ಉದ್ಯಮಿ ಆಟೋ ಡ್ರೈವರ್ ಆದ ಕಥೆ: ಇವರೇ ನನ್ನ ‘ಸ್ಟಾರ್ಟ್-ಅಪ್ ಹೀರೋ’ ಎಂದ ಆನಂದ್ ಮಹೀಂದ್ರಾ
ಇವರೇ ನನ್ನ "ಸ್ಟಾರ್ಟ್-ಅಪ್ ಹೀರೋ" ಎಂದು ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ವ್ಯಕ್ತಿಯೊಬ್ಬರನ್ನು ಪರಿಚಯಿಸಿದ್ದಾರೆ. ಆದರೆ ಈತ ಬಿಲಿಯನೇರ್ ಉದ್ಯಮಿಯೋ ಅಥವಾ ಸೆಲಬ್ರಿಟಿಯೋ ಅಲ್ಲ, ಬದಲಿಗೆ ಈತನೋರ್ವ ಸಾಮಾನ್ಯ ಆಟೋ ಡ್ರೈವರ್.

ಮಹೀಂದ್ರಾ ಅವರು ಸುಖಾಸುಮ್ಮನೆ ಈತನನ್ನು ಸ್ಟಾರ್ಟ್-ಅಪ್ ಹೀರೋ ಎಂದಿಲ್ಲ. ಈ ಆಟೋ ಡ್ರೈವರ್ ಹಿಂದೆ ಬಲು ರೋಚಕ ಕಥೆಯಿದೆ. ಓರ್ವ ಉದ್ಯಮಿಯಾಗಿ ಬಳಿಕ ಎಲ್ಲವನ್ನೂ ಕಳೆದುಕೊಂಡರೂ ಎದೆಗುಂದದೇ ಮತ್ತೆ ಜೀವನವನ್ನು ಮರುನಿರ್ಮಿಸಿಕೊಂಡು ಹಲವರಿಗೆ ಮಾದರಿಯಾಗಿದ್ದಾರೆ.

ಒಂದು ಕಾಲದಲ್ಲಿ ತಂಪು ಪಾನೀಯ ವಿಭಾಗದಲ್ಲಿ ಭಾರೀ ಸದ್ದು ಮಾಡಿದ್ದ ರಸ್ನಾದ ಏಕೈಕ ವಿತರಕರಾಗಿದ್ದಾರೆ. ಇವರ ಹೆಸರು ಪರಮ್ಜೀತ್ ಸಿಂಗ್, ಇವರು ದೆಹಲಿಯಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಲಜಪತ್ ನಗರ ನೆರೆಹೊರೆಯಲ್ಲಿ ಅವರು ದೊಡ್ಡ ಗೋಡೌನ್ ಅನ್ನು ಹೊಂದಿದ್ದರು. ಆದರೆ 1984 ರ ಸಿಖ್ ವಿರೋಧಿ ದಂಗೆಯಲ್ಲಿ ಸಿಂಗ್ ಎಲ್ಲವನ್ನೂ ಕಳೆದುಕೊಂಡರು.

ಕೆಲವು ವರ್ಷಗಳ ಹಿಂದೆ ಅನಿಲ್ ಮದನ್ ಎಂಬುವರು ಫೇಸ್ಬುಕ್ನಲ್ಲಿ ಇವರ ಜೀವನದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದರು. ಇದನ್ನು ಇತ್ತೀಚೆಗೆ ಟ್ವಿಟರ್ನಲ್ಲಿ ದಿ ಬೆಟರ್ ಇಂಡಿಯಾ ಮರುಪೋಸ್ಟ್ ಮಾಡಿದೆ. ಪರಮ್ಜೀತ್ ಸಿಂಗ್ 1984 ರ ಗಲಭೆಯಲ್ಲಿ ತನ್ನ ಗೋಡೌನ್, ಎಂಟು ಆಟೋಗಳು ಮತ್ತು ಡೀಲರ್ಶಿಪ್ ಅನ್ನು ಕಳೆದುಕೊಂಡಿದ್ದರು.

ಅದಾದ ನಂತರ ಅವರು ವಿವಿಧ ಆಹಾರ ಕಂಪನಿಗಳೊಂದಿಗೆ ಕೆಲಸ ಮಾಡಲು ಪ್ರಯತ್ನಿಸಿದರಾದರೂ, ಆದ್ಯಾವುದೂ ಕೈ ಹಿಡಿಯಲಿಲ್ಲ. ಹಾಗಾಗಿ ಸಿಂಗ್ ಟ್ಯಾಕ್ಸಿ ಚಾಲನೆ ಮಾಡುವ ಮೂಲಕ ತಮ್ಮ ಜೀವನವನ್ನು ಮರುಪ್ರಾರಂಭಿಸಲು ನಿರ್ಧರಿಸಿದರು. ಇದಕ್ಕಾಗಿ ಟ್ಯಾಕ್ಸಿಯೊಂದನ್ನು ಖರೀದಿಸಿ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ ಅವರಿಗೆ ಆ ಖುಷಿ ಕೆಲವು ದಿನಗಳಿಗಷ್ಟೇ ಸೀಮಿತವಾಯಿತು.

ಏಕೆಂದರೆ ಸಿಂಗ್ ಕೆಲವು ವರ್ಷಗಳ ನಂತರ ಮತ್ತೊಂದು ದುರಂತವನ್ನು ಎದುರಿಸಬೇಕಾಯಿತು. ಟ್ಯಾಕ್ಸಿ ಚಾಲನೆ ವೇಳೆ ಅವರು ಭೀಕರ ಅಪಘಾತವನ್ನು ಎದುರಿಸಿದರು, ಆ ವೇಳೆ ಗಂಭೀರ ಗಾಯಗಳಾಗಿ ಆಸ್ಪತ್ರೆಪಾಲಾದರು. ಆಗ ಅವರು 13 ದಿನಗಳವರೆಗೆ ಕೋಮಾದಲ್ಲಿರಬೇಕಾಯಿತು. ಚೇತರಿಸಿಕೊಳ್ಳಲು ಸುಮಾರು 3 ತಿಂಗಳುಗಳನ್ನು ತೆಗೆದುಕೊಂಡರು.

ಸಿಂಗ್ ಅವರು ಗಾಯಗಳಿಂದ ಚೇತರಿಸಿಕೊಂಡರಾದರೂ ಅವರ ಕಾರು ಮಾತ್ರ ಅಪಘಾತದಲ್ಲಿ ಸಂಪೂರ್ಣವಾಗಿ ನಾಶವಾಗಿತ್ತು. ಇಷ್ಟಾದರೂ ಎಂದಿಗೂ ಬಿಟ್ಟುಕೊಡುವುದಿಲ್ಲ (ನೆವರ್ ಗಿವಪ್) ಎಂದು ಎರಡನೇ ಬಾರಿಗೆ ಮೊದಲಿನಿಂದ ಪ್ರಾರಂಭಿಸಿದರು. ಆದರೆ ಈ ಬಾರಿ ಸಿಂಗ್ ಆಟೋವನ್ನು ಖರೀದಿಸಿದರು. ಅವರು ಪ್ರಸ್ತುತ ಆಟೋ ಓಡಿಸುತ್ತಿದ್ದಾರೆ.

ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ನಲ್ಲಿ ತಮ್ಮ ಕಥೆಯನ್ನು ಹಂಚಿಕೊಂಡು ಸಿಂಗ್ ಅವರ ಧೈರ್ಯ ಮತ್ತು ದೃಢತೆಯನ್ನು ಪ್ರಶಂಸಿಸಿದರು. "ಅವರು ನನ್ನ ಸ್ಟಾರ್ಟ್ ಅಪ್ ಹೀರೋ" ಎಂದು 67 ವರ್ಷದ ಕೈಗಾರಿಕೋದ್ಯಮಿಯಾದ ಆನಂದ್ ಮಹೀಂದ್ರಾ ಅವರು, ಸಿಂಗ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸುತ್ತಿದ್ದು, ಕಾಮೆಂಟ್ಸ್ ವಿಭಾಗ ಸಿಂಗ್ ಅವರ ಬಗ್ಗೆ ಪ್ರಶಂಸೆ ಮತ್ತು ಮೆಚ್ಚುಗೆಯಿಂದ ತುಂಬಿಹೋಗಿದೆ.

ಶಿಕ್ಷಕನ ಸಾಧನೆಗೆ ಶ್ಲಾಘಿಸಿದ ಆನಂದ್ ಮಹೀಂದ್ರಾ
ಕಾಶ್ಮೀರದ ಗಣಿತಶಾಸ್ತ್ರ ಶಿಕ್ಷಕರಾದ ಬಿಲಾಲ್ ಅಹ್ಮದ್ ಎಂಬುವರು ಇತ್ತೀಚೆಗೆ ಮಾರುತಿ 800 ಕಾರನ್ನು ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಿ ಜನಪ್ರಿಯವಾಗಿದ್ದರು. ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಪರಿಸರ ಕಾಳಜಿಯೊಂದಿಗೆ ನಿರ್ಮಿಸಿರುವ ಈ ಕಾರು ಹಲವರ ಗಮನ ಸೆಳೆದಿದ್ದು, ಆನಂದ್ ಮಹೀಂದ್ರಾ ಕೂಡ ಶಿಕ್ಷಕನ ಆವಿಷ್ಕಾರವನ್ನು ಶ್ಲಾಘಿಸಿದ್ದಾರೆ.

ಬಿಲಾಲ್ ಅಹ್ಮದ್ ಅವರ ಆವಿಷ್ಕಾರವನ್ನು ಪ್ರಶಂಸಿದ ಅವರು, ಶಿಕ್ಷಕ ಬಿಲಾಲ್ ಅಹ್ಮದ್ ಅವರ ಉತ್ಸಾಹವು ಶ್ಲಾಘನೀಯವಾಗಿದೆ, ಏಕಾಂಗಿಯಾಗಿ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಹೀಂದ್ರಾ ರಿಸರ್ಚ್ ವ್ಯಾಲಿ ಸಹಾಯದಿಂದ ತಮ್ಮ ಯೋಜನೆಯನ್ನು ಅಭಿವೃದ್ಧಿಪಡಿಸಲು ಆ ವ್ಯಕ್ತಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ.

ವಿನ್ಯಾಸವು ಉತ್ಪಾದನಾ ಸ್ನೇಹಿ ಆವೃತ್ತಿಯಾಗಿ ವಿಕಸನಗೊಳ್ಳುವ ಅಗತ್ಯವಿದೆ. ಬಹುಶಃ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿರುವ ನಮ್ಮ ತಂಡವು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅವರೊಂದಿಗೆ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ. ಬಿಲಾಲ್ ಅಹ್ಮದ್ ಅವರು 13 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ಕಾರಿಗಾಗಿ ಶ್ರಮಿಸಿದ್ದು, ಇದೀಗ ಮಹತ್ವದ ಮೈಲಿಗಲ್ಲು ಮುಟ್ಟಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಆನಂದ್ ಮಹೀಂದ್ರಾ ಅವರು ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಬೇಕಾದ ಸಹಕಾರ ನೀಡುವುದು ಅವರ ಪ್ರವೃತ್ತಿಯಾಗಿದೆ. ಸದ್ಯ ಪರಮ್ಜೀತ್ ಸಿಂಗ್ ಅವರ ಧೈರ್ಯಕ್ಕೆ ಮೆಚ್ಚಿದರೆ, ಶಿಕ್ಷಕನ ಸಾಧನೆಯನ್ನು ಕೊಂಡಾಡಿದ್ದಾರೆ. ವ್ಯಕ್ತಿಯ ಜೀವನ ಏಳುಬೀಳುಗಳಿಂದ ಕೂಡಿರುತ್ತದೆ. ಎಷ್ಟೇ ಕಷ್ಟ ಬಂದರೂ ಮೆಟ್ಟಿ ನಿಲ್ಲುವಂತಿರಬೇಕು ಎಂದು ಮಹೀಂದ್ರಾ ಅವರು ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.


Click it and Unblock the Notifications