾಗದಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುತ್ತಾರೆ ಆದರೆ ಹಿಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಅನ್ನು ನಿರ್ಲಕ್ಷಿಸುತ್ತಾರೆ, ಇದು ಅಪಘಾತದ ಸಮಯದಲ್ಲಿ ಮಾರಣಾಂತಿಕವಾಗಬಹುದು. ಈ ಹಿಂದೆಯೂ ಇಂತಹ ಹಲವು ಉದಾಹರಣೆಗಳಿವೆ, ಇದೀಗ ಸೈರಸ್ ಮಿಸ್ತ್ರಿ ಸಾವಿನಿಂದ ಆದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಗಡ್ಕರಿ ಹೇಳಿದರು.


Click it and Unblock the Notifications