ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ; ತೆಲಂಗಾಣ ಸಿಎಂ 5 ಕೋಟಿಯ ಬಸ್
ಎಂಥ ವಿಚಿತ್ರ ಪರಿಸ್ಥಿತಿ ಬಂದಿದೆ ನೋಡಿ. ಇನ್ನೇನು ಪ್ರತ್ಯೇಕ ರಾಜ್ಯ ರೂಪುಗೊಂಡು ಐದು ವರ್ಷದ ಅವಧಿಯು ಪೂರ್ಣಗೊಂಡಿಲ್ಲ. ಅದರೊಳಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ರಾಜ್ಯ ಪ್ರವಾಸಕ್ಕಾಗಿ ಐದು ಕೋಟಿ ರುಪಾಯಿಗಳಷ್ಟು ಬೆಲೆ ಬಾಳುವ ದುಬಾರಿ ಬುಲೆಟ್ ಫ್ರೂಪ್ ಬಸ್ಸನ್ನು ಖರೀದಿಸಿದ್ದಾರೆ.
ಜನರ ದುಡ್ಡನ್ನು ಈ ರೀತಿಯಲ್ಲಿ ಮಿಥ್ಯ ಪೋಲು ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ವಿರುದ್ಧ ಈಗ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ 'ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ'ಯಂತಾಗಿದೆ ಸಿಎಂ ಪರಿಸ್ಥಿತಿ.

ಬಲ್ಲ ಮೂಲಗಳ ಪ್ರಕಾರ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ಜೆಸಿಬಿಎಲ್ ಸಂಸ್ಥೆಯಿಂದ ಐದು ಕೋಟಿ ರುಪಾಯಿ ಬೆಲೆ ಬಾಳುವ ಬಸ್ಸನ್ನು ಖರೀದಿಸಿದ್ದಾರೆ. ಇದನ್ನು ತಮ್ಮ ರಾಜ್ಯ ಪ್ರವಾಸದ ಅಗತ್ಯಗಳಿಗಾಗಿ ಬಳಕೆ ಮಾಡಲಾಗುವುದು.

ಸಕಲ ರೀತಿಯ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಬಸ್ಸಿನಲ್ಲಿ ಬುಲೆಟ್ ಫ್ರೂಫ್ ವ್ಯವಸ್ಥೆಯೂ ಇರುತ್ತದೆ. ಅಂದರೆ ಯಾವುದೇ ತರಹದ ದಾಳಿಯನ್ನು ಎದುರಿಸುವಷ್ಟು ಶಕ್ತವಾಗಿದೆ.

ಇದರಲ್ಲಿ ಅಂತನಿರ್ಮಿತ ಬೆಡ್ ರೂಂ, ರೆಸ್ಟ್ ರೂಂ, ಕಚೇರಿ ಕೋಣೆ, ಇಂಟರ್ ನೆಟ್ ಮತ್ತು ಮೇಲ್ಚಾವಣಿಗೆ ತೆರಳಲು ಮೆಟ್ಟಿಲುಗಳ ವ್ಯವಸ್ಥೆಯಿರುತ್ತದೆ.

ತಮ್ಮ ಅಧಿಕೃತ ಪ್ರವಾಸಗಳಿಗಾಗಿ ಸಿಎಂ ಚಂದ್ರಶೇಖರ ರಾವ್ ಹೆಲಿಕಾಪ್ಟರ್ ಬಳಕೆ ಮಾಡುತ್ತಾರೆ. ಆದರೆ ಈಗ ಚೊಕ್ಕ ರಾಜ್ಯದ ಲಗ್ಷುರಿ ಸಿಎಂ ಎಂದು ಗುರುತಿಸಿಕೊಂಡಿರುವ ಕೆಸಿಆರ್, ತಮ್ಮ ಪಯಣವನ್ನು ಮತ್ತಷ್ಟು ಐಷಾರಾಮಿಯನ್ನಾಗಿರಿಸಿದ್ದಾರೆ.

ಪ್ರಸ್ತುತ ಬಸ್ ಅನ್ನು ಚಂದ್ರಶೇಖರ ರಾವ್ ಅವರು ತಮ್ಮ ಹರಿತ ಹರಂ ಕಾರ್ಯಕ್ರಮಗಳಿಗಾಗಿ ಬಳಕೆ ಮಾಡಲಿದ್ದಾರೆ. ಇನ್ನು ಕುಡಿಯುವ ನೀರಿನ ಯೋಜನೆ ಹಾಗೂ ಕಾಕಾತೀಯ ಕಾರ್ಯಕ್ರಮದ ಜಾರಿಯ ಬಗ್ಗೆ ಪರಿಶೀಲನೆಯನ್ನು ನಡೆಸಲಿದ್ದಾರೆ.

ಒಟ್ಟಿನಲ್ಲಿ ತಿಂಗಳ 10 ದಿನಗಳಲ್ಲಿ ತೆಲಂಗಾಣ ಸಿಎಂ ಅವರು ಇದೇ ಬಸ್ಸಿನಲ್ಲಿ ಕಾಲ ಕಳೆಯಲಿದ್ದಾರೆ. ಅಂದ ಹಾಗೆ ತೆಲಂಗಾಣ ಸಿಎಂ ಅವರ ಲಗ್ಷುರಿ ಬಸ್ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?


Click it and Unblock the Notifications








