ಶ್ರೀಶೈಲಕ್ಕೆ ತೆರಳುವವರಿಗೆ ಗುಡ್ನ್ಯೂಸ್: ಇಲ್ಲಿಂದ ವಿಶೇಷ ಬಸ್ ಸಂಚಾರ, ಟಿಕೆಟ್ ದರವೆಷ್ಟು?
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಡಬ್ಲ್ಯುಕೆಆರ್ಟಿಸಿ - NWKRTC)ಯ ಬಾಗಲಕೋಟೆ ವಿಭಾಗವು ಶ್ರೀಶೈಲಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ಯುಗಾದಿ ಜಾತ್ರೆ ಹಿನ್ನೆಲೆ, ವಿಭಾಗದ ವಿವಿಧ ಘಟಕಗಳಿಂದ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಯೋಣ ಬನ್ನಿ.
ಈ ಕುರಿತು ಎನ್ಡಬ್ಲ್ಯುಕೆಆರ್ಟಿಸಿ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದು, 'ಬಾಗಲಕೋಟೆ ವಿಭಾಗದಿಂದ ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆಯ ನಿಮಿತ್ತ ಶ್ರೀಶೈಲಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದು ತಿಳಿಸಿದೆ. ಜೊತೆಗೆ ಯಾತ್ರಾರ್ಥಿಗಳಿಗೆ ಕೆಲವೊಂದು ಸಲಹೆಯನ್ನು ನೀಡಿದ್ದು, ಪ್ರಮುಖ ಸ್ಥಳಗಳಿಂದ ಶ್ರೀಶೈಲಕ್ಕೆ ಟಿಕೆಟ್ ದರದ ಮಾಹಿತಿಯನ್ನು ಪ್ರಕಟಿಸಿದೆ.

ಭಕ್ತರಿಗೆ ಸಮೀಪದ ಘಟಕದಿಂದ ಬಸ್ಗಳನ್ನು ಒದಗಿಸಲಾಗುತ್ತದೆ. ಎಲ್ಲ ಘಟಕದಿಂದ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದೇ ಗುಂಪಿನಲ್ಲಿ ಪ್ರಯಾಣಿಸುವ ಕನಿಷ್ಠ 40 ರಿಂದ 50 ಜನರಿಗಾಗಿ ಶ್ರೀಶೈಲ (Srisailam)ಕ್ಕೆ ಹೋಗುವಾಗ ಮತ್ತು ಹಿಂದಿರುಗುವಾಗ ನೇರವಾಗಿ ಅವರ ಊರುಗಳಿಗೆ ಬಸ್ಗಳನ್ನು ಬಿಡಲಾಗುತ್ತದೆ. ಯಾತ್ರಾರ್ಥಿರು ಇಚ್ಚಿಸಿದಲ್ಲಿ ಮಹಾನಂದಿ, ಮಂತ್ರಾಲಯ ಹಾಗೂ ಇತರೆ ಪುಣ್ಯಕ್ಷೇತ್ರಗಳ ದರ್ಶನ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಬಾಗಲಕೋಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಗ ಮಧ್ಯೆ ಉಚಿತ ಅನ್ನ ಸಂತರ್ಪಣೆ ನಡೆಯುವ ಸ್ಥಳಗಳಲ್ಲಿ ಊಟಕ್ಕೆ ಕಾಲಾವಕಾಶ ನೀಡಲಾಗುವುದು ಎಂದು ಸಹ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಟಿಕೆಟ್ ದರವನ್ನು ತಿಳಿಯುವುದಾದರೆ ಬಾಗಲಕೋಟೆಯಿಂದ ಶ್ರೀಶೈಲಕ್ಕೆ ರೂ.875, ಜಮಖಂಡಿಯಿಂದ ರೂ.990, ಮುಧೋಳದಿಂದ ರೂ.965, ಬಾದಾಮಿಯಿಂದ ರೂ.880, ಇಳಕಲ್ ನಿಂದ ರೂ.780, ಹುನಗುಂದದಿಂದ ರೂ.795, ಗುಳೇದಗುಡ್ಡದಿಂದ 850, ಬೀಳಗಿಯಿಂದ ರೂ.925, ರಬಕವಿ ಬನಹಟ್ಟಿಯಿಂದ ರೂ.1030, ತೇರದಾಳದಿಂದ ರೂ.1040 ಇದೆ.
ಎನ್ಡಬ್ಲ್ಯುಕೆಆರ್ಟಿಸಿಗೆ ಸೇರಿರುವ ಚಿಕ್ಕೋಡಿ ವಿಭಾಗವು ಏಪ್ರಿಲ್ 3 ರಿಂದ ಏಪ್ರಿಲ್ 10ರವರೆಗೆ ಬಸ್ ಸೇವೆಯನ್ನು ಒದಗಿಸುತ್ತಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಹಾಗೂ ಗೋಕಾಕ್ ನಿಂದ ಶ್ರೀಶೈಲಕ್ಕೆ ಬಸ್ಗಳು ಹೊರಡಲಿವೆ. ವಿಶೇಷವಾಗಿ ಒಂದು ಊರಿನಿಂದ 50 ಜನ ಪ್ರಯಾಣಿಕರು ಒಟ್ಟಾಗಿ ಬಂದರೆ, ಸಾಂದರ್ಭಿಕ ಒಪ್ಪಂದದ ಮೇರೆಗೆ ಶ್ರೀಶೈಲ ಸೇರಿದಂತೆ ಹಲವು ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯಬಹುದಾಗಿದೆ ಎಂದು ಚಿಕ್ಕೋಡಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿಯ ನಾನ್ ಎಸಿ ಸ್ಲೀಪರ್ ಬಸ್ ಕೂಡ ಬೆಂಗಳೂರಿನಿಂದ ಶ್ರೀಶೈಲಕ್ಕೆ ಸಂಚರಿಸುತ್ತದೆ. ಈ ಬಸ್ ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಟು ಬೆಳಗ್ಗೆ 7:01ರ ಸುಮಾರಿಗೆ ಶ್ರೀಶೈಲವನ್ನು ತಲುಪುತ್ತದೆ. ಟಿಕೆಟ್ ವೊಂದಕ್ಕೆ ರೂ.1,168 ದರವಿದೆ. ಶ್ರೀಶೈಲದಿಂದ ಸಂಜೆ 4.01ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 4:15 ರ ಸುಮಾರಿಗೆ ಬೆಂಗಳೂರಿಗೆ ಬರುತ್ತದೆ.
ರಾಯಚೂರಿನಿಂದಲೂ ಶ್ರೀಶೈಲಕ್ಕೆ 2 ಸಾಮಾನ್ಯ ಸಾರಿಗೆ ಬಸ್ಗಳು ಕಾರ್ಯಚರಣೆ ನಡೆಸುತ್ತಿವೆ. ಇವುಗಳಿಗೆ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ವೊಂದಕ್ಕೆ ರೂ.488 ದರವಿದೆ. ವಿಜಯಪುರದಿಂದ ಶ್ರೀಶೈಲಕ್ಕೆ 3 ಸಾಮಾನ್ಯ ಸಾರಿಗೆ ಬಸ್ಗಳು ಓಡಾಟ ನಡೆಸುತ್ತಿವೆ. ಬೆಳಗ್ಗೆ 5.30, ಸಂಜೆ 4.01 ಹಾಗೂ 6.26ಕ್ಕೆ ಈ ಬಸ್ಗಳು ಹೊರಡುತ್ತವೆ. ಟಿಕೆಟ್ ದರ ರೂ.741 ಇದೆ. ಕಲಬುರಗಿಯಿಂದ ಶ್ರೀಶೈಲಕ್ಕೆ ಎರಡು ಬಸ್ಗಳು ತೆರಳಲಿವೆ. ಟಿಕೆಟ್ ವೊಂದಕ್ಕೆ ರೂ.527 ಆಗುತ್ತದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications