ತೆಲುಗು ನಿರ್ಮಾಪಕನ 2 ಕೋಟಿ ಬೆಲೆಯ ಕಾರು ಕದ್ದ ಅಂಬಾನಿ ಪಿಎ? ಸತ್ಯಾಂಶ ಬಿಚ್ಚಿಟ್ಟ ಕಳ್ಳ!
ತೆಲುಗು ಸಿನಿಮಾ ರಂಗದ ಪ್ರಮುಖ ನಿರ್ಮಾಪಕರೊಬ್ಬರ ಅಳಿಯನ ದುಬಾರಿ ಪೋರ್ಷೆ ಕಾರನ್ನು ಕದ್ದು ಹೈದರಾಬಾದ್ ಎಲ್ಲಾ ರೌಂಡ್ ಹಾಕಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ಕಳ್ಳತನ ಮಾಡಿರುವ ಉದ್ದೇಶ ಕೇಳಿದ್ರೆ ಕಂಡಿತ ನಗ್ತೀರ.
ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ 1.7 ಕೋಟಿ ರೂ. ಮೌಲ್ಯದ ಕಾರು ಕಳ್ಳತನವಾಗಿದೆ ಎಂದು ವರದಿಯಾಗಿತ್ತು. ಈ ಕಾರು ಜನಪ್ರಿಯ ತೆಲುಗು ಸಿನಿಮಾ ನಿರ್ಮಾಪಕ ದಿಲ್ ರಾಜು ಅವರ ಅಳಿಯ ಅಚ್ಚುತ್ ರೆಡ್ಡಿಗೆ ಸೇರಿದ ಪೋರ್ಷೆ ಕೇಮ್ಯಾನ್ ಎಂದು ತಿಳಿದುಬಂದಿದೆ. ಹೈದರಾಬಾದ್ನ ಪಂಚತಾರಾ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಕಳ್ಳ ಕೇವಲ ಒಂದು ಗಂಟೆಯಲ್ಲಿ ಸಿಕ್ಕಿಬಿದ್ದಿದ್ದಾನೆ.

ನಡೆದಿದ್ದೇನು?: ನಿರ್ಮಾಪಕ ದಿಲ್ ರಾಜು ಅವರ ಅಳಿಯ ಅಚ್ಚುತ್ ರೆಡ್ಡಿ ತಮ್ಮ ಕೆಂಪು ಬಣ್ಣದ ಪೋರ್ಷೆ ಕೇಮ್ಯಾನ್ ಸ್ಪೋರ್ಟ್ಸ್ ಕಾರಿನಲ್ಲಿ ಹೈದರಾಬಾದ್ನ ಮಾದಾಪುರದ ಪಂಚತಾರಾ ಹೋಟೆಲ್ ದಸ್ಪಲ್ಲಾಗೆ ಹೋಗಿದ್ದರು. ಹೋಟೆಲ್ ಆವರಣದಲ್ಲಿ ಕಾರನ್ನು ನಿಲ್ಲಿಸಿದ್ದರು. ಹೋಟಲ್ನಿಂದ ಹೊರಬಂದು ನೋಡಿದಾಗ ಅವರ ಪೋರ್ಷೆ ಕಾರು ಸ್ಥಳದಲ್ಲಿ ಇರಲಿಲ್ಲ. ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.
ಹೋಟಲ್ ಭದ್ರತಾ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ತ್ವರಿತವಾಗಿ ಪರಿಶೀಲಿಸಿದ್ದು, ಕಾರನ್ನು ಅಪರಿಚಿತ ವ್ಯಕ್ತಿಯೊಬ್ಬರು ಕದ್ದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಅಚ್ಚುತ್ ಹಾಗೂ ಹೋಟಲ್ ಭದ್ರತಾ ಸಿಬ್ಬಂದಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯ ಎಲ್ಲಾ ವಿವರಗಳನ್ನು ಪಡೆದು, ಹತ್ತಿರದ ಟ್ರಾಫಿಕ್ ಸಿಗ್ನಲ್ಗಳನ್ನು ಪರಿಶೀಲಿಸುವ ಮೂಲಕ ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದರು.

ಸಿಸಿಟಿವಿ ಸಹಾಯದಿಂದ ಕಳ್ಳ ಸಿಕ್ಕಿಬಿದ್ದ: ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಮಾದಾಪುರ ಮತ್ತು ಜುಬಿಲಿ ಹಿಲ್ಸ್ನ ವಿವಿಧ ಪ್ರದೇಶಗಳಲ್ಲಿ ಕಾರು ಓಡಾಡಿರುವುದು ಕಂಡುಬಂದಿದೆ. ಅಲ್ಲೇ ಸುತ್ತಮುತ್ತ ಓಡಾಡುತ್ತಿರುವ ಕುರಿತು ಅಲ್ಲಿನ ಕೆಬಿಆರ್ ಪಾರ್ಕ್ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಆರೋಪಿಯನ್ನು ತಡೆದು ನಿಲ್ಲಿಸಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕಳ್ಳನನ್ನು ವಿಚಾರಣೆ ಒಳಪಡಿಸಿದಾಗ ಹೈದರಾಬಾದ್ನ ಮನ್ಸೂರಾಬಾದ್ ಪ್ರದೇಶದ ಸಾಯಕಿರಣ್ ಎಂದು ಗುರುತಿಸಲಾಗಿದೆ. ಐಷಾರಾಮಿ ಕಾರುಗಳನ್ನು ಕದ್ದು ಇಂಧನ ಖಾಲಿಯಾಗುವವರೆಗೆ ಓಡಿಸಿ ಅಲ್ಲೇ ಬಿಟ್ಟೋಗುವುದು ಈತನ ಚಾಳಿಯಾಗಿತ್ತು. ಈ ಹಿಂದೆ ಬಂಜಾರ ಹಿಲ್ಸ್ ಪೊಲೀಸರು ಇದೇ ರೀತಿಯ ದುಬಾರಿ ಕಾರು ಕಳ್ಳತನದ ಪ್ರಕರಣಗಳನ್ನು ಈತನ ವಿರುದ್ಧ ದಾಖಲಿಸಿದ್ದರು.

ಕಳ್ಳ ಅಂಬಾನಿಯ ಪಿಎ?: ವಿಚಾರಣೆಯಲ್ಲಿ ಅಸಾಧಾರಣ ಹೇಳಿಕೆಗಳನ್ನು ನೀಡಿರುವ ಸಾಯಿಕಿರಣ್, ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಮತ್ತು ಬಾಲಿವುಡ್ ನಟ ಹೃತಿಕ್ ರೋಷನ್ ಅವರೊಂದಿಗೆ ಉನ್ನತ ಮಟ್ಟದ ಸಂಪರ್ಕವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ನಿರ್ಮಾಪಕರ ಅಳಿಯನ ಪೋರ್ಷೆ ಕೇಮನ್ ಕಾರನ್ನು ಕದಿಯಲು ಹೈದರಾಬಾದ್ ಸಚಿವ ಕೆಟಿ ರಾಮರಾವ್ ಅವರೇ ಸೂಚನೆ ನೀಡಿದ್ದರು ಎಂದು ಹೇಳಿದ್ದಾನೆ.
ಈ ಹೇಳಿಕೆಗಳಿಂದ ಬೇಸತ್ತ ಪೊಲೀಸರು ಸಾಯಿಕಿರಣ್ ಕುಟುಂಬವನ್ನು ಸಂಪರ್ಕಿಸಿದ್ದು, ಆತ ಮಾನಸಿಕ ಅಸ್ವಸ್ಥ, ಬ್ರೈಟ್ ಲೈಫ್ ಫೌಂಡೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆತನ ಹತ್ತಿರದ ಸಂಬಂಧಿಗಳು ದೃಢಪಡಿಸಿದರು. ಇದೀಗ ಪೊಲೀಸರು ಸಾಯಿಕಿರಣ್ ವಿರುದ್ಧ ಯಾವ ಕ್ರಮ ತೆಗೆದುಕೊಂಡಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ.

ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications