ಸರ್ವೀಸ್ಗೆ ಕೊಟ್ಟಿದ್ದ ಟಾಟಾ ನೆಕ್ಸಾನ್ ಮುಂಭಾಗ ಜಖಂ: ಸಿಸಿಟಿವಿ ದೃಶ್ಯ ನೀಡಲು ಒಪ್ಪದ ಸರ್ವೀಸ್ ಸೆಂಟರ್
ಬಹುತೇಕ ಎಲ್ಲಾ ಬ್ರಾಂಡ್ನ ಸರ್ವೀಸ್ ಸೆಂಟರ್ಗಳಲ್ಲಿ ಕಾರನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಿರುವ ಹಲವಾರು ಸುದ್ದಿಗಳನ್ನು ನಾವು ಈ ಹಿಂದೆಯೇ ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಕಡೆ ಟಾಟಾದ ಅಧಿಕೃತ ಸರ್ವೀಸ್ ಸೆಂಟರ್ನಲ್ಲಿ ಸರ್ವೀಸ್ಗೆ ಕೊಟ್ಟ ಟಾಟಾ ನೆಕ್ಸಾನ್ ಇವಿ ಕಾರನ್ನು ಹಾನಿಗೊಳಿಸಿದ್ದಲ್ಲದೇ ಮಾಲೀಕನಿಗೆ ಬೆದರಿಕೆ ಹಾಕಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೌದು, ರಾಜೀವ್ ಬಂಡಾರು ಎಂಬಾತ ತನ್ನ ಟಾಟಾ ನೆಕ್ಸಾನ್ ಇವಿ ಕಾರನ್ನು ಜನರಲ್ ಸರ್ವೀಸ್ಗಾಗಿ ಆರೆಂಜ್ ಆಟೋ ಪ್ರೈ. ಲಿಮಿಟೆಡ್ ಎಂಬ ಸಂಸ್ಥೆ ಮಾಲಿಕತ್ವ ಹೊಂದಿರುವ ಹೈದರಾಬಾದ್ನ ಟಾಟಾದ ಅಧಿಕೃತ ಸರ್ವೀಸ್ ಸೆಂಟರ್ಗೆ ನೀಡಿದ್ದರು. ರಾಜೀವ್ ಅವರು ಸರ್ವೀಸ್ಗಾಗಿ ಕಾರನ್ನು ಕೊಟ್ಟು ವಾಪಸ್ ಬಂದ ಬಳಿಕ ಸರ್ವೀಸ್ ಸೆಂಟರ್ಗೆ ಸಂಭಂಧಿಸಿದ ಸಿಬ್ಬಂದಿಗಳು ರಾಜೀವ್ರ ಕಾರನ್ನು ಲಿಫ್ಟ್ನಲ್ಲಿ ಪಾರ್ಕ್ ಮಾಡುವಾಗ ಬೇಜಾವಬ್ದಾರಿಯಿಂದ ವರ್ತಿಸಿದರ ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಇನ್ನು ಹಾನಿಗೊಳಗಾದ ಕಾರಿನ ಫೋಟೋವನ್ನು ರಾಜೀವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಪೋಸ್ಟ್ ಮಾಡಿ ರತನ್ ಟಾಟಾ, ಟಾಟಾ ಮೋಟೋರ್ಸ್ ಖಾತೆಗಳನ್ನು ಸಹ ಟ್ಯಾಗ್ ಮಾಡಿ ಕಂಪೆನಿಯ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿದ್ದರು. ಇನ್ನು ಈ ಘಟನೆಗೆ ಸಂಭಂಧಿಸಿದಂತೆ ತಮ್ಮ ತಪ್ಪಿನ ಅರಿವಾಗಿ ಅದನ್ನು ಸರಿಪಡಿಸುವ ಬದಲು, ಆರೆಂಜ್ ಮೋಟೋರ್ಸ್ನ ಸಿಇಒ ಮತ್ತು ಎಂಡಿ ರಾಜೀವ್ ಅವರ ಬಳಿ ಇನ್ಸ್ಯೂರೆನ್ಸ್ ಕ್ಲೈಮ್ ಮಾಡಲು ಒತ್ತಾಯ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ ಸರ್ವೀಸ್ ಸೆಂಟರ್ಗೆ ಸಂಭಂಧಿಸಿದ ಅಧಿಕಾರಿಗಳು ಇನ್ಸ್ಯುರೆನ್ಸ್ ಕ್ಲೈಮ್ ಮಾಡದೇ ಇದ್ದಲ್ಲಿ ತನ್ನ ಕಾರನ್ನು ವಾಪಸ್ ನೀಡುವುದಿಲ್ಲ ಎಂಬ ಬೆದರಿಕೆಯನ್ನೂ ಸಹ ಹಾಕಿದ್ದಾರೆ ಎಂದು ರಾಜೀವ್ ದೂರಿದ್ದಾರೆ. ಇನ್ನು ರಾಜೀವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳಲ್ಲಿ ಟಾಟಾ ನೆಕ್ಸಾನ್ ಇವಿಯ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿರುವುದು ಕಾಣಬಹುದಾಗಿದೆ. ಕಾರಿನ ಹೆಡ್ಲೈಟ್, ಬೋನೆಟ್ ಹಾಗು ಬಂಪರ್ ಮುರಿದ ಸ್ಥಿತಿಯಲ್ಲಿದೆ.

ರಾಜೀವ್ ಅವರು ಸರ್ವೀಸ್ ಸೆಂಟರ್ ಸಿಬ್ಬಂದಿಗಳ ಬಳಿ ಘಟನೆಯ ಕುರಿತಾದ ಸಿಸಿ ಟಿವಿ ದೃಶ್ಯಗಳನ್ನು ನೀಡುಂತೆ ಕೇಳಿಕೊಳ್ಳುತ್ತಿದ್ದರೂ ದೃಶ್ಯಗಳನ್ನು ಹಸ್ತಾಂತರಿಸಲು ನಿರಾಕರಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳೇನಾದರೂ ಸಿಕ್ಕಿದರೆ ಆ ಕಾರಿಗೆ ನಡೆದದ್ದು ಏನು ಎಂಬುದು ಸಾಕ್ಷಿ ಸಮೇತವಾಗಿ ತಿಳಿಯುತಿತ್ತು. ಆದರೆ ಸರ್ವೀಸ್ ಸೆಂಟರ್ ಸಿಬ್ಬಂದಿಗಳು ಸಿಸಿಟಿವಿ ದೃಶ್ಯಗಳನ್ನು ನೀಡಲು ನಿರಾಕರಿಸುತ್ತಿರುವುದರಿಂದ ಕಾರಿನ ಸದ್ಯದ ಪರಿಸ್ಥಿತಿಗೆ ಖಂಡಿತವಾಗಿಯೂ ಅಲ್ಲಿನ ಸಿಬ್ಬಂದಿಗಳದೇ ತಪ್ಪಿದೆ ಎಂದು ರಾಜೀವ್ ಬಂಡಾರು ಅವರು ಆರೋಪಿಸುತ್ತಿದ್ದಾರೆ.
ಇನ್ನು ರಾಜೀವ್ ಅವರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕಳೆದ ಒಂದು ತಿಂಗಳಿಂದ ನನ್ನ ಕಾರು ಸರ್ವೀಸ್ ಸೆಂಟರ್ನಲ್ಲಿ ಇದೆ. ಯಾವಾಗ ಸರಿಮಾಡಿ ಕೊಡುತ್ತೀರಿ ಎಂದು ಕೇಳಿದರೆ ಅಧಿಕಾರಿಗಳು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಸಂಭಂಧಪಟ್ಟ ಅಧಿಕಾರಿಗಳು ಘಟನೆಯ ಕುರಿತಾಗಿ ಜವಾಬ್ದಾರಿ ಹೊತ್ತುಕೊಂಡು ತಮ್ಮದೇ ಸ್ವಂತ ವೆಚ್ಚದಲ್ಲಿ ಕಾರನ್ನು ಸರಿಪಡಿಸಿ ಕೊಡುವುದರ ಬದಲು ತನ್ನನ್ನು ಇನ್ಸ್ಯುರನ್ಸ್ ಕ್ಲೈಮ್ ಮಾಡುವಂತೆ ಒತ್ತಾಯಿಸಿದರೆ ಅವರ ವಿರುದ್ದ ದೂರು ನೀಡಿ ಕಾನೂನು ಸಮರಕ್ಕೆ ಸಿದ್ದನಾಗುತ್ತೇನೆ ಎಂದು ಎಚ್ಚರಿಸಿದ್ದಾರೆ.
ಇದೇ ಮೊದಲೇನಲ್ಲ:
ಇಂತಹ ಘಟನೆಗಳು ದೇಶದಲ್ಲಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುಂಚೆ ಇಂತಹ ಹಲವಾರು ಘಟನೆಗಳು ನಡೆದಿವೆ. ಇತ್ತೀಚೆಗಷ್ಟೇ ಕಿಯಾ ಸೋನೆಟ್ ನ ಮಾಲೀಕರೊಬ್ಬರು ಇದೇ ರೀತಿಯ ಘಟನೆಯನ್ನು ಎದುರಿಸಿದ್ದರು. ಸರ್ವೀಸ್ಗೆ ನೀಡಿದ್ದ ಕಾರು ಸರ್ವೀಸ್ ಸೆಂಟರ್ನ ಒಳಗಡೆ ಹಾನಿಗೊಳಗಾಗಿತ್ತು. ಇಂತಹ ಸಂಧರ್ಭಗಳಲ್ಲಿ ಸರ್ವೀಸ್ ಸೆಂಟರ್ನ ಸಿಬ್ಬಂದಿಗಳು ಮತ್ತು ಅದಕ್ಕೆ ಸಂಭಂಧಿಸಿದ ಅಧಿಕಾರಿಗಳು ಹೊಣೆಹೊತ್ತುಕೊಂಡು ಕಾರನ್ನು ಸರಿಪಡಿಸಿಕೊಡುವ ಕೆಲಸವನ್ನು ಮಾಡಬೇಕೆ ವಿನಃ ಗ್ರಾಹಕರನ್ನೇ ಇನ್ಸ್ಯುರೆನ್ಸ್ ಕ್ಲೈಮ್ ಮಾಡುವಂತೆ ಹಿಂಸೆ ನೀಡಬಾರದು.
ಡ್ರೈವ್ಸ್ಪಾರ್ಕ್ ಅಭಿಪ್ರಾಯ:
ಗ್ರಾಹಕರು ಕಾರನ್ನು ಸರ್ವೀಸ್ ಸೆಂಟರ್ಗೆ ತಂದು ಅಲ್ಲಿನ ಸಿಬ್ಬಂದಿಗಳನ್ನು ನಂಬಿ ತಮ್ಮ ಕಾರಿನ ಕೀ ಯನ್ನು ನೀಡುತ್ತಾರೆ. ಈ ವೇಳೆ ಕಾರನ್ನು ಸರ್ವೀಸ್ ಮಾಡಿ ಮತ್ತೆ ಗ್ರಾಹಕರಿಗೆ ಆ ಕಾರಿನ ಕೀಯನ್ನು ಮರಳಿಸುವ ವರೆಗೂ ಆ ಕಾರಿನ ಸಂಪೂರ್ಣ ಜವಾಬ್ದಾರಿ ಸರ್ವೀಸ್ ಸೆಂಟರ್ನ ಸಿಬ್ಬಂದಿಗಳದ್ದೇ ಆಗಿರುತ್ತದೆ. ಒಂದು ವೇಳೆ ಸರ್ವೀಸ್ ಸೆಂಟರ್ನಲ್ಲಿ ಕಾರಿಗೇನಾದರೂ ಸಂಭವಿಸಿದರೆ ಅದರ ಸಂಪೂರ್ಣ ಜವಾಬ್ದಾರಿಯೂ ಅಲ್ಲಿನ ಸಿಬ್ಬಂದಿಗಳದ್ದೇ ಆಗಿರುತ್ತದೆ.


Click it and Unblock the Notifications