68 ವರ್ಷಗಳ ನಂತರ ಮರಳಿ ಗೂಡು ಸೇರುತ್ತಿದೆ ಏರ್ ಇಂಡಿಯಾ
ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ಕಂಪನಿಗಳು ಈಗ ನಷ್ಟದ ಹಾದಿಯಲ್ಲಿವೆ. ಇನ್ನು ಕೆಲವು ಕಂಪನಿಗಳು ಮುಚ್ಚಿವೆ. ಇದಕ್ಕೆಲ್ಲಾ ಪ್ರಮುಖ ಕಾರಣ ಕರೋನಾ ವೈರಸ್ ಎಂಬ ಮಹಾಮಾರಿ. ಕಳೆದ ವರ್ಷ ಕರೋನಾ ವೈರಸ್ ಕಾಣಿಸಿಕೊಂಡ ಬಳಿಕ ಹಲವು ಕಂಪನಿಗಳು ನಷ್ಟದಲ್ಲಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಏರ್ ಇಂಡಿಯಾ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಏರ್ ಇಂಡಿಯಾ ಹಲವು ವರ್ಷಗಳಿಂದ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೇಂದ್ರ ಸರ್ಕಾರವು ಸಹ ಹಲವು ಬಾರಿ ಈ ಸಂಗತಿಯನ್ನು ಒಪ್ಪಿಕೊಂಡಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದೆ.

ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಏರ್ ಇಂಡಿಯಾ ವಿಮಾನಗಳ ಸೇವೆಯೂ ತೀರಾ ಹದಗೆಟ್ಟಿತ್ತು. ಏರ್ ಇಂಡಿಯಾ ವಿಮಾನಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ದೂರುಗಳು ಪದೇ ಪದೇ ಕೇಳಿ ಬರುತ್ತಲೇ ಇರುತ್ತವೆ. ಏರ್ ಇಂಡಿಯಾ, ವಿಮಾನಗಳನ್ನು ಸರಿಯಾಗಿ ನಿರ್ವಹಿಸದೇ ಕಳಪೆ ಸೇವೆಗಳನ್ನು ಒದಗಿಸುತ್ತದೆ ಎಂಬುದು ಪ್ರಯಾಣಿಕರ ಆರೋಪ.

ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿತ್ತು. ಈ ಘಟನೆಯಲ್ಲಿ ದೆಹಲಿಯಿಂದ ಲಂಡನ್ಗೆ ಹೊರಡ ಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿತ್ತು. ಎಐ 111 ವಿಮಾನವು ಸೆಪ್ಟೆಂಬರ್ 6 ರಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್'ಗೆ ಪ್ರಯಾಣ ಬೆಳೆಸಬೇಕಿತ್ತು.

ಟಿಕೆಟ್ ಪಡೆದ ಪ್ರಯಾಣಿಕರು ವಿಮಾನದೊಳಗೆ ಆಸೀನರಾಗಿದ್ದರು. ಇದೇ ವೇಳೆ ಕೆಲವು ಪ್ರಯಾಣಿಕರು ವಿಮಾನದ ಬಿಸಿನೆಸ್ ಕ್ಲಾಸ್ ಸೀಟುಗಳಲ್ಲಿ ಇರುವೆಗಳಿರುವುದನ್ನು ಗಮನಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಕಾರಣಕ್ಕೆ ಟೇಕಾಫ್ ಆಗಲು ಸಿದ್ಧವಾಗಿದ್ದ ಎಐ 111 ವಿಮಾನವನ್ನು ರದ್ದು ಪಡಿಸಲಾಗಿತ್ತು. ಕಳೆದ ಮೇ ತಿಂಗಳ ಅಂತ್ಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿಯೇ ಇದೇ ರೀತಿಯ ಘಟನೆ ನಡೆದಿತ್ತು.

ಆಗ ಇರುವೆಗಳ ಬದಲು ಬಾವಲಿಗಳ ಕಾರಣಕ್ಕೆ ಅಮೆರಿಕಾಕ್ಕೆ ತೆರಳ ಬೇಕಿದ್ದ ಏರ್ ಇಂಡಿಯಾ ವಿಮಾನದ ಹಾರಾಟವನ್ನು ರದ್ದು ಪಡಿಸಲಾಗಿತ್ತು. ಈ ರೀತಿ ಕಳಪೆ ಸೇವೆ ನೀಡುತ್ತಿದ್ದ ಏರ್ ಇಂಡಿಯಾವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರವು ಏಪ್ರಿಲ್ ತಿಂಗಳಿನಿಂದಲೇ ಯೋಜನೆಗಳನ್ನು ರೂಪಿಸಿತ್ತು. ಆದರೆ ಏರ್ ಇಂಡಿಯಾ ಸಾಲದ ಸುಳಿಗೆ ಸಿಲುಕಿದ್ದ ಕಾರಣ ಹಲವು ಖಾಸಗಿ ಕಂಪನಿಗಳು ಏರ್ ಇಂಡಿಯಾವನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದವು.

ಏರ್ ಇಂಡಿಯಾವನ್ನು ಖರೀದಿಸಲು ಬಯಸುವ ಕಂಪನಿಗಳು ತಮ್ಮ ವಿವರಗಳನ್ನು ಸಲ್ಲಿಸುವಂತೆ ಸರ್ಕಾರವು ಸೂಚನೆ ನೀಡಿತ್ತು. ಇದಕ್ಕೆ ಸೆಪ್ಟೆಂಬರ್ 15 ರವರೆಗೆ ಗಡುವು ನೀಡಲಾಗಿತ್ತು. ಟಾಟಾ ಸನ್ಸ್ ಕಂಪನಿಯು ಏರ್ ಇಂಡಿಯಾವನ್ನು ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸಿ ತನ್ನ ಬಿಡ್ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಟಾಟಾ ಗ್ರೂಪ್ ಸಲ್ಲಿಸಿದ್ದ ಬಿಡ್ ವಿವರಗಳನ್ನು ಸ್ವೀಕರಿಸಿದ್ದ ಕೇಂದ್ರ ಸರ್ಕಾರವು ಇತ್ತೀಚೆಗೆ ತನ್ನ ಅಧಿಕೃತ ವರದಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಸಂಸ್ಥೆಯಾಗಿರುವ ಏರ್ ಇಂಡಿಯಾದ ಖಾಸಗೀಕರಣವನ್ನು ಕೇಂದ್ರ ಸಚಿವ ಸಂಪುಟ ದೃಢಪಡಿಸಿದೆ. ಈ ವರದಿಯ ಪ್ರಕಾರ, ಟಾಟಾ ಸನ್ಸ್ ಏರ್ ಇಂಡಿಯಾ ಖರೀದಿಗೆ ರೂ. 18,000 ಕೋಟಿ ಬಿಡ್ ಮಾಡಿದೆ. ಅಜಯ್ ಸಿಂಗ್ ನೇತೃತ್ವದ ಸ್ಪೈಸ್ ಜೆಟ್ ನ ರೂ. 15,100 ಕೋಟಿ ಬಿಡ್ ಮಾಡಿದೆ. ಕೇಂದ್ರ ಸರ್ಕಾರವು ಏರ್ ಇಂಡಿಯಾ ಖರೀದಿಗೆ ರೂ 12,906 ಕೋಟಿ ಬಿಡ್ ನಿಗದಿಪಡಿಸಿತ್ತು ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಆಡಳಿತದ ಕಾರ್ಯದರ್ಶಿ ತಿಳಿಸಿದ್ದಾರೆ.

ಈ ಒಪ್ಪಂದದಿಂದ ಕೇಂದ್ರ ಸರ್ಕಾರವು ರೂ. 2,700 ಕೋಟಿ ನಗದು ಹಣ ಪಡೆಯಲಿದೆ. ಉಳಿದ ರೂ. 15,300 ಸಾಲವನ್ನು ಟಾಟಾ ಸನ್ಸ್ ನಿರ್ವಹಿಸಲಿದೆ. ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಂಡ ಮೊದಲ ವರ್ಷದಲ್ಲಿ ಮಾರಾಟ ಒಪ್ಪಂದದ ಅಡಿಯಲ್ಲಿ ಟಾಟಾ ಗ್ರೂಪ್ ಏರ್ ಇಂಡಿಯಾದ ಯಾವುದೇ ಉದ್ಯೋಗಿಗಳನ್ನು ವಜಾಗೊಳಿಸುವುದಿಲ್ಲ. ಎರಡನೇ ವರ್ಷದಿಂದ ಐಚ್ಛಿಕ ನಿವೃತ್ತಿ ಯೋಜನೆಯನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿದೆ.

ಮಾರಾಟದ ನಿಯಮಗಳ ಪ್ರಕಾರ, ಟಾಟಾ ಗ್ರೂಪ್ ಏರ್ ಇಂಡಿಯಾವನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. 5 ವರ್ಷಗಳ ನಂತರ ಭಾರತೀಯ ಕಂಪನಿಗಳಿಗೆ ಮಾರಾಟ ಮಾಡಬಹುದು. ಕಳೆದ ಕೆಲವು ವರ್ಷಗಳಿಂದ ನಷ್ಟದ ಕಾರಣಕ್ಕೆ ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ. ವಾಸ್ತವವಾಗಿ 2001 ರಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು.

ಅಂಕಿ ಅಂಶಗಳ ಪ್ರಕಾರ, ಏರ್ ಇಂಡಿಯಾ ಕಳೆದ ಕೆಲವು ವರ್ಷಗಳಿಂದ ಪ್ರತಿದಿನ ರೂ. 20 ಕೋಟಿ ನಷ್ಟ ಅನುಭವಿಸುತ್ತಿದೆ. ಈ ನಿಟ್ಟಿನಲ್ಲಿ ಇದುವರೆಗೂ ಏರ್ ಇಂಡಿಯಾದಿಂದ ಕೇಂದ್ರ ಸರ್ಕಾರವು ಸುಮಾರು ರೂ. 70,000 ಕೋಟಿ ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ. ಇದರಿಂದ ಏರ್ ಇಂಡಿಯಾವನ್ನು ಮಾರಾಟ ಮಾಡುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಲಾಭವನ್ನುಂಟು ಮಾಡಲಿದೆ.

ಏರ್ ಇಂಡಿಯಾ ಖರೀದಿಗೆ ಅತಿ ಹೆಚ್ಚು ಬಿಡ್ ಸಲ್ಲಿಸಿರುವ ಬಗ್ಗೆ ಟಾಟಾ ಸಮೂಹದ ರತನ್ ಟಾಟಾರವರು ತಮ್ಮ ಟ್ವಿಟರ್ ಖಾತೆಯ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ವೆಲ್ ಕಮ್ ಬ್ಯಾಕ್ ಏರ್ ಇಂಡಿಯಾ ಎಂದು ಹೇಳಿದ್ದಾರೆ. ಅಂದ ಹಾಗೆ ಏರ್ ಇಂಡಿಯಾವನ್ನು ಜೆಆರ್ಡಿ ಟಾಟಾರವರು ಸ್ಥಾಪಿಸಿದ್ದರು.

ಏರ್ ಇಂಡಿಯಾ 1953ರವರೆಗೆ ಟಾಟಾ ಸಂಸ್ಥೆಯ ಅಧೀನದಲ್ಲಿತ್ತು. ನಂತರ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿತ್ತು. ಈಗ ಬರೋಬ್ಬರಿ 68 ವರ್ಷಗಳ ನಂತರ ಏರ್ ಇಂಡಿಯಾ ಮತ್ತೆ ತನ್ನ ಗೂಡು ಸೇರುತ್ತಿದೆ.


Click it and Unblock the Notifications