ಗುಜರಾತ್ ದುರಂತ ಕಣ್ಮುಂದೆ ಇರುವಾಗಲೇ ಉತ್ತರ ಕನ್ನಡದಲ್ಲಿ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಹುಚ್ಚಾಟ
ಅತ್ತ ಗುಜರಾತ್ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಮಂದಿ ನೀರುಪಾಲಾದರು. ಇತ್ತ ನಮ್ಮ ರಾಜ್ಯದಲ್ಲಿ ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗು ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಕೆಲವು ದಿನಗಳ ಹಿಂದೆ ಗುಜರಾತ್ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ನೂರಾರು ಮಂದಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಈ ಘಟನೆ ಇನ್ನೂ ಕೂಡ ಜನರ ಕಣ್ಮುಂದೆ ಇರುವಾಗಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಕೆಲ ಯುವಕರು ತೂಗುಸೇತುವೆ ಮೇಲೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟುಕೊಂಡು ಕಾರು ಚಲಾಯಿಸುವ ಹುಚ್ಚಾಟ ಮೆರೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಾತೊಡ್ಡಿಯಿಂದ ಶಿವಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಇಲ್ಲಿನ ಕಾಳಿ ನದಿಗೆ ಅಡ್ಡಲಾಗಿ ಈ ತೂಗುಸೇತುವೆಯನ್ನು ನಿರ್ಮಿಸಲಾಗಿದೆ.

ಈ ತೂಗುಸೇತುವೆಯ ನಿರ್ಮಾಣಗೊಂಡು ಸುಮಾರು 8 ವರ್ಷಗಳಾಗಿದೆ. ಆದರೆ ಈ ತೂಗುಸೇತುವೆಗೆ ಸೂಕ್ತ ನಿರ್ವಣಣೆ ಇಲ್ಲದೇ ವರ್ಷಗಳೇ ಕಳೆದಿವೆ. ಇಂತಹ ಅಪಾಯಕಾರಿ ತೂಗುಸೇತುವೆಯ ಮೇಲೆ ಕೆಲವು ಯುವಕರ ಗುಂಪು ಕಾರು ಓಡಿಸಿದೆ. ಈ ಸೇತುವೆಯ ಮೇಲೆ ಕಾರನ್ನು ಅರ್ಧಕ್ಕೆ ಕೊಂಡೊಯ್ದಿದ್ದಾರೆ.

ಈ ವೇಳೆ ಅಲ್ಲಿಯ ಸ್ಥಳೀಯರು ಗಮನಿಸಿ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ವಿರೋಧ ವ್ಯಕ್ತಪಸಿದಾಗ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಯುವಕರ ಗುಂಪು ಕಾರನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಮೂರು ಸೇತುವೆಗಳು ಭಾರೀ ಮಳೆಗೆ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಉಳಿದ ಸೇತುವೆಗಳಿಗೆ ಸೂಕ್ತ ನಿರ್ವಹಣೆ ಇಲ್ಲ. ಆದರೆ ಜನರು ಬೇರೆ ಆಯ್ಕೆ ಇಲ್ಲದೇ ಇದೇ ಸೇತುವೆಯ ಮೂಲಕ ಜೀವ ಕೈಯಲ್ಲಿ ಹಿಡಿದು ಅದೇ ಸೇತುವೆಗಳ ಮೇಲೆ ಪ್ರತಿನಿತ್ಯ ಓಡಾಟ ನಡೆಸುತ್ತಾರೆ.

ಇಂತಹ ಸೇತುವೆ ಮೇಲೆ ಪ್ರವಾಸಕ್ಕೆ ಬಂದವರು ಈ ರೀತಿಯ ದುಸ್ಸಾಹಸ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಅಲ್ಲದೇ ಕರಾವಳಿ ಕರ್ನಾಟಕ ಪ್ರದೇಶದಲ್ಲಿ ವರ್ಷವಿಡೀ ಭಾರಿ ಮಳೆ ಬೀಳುವ ಸಾಧ್ಯತೆಯಿರುವುದರಿಂದ ತೂಗು ಸೇತುವೆಗಳ ಮೇಲೆ ಸರ್ಕಾರ ವಿಶೇಷವಾಗಿ ನಿಗಾ ಇಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ತೂಗು ಸೇತುವೆಯ ರೋಪ್ಗಳು ತುಕ್ಕು ಹಿಡಿದಿದ್ದು ಸೇತುವೆಯ ಲಿಂಕ್ಗಳು ಅಲ್ಲಲ್ಲಿ ಮುರಿದು ಹೋಗಿವೆ. ಇದರಿಂದ ಪ್ರತಿ ದಿನ ಈ ಸೇತುವೆಯಲ್ಲಿ ಓಡಾಡುವ ಜನ ಆತಂಕದಿಂದಲೇ ತೆರಳಬೇಕಿದೆ. ಒಟ್ಟಿನಲ್ಲಿ ಜನರ ಉಪಯೋಗಕ್ಕೆಂದು ನಿರ್ಮಿಸಿದ ತೂಗು ಸೇತುವೆಗಳು ಇದೀಗ ನಿರ್ವಹಣೆ ಇಲ್ಲದೇ ತುಕ್ಕು ಹಿಡಿದಿದೆ. ದೊಡ್ಡ ದುರ್ಘಟನೆ ನಡೆಯುವ ಮುನ್ನ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಸರಿಪಡಿಸಬೇಕಿದೆ.

ಕಾರವಾರದ ಯಲ್ಲಾಪುರ ತಾಲೂಕಿನ ಶಿವಪುರ ತೂಗು ಸೇತುವೆ ಮೇಲೆ ಕಾರು ಚಲಾಯಿಸಿದ್ದ ಮುಜಾಹಿದ್ ಆಜಾದ್ ಸಯ್ಯದ್ ಎಂಬ ಯುಕವ್ನನ್ನು ಜೋಯಿಡಾ ಠಾಣೆ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಈತ ಜೋಯಿಡಾ ತಾಲೂಕಿನ ಉಳವಿ ಗ್ರಾಮದ ನಿವಾಸಿ 25 ವರ್ಷದ ಮುಜಾಹಿದ್ ಆಜಾದ್ ಸಯ್ಯದ್.

ಗುಜರಾತ್ನ ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ್ದಾರೆ. ಸೇತುವೆ ಕುಸಿಯುವ ಮುನ್ನವೇ ಕೆಲವು ವ್ಯಕ್ತಿಗಳು ತೂಗು ಸೇತುವೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲುಗಾಡಿಸುವಂತೆ ಮಾಡಲು ಯತ್ನಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದಿದೆ. ಖಾಸಗಿ ಗುತ್ತಿಗೆದಾರ ಒರೆವಾ ಗ್ರೂಪ್ನ ವ್ಯವಸ್ಥಾಪಕರು, ಟಿಕೆಟ್ ಗುಮಾಸ್ತರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಹೀಗಾಗಿ ಸೇತುವೆ ದುರಂತಕ್ಕೆ ಕಳಪೆ ಕಾಮಗಾರಿ ಕಾರಣಾನಾ ಎಂಬ ವಾದ ಕೂಡ ಇದೆ. ಸೇತುವೆ ಮೇಲಿದ್ದ ಕೆಲ ಕಿಡಿಗೇಡಿಗಳು ಸೇತುವೆ ಅಲುಗಾಡಿಸಿದ್ದು ಕಾರಣವೋ ಎಂಬಿತ್ಯಾದಿ ಪ್ರಶ್ನೆಗಳು ಕೂಡ ಎದಿದ್ದೆ. ಲಂಬ ಸಸ್ಪೆಂಡರ್ಗಳು ಸೇತುವೆಯ ಡೆಕ್ ಅನ್ನು ಸಂಧಿಸುವ ಸಂಪರ್ಕ ಬಿಂದುಗಳ ದೌರ್ಬಲ್ಯತೆ ದುರಂತಕ್ಕೆ ಕಾರಣ ಎನ್ನಬಹುದು.


Click it and Unblock the Notifications