ದೇಶದ ಅತಿ ಉದ್ದದ 2 ಎಕ್ಸ್ಪ್ರೆಸ್ವೇ ಸಿದ್ಧಗೊಳ್ಳುತ್ತಿದೆ.. ಕರ್ನಾಟಕದ ಈ ಜಿಲ್ಲೆಗಳಲ್ಲೂ ಹಾದು ಹೋಗುತ್ತೆ!
ಭಾರತದ ಅತಿ ಉದ್ದದ ಎಕ್ಸ್ಪ್ರೆಸ್ವೇ (Expressway) ರಾಷ್ಟ್ರ ರಾಜಧಾನಿ ನವದೆಹಲಿ (New Delhi) ಹಾಗೂ ವಾಣಿಜ್ಯ ರಾಜಧಾನಿ ಮುಂಬೈ (Mumbai) ನಡುವೆ ನಿರ್ಮಾಣಗೊಳ್ಳುತ್ತಿದೆ. ಬರೋಬ್ಬರಿ 1350 ಕಿಲೋಮೀಟರ್ ಉದ್ದದ ಹೆದ್ದಾರಿ ಇದಾಗಿದೆ. ಹಲವೆಡೆ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಸೂರತ್ (Surat) ಹಾಗೂ ಚೆನ್ನೈ (Chennai) ಮಧ್ಯೆಯೂ ಹೆದ್ದಾರಿ (1271 ಕಿಲೋಮೀಟರ್) ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. ಇದನ್ನು ದೇಶದ ಎರಡನೇ ಅತಿ ಉದ್ದದ ಎಕ್ಸ್ಪ್ರೆಸ್ವೇ ಎಂದು ಹೆಸರಿಸಲಾಗಿದ್ದು, ಬಹುತೇಕ 2026ರೊಳಗೆ ಲೋಕಾರ್ಪಣೆಯಾಗುವ ನಿರೀಕ್ಷೆಯಿದೆ.
ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇ (Surat-Chennai Expressway) ನಿರ್ಮಾಣದ ಜವಾಬ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೊತ್ತಿದೆ. ಸರಿ ಸುಮಾರು ರೂ.50 ಸಾವಿರ ಕೋಟಿ ವೆಚ್ಚದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 6 ಪಥದ ಹೆದ್ದಾರಿ ಇದಾಗಿರಲಿದ್ದು, ವಾಹನಗಳ ದಟ್ಟಣೆ ಹೆಚ್ಚಾದಂತೆ 8 ಪಥಗಳಿಗೂ ವಿಸ್ತರಣೆ ಮಾಡಬಹುದು.

ಸದ್ಯ ಸೂರತ್ ಹಾಗೂ ಚೆನ್ನೈ ನಡುವಿನ 1600 ಕಿಲೋಮೀಟರ್ ದೂರವನ್ನು ಕ್ರಮಿಸಲು 35 ಗಂಟೆಗಳು ಬೇಕು. ಈ ಎಕ್ಸ್ಪ್ರೆಸ್ವೇ 1270 ಕಿಲೋಮೀಟರ್ ಇದ್ದು, ಆ ಅಂತರವನ್ನು 18 ಗಂಟೆಗಳಲ್ಲಿಯೇ ಮುಟ್ಟಬಹುದು. ನೂತನ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗವನ್ನು ಗಂಟೆಗೆ 120 ಕಿಲೋಮೀಟರ್ಗೆ ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ.
ಈ ಹೆದ್ದಾರಿಯು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದು ಹೋಗಲಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಅಫಜಲಪುರ ತಾಲ್ಲೂಕಿನ ಬಡದಾಳದಿಂದ ಶುರುವಾಗುವ ಈ ಹೆದ್ದಾರಿಯು ಗಾಣಗಾಪುರ, ಜೇವರ್ಗಿ, ಮುಂಡರಗಿ ಮಾರ್ಗವಾಗಿ ಸಾಗಿ ಅಣಬಿಯಲ್ಲಿ ಅಂತ್ಯಗೊಳ್ಳಲಿದೆ.

2021ರ ಅಕ್ಟೋಬರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು, ಹೊಸ ಸೂರತ್-ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಈ ರಸ್ತೆಯು ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗಕ್ಕೆ ಸಂಪರ್ಕ ಕೊಂಡಿಯಾಗಿರುವುದರಿಂದ ಶಿಕ್ಷಣ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ದೊಡ್ಡಮಟ್ಟದಲ್ಲಿ ನೆರವಾಗಲಿದೆ.
ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ (Bengaluru-Chennai Expressway) ಕಾಮಗಾರಿ ಕೂಡ ವೇಗವಾಗಿ ನಡೆಯುತ್ತಿದೆ. 262 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಕರ್ನಾಟಕ, ಆಂಧ್ರ ಪದೇಶ & ತಮಿಳುನಾಡು ರಾಜ್ಯಗಳನ್ನು ಸಂಪರ್ಕಿಸುತ್ತದೆ. ರೂ.17 ಸಾವಿರ ಕೋಟಿ ಅನುದಾನದಲ್ಲಿ ಸಿದ್ಧಗೊಳ್ಳುತ್ತಿರುವ 4 ಪಥಗಳ ಹೆದ್ದಾರಿ ಇದಾಗಿದ್ದು, ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
ನೂತನ ಹೆದ್ದಾರಿ ನಿರ್ಮಾಣದಿಂದ ಬೆಂಗಳೂರು ಹಾಗೂ ಚೆನ್ನೈ ನಡುವೆ 3 ಗಂಟೆಗಳಲ್ಲಿಯೇ ಪ್ರಯಾಣಿಬಹುದು. ಇದು ದಕ್ಷಿಣ ಭಾರತದ ಪ್ರಪ್ರಥಮ ಹಸಿರು ಹೆದ್ದಾರಿ ಎಂಬ ಹಿರಿಮೆಗೂ ಭಾಜನವಾಗಲಿದೆ. ಈ ಎಕ್ಸ್ಪ್ರೆಸ್ವೇ ನಿರ್ಮಾಣದಿಂದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ರಾಣಿಪೇಟೆ ಮತ್ತು ಶ್ರೀಪೆರಂಬದೂರಿನ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಬೆಂಗಳೂರು ಮತ್ತು ಪುಣೆ ಮಧ್ಯೆ ಹೊಸ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೆ ಎನ್ಎಚ್ಎಐ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. 719 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಹಾದುಹೋಗಲಿದ್ದು, ಬೆಂಗಳೂರು ಮತ್ತು ಪುಣೆ ನಡುವೆ ಪ್ರಯಾಣದ ಸಮಯವನ್ನು 6 ಗಂಟೆಗಳಿಗೆ ಕಡಿತಗೊಳಿಸಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications