ಇಂಧನ ದರ ಏರಿಕೆ ಹಿನ್ನೆಲೆ: ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸುಳಿವು ನೀಡಿದ ಹಣಕಾಸು ಸಚಿವ
ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಡಿಎಂಕೆ ಪಕ್ಷವು ಅಧಿಕಾರದ ಗದ್ದುಗೆ ಗೇರಿತ್ತು. ಡಿಎಂಕೆ ಪಕ್ಷದ ನಾಯಕರಾದ ಎಂಕೆ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಪಳನಿವೇಲ್ ತ್ಯಾಗರಾಜನ್ ಅವರನ್ನು ಸ್ಟಾಲಿನ್ ರವರ ಸಂಪುಟದಲ್ಲಿ ಹಣಕಾಸು ಸಚಿವರನ್ನಾಗಿ ನೇಮಿಸಲಾಯಿತು.

ತಮಿಳುನಾಡಿನ ಜನರು ಅವರ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟು ಕೊಂಡಿದ್ದಾರೆ. ಇತ್ತೀಚಿಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಮಿಳುನಾಡಿನ ಹಣಕಾಸು ಸಚಿವರಾದ ಪಳನಿವೇಲ್ ತ್ಯಾಗರಾಜನ್ ಕಳೆದ 10 ವರ್ಷಗಳ ಎಐಎಡಿಎಂಕೆ ಆಡಳಿತಾವಧಿಯಲ್ಲಿ ತಮಿಳುನಾಡು ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದರು. ಪಳನಿವೇಲ್ ತ್ಯಾಗರಾಜನ್ ತಮಿಳುನಾಡು ಸರ್ಕಾರದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರವನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದ್ದರು.

ಅದರಂತೆ ಇಂದು ಅವರು 120 ಪುಟಗಳ ಶ್ವೇತಪತ್ರವನ್ನು ತಮಿಳುನಾಡಿನ ಪ್ರಧಾನ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಶ್ವೇತಪತ್ರವು ವಿವಿಧ ಪ್ರಮುಖ ಮಾಹಿತಿಗಳನ್ನು ಒಳಗೊಂಡಿದೆ. ರಾಜ್ಯ ಸಾರಿಗೆ ವಲಯವು ಭಾರೀ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಈ ಶ್ವೇತಪತ್ರವು ತಿಳಿಸಿದೆ.

ಸರ್ಕಾರಿ ಬಸ್ ಒಂದು ಕಿ.ಮೀ ಸಂಚರಿಸಿದರೆ ತಮಿಳುನಾಡು ರಾಜ್ಯದ ಸಾರಿಗೆ ಇಲಾಖೆಗೆ ರೂ. 59.15 ನಷ್ಟು ನಷ್ಟವಾಗುತ್ತದೆ ಎಂದು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ತಿಳಿಸಿದ್ದಾರೆ. ಈ ಅಂಕಿ ಅಂಶದ ಮೂಲಕ ತಮಿಳುನಾಡು ರಾಜ್ಯದ ಸಾರಿಗೆ ಕ್ಷೇತ್ರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬುದು ಸಾಬೀತಾಗಿದೆ.

ಸಾರಿಗೆ ವಲಯದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ವಿವಿಧ ಕಾರಣಗಳಿವೆ. ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಡೀಸೆಲ್ ಬೆಲೆ ಏರಿಕೆಗೆ ಅನುಗುಣವಾಗಿ ಬಸ್ ದರಗಳನ್ನು ಏರಿಸದಿರುವುದು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಈಗ ಭಾರತದಲ್ಲಿ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

ಇದರಿಂದ ಭವಿಷ್ಯದಲ್ಲಿ ತಮಿಳುನಾಡು ಸರ್ಕಾರಿ ಬಸ್ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತದೆಯೇ ಎಂಬ ಸಂಶಯ ತಮಿಳುನಾಡಿನ ಜನರಲ್ಲಿ ಹುಟ್ಟಿಕೊಂಡಿದೆ. ಇದೇ ವೇಳೆ ಮಾತನಾಡಿದ ಪಳನಿವೇಲ್ ತ್ಯಾಗರಾಜನ್ ತಮಿಳುನಾಡಿನ ಜನಸಂಖ್ಯೆಗೆ ಅನುಗುಣವಾಗಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಸಾರಿಗೆ ವಲಯವು ದುರ್ಬಲವಾಗಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಯಿತು. ಈ ಯೋಜನೆಗೆ ಮಹಿಳೆಯರು ಸೇರಿದಂತೆ ಎಲ್ಲ ವಲಯಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆದರೆ ಸಚಿವರಾದ ಪಳನಿವೇಲ್ ತ್ಯಾಗರಾಜನ್ ಈ ಯೋಜನೆಯನ್ನು ಪರಿಚಯಿಸುವ ಮೊದಲೇ ಸಾರಿಗೆ ವಲಯವು ನಷ್ಟದಲ್ಲಿತ್ತು ಎಂದು ಹೇಳಿದ್ದಾರೆ. ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗಿಂತ ತಮಿಳುನಾಡಿನಲ್ಲಿ ವಾಹನ ತೆರಿಗೆ ಪ್ರಮಾಣ ಕಡಿಮೆ ಎಂದು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ ಸಹ ಕಳೆದ 15 ವರ್ಷಗಳಿಂದ ತಮಿಳುನಾಡಿನಲ್ಲಿ ವಾಹನ ತೆರಿಗೆ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲವೆಂದು ಎಂದು ಸಚಿವ ಪಳನಿವೇಲ್ ತ್ಯಾಗರಾಜನ್ ಹೇಳಿದ್ದಾರೆ.

ಈ ಹಿಂದೆ ಡಿಎಂಕೆ ಪಕ್ಷವು ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಈಗ ಡಿಎಂಕೆ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ ತಮಿಳುನಾಡಿನ ವಾಹನ ಸವಾರರು ತಮಿಳುನಾಡಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ತಮಿಳುನಾಡಿನಲ್ಲಿರುವ ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿದರೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಗಳಿಲ್ಲವೆಂದೇ ಹೇಳ ಬಹುದು. ಆದರೆ ತಮಿಳುನಾಡು ಸರ್ಕಾರವು ವಾಹನ ಸವಾರರ ಹಿತವನ್ನು ಕಾಪಾಡಲು ಬಯಸಿದರೆ ಇಂಧನಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲೂ ಬಹುದು.


Click it and Unblock the Notifications