ಮಳೆ ನೀರಿನಲ್ಲಿ ಸಿಲುಕಿದ್ದ Toyota Fortuner ಎಸ್ಯುವಿಯನ್ನು ಹೊರ ತಂದ ಟ್ರಾಕ್ಟರ್
ಕರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಕೆಲವು ಪ್ರದೇಶಗಳು ಜಲಾವೃತ್ತವಾಗಿವೆ. ವಿಪರೀತ ಮಳೆಯಾದಾಗ ಯಾರಿಗೆ ಆದರೂ ತೊಂದರೆಯಾಗುವುದು ಖಚಿತ. ಅದರಲ್ಲೂ ಮಳೆ ಬಂದಾಗ ವಾಹನ ಸವಾರರು ಪರದಾಡ ಬೇಕಾಗುತ್ತದೆ.

ನಮ್ಮ ದೇಶದಲ್ಲಿರುವ ಬಹುತೇಕ ರಸ್ತೆಗಳು ಹಳ್ಳ ಗುಂಡಿಗಳಿಂದ ಕೂಡಿರುತ್ತವೆ. ಇನ್ನು ಮಳೆಗಾಲದಲ್ಲಿ ಈ ರಸ್ತೆಗಳು ತೀರಾ ಹದಗೆಡುತ್ತವೆ. ಜೋರಾಗಿ ಮಳೆಯಾದರಂತೂ ಪರಿಸ್ಥಿತಿ ಹೇಳತೀರದು. ಕೆಲವೊಮ್ಮೆ ವಾಹನವನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ಬರುವ ಪರಿಸ್ಥಿತಿ ಕೂಡ ಬರಬಹುದು. ಮಳೆ ನೀರಿನಿಂದ ಜಲಾವೃತ್ತವಾಗಿರುವ ಪ್ರದೇಶಗಳಲ್ಲಿ ವಾಹನಗಳು ಸಿಲುಕಿಕೊಂಡಿರುವುದನ್ನು ನಾವು ನೋಡಿಯೇ ಇರುತ್ತೇವೆ.

ಈ ರೀತಿಯ ಸುದ್ದಿಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತವೆ. ಹೀಗೆ ಮಳೆ ನೀರಿನಲ್ಲಿ ಸಿಲುಕಿ ಕೊಂಡ ವಾಹನಗಳನ್ನು ಪ್ರಯಾಸದಿಂದ ಹೊರ ತರಬೇಕಾಗುತ್ತದೆ. ಈಗ ಇದೇ ರೀತಿಯ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವೀಡಿಯೊದಲ್ಲಿ Toyota Fortuner ಕಾರು ಮಳೆ ನೀರಿನಲ್ಲಿ ಸಿಲುಕಿ ಕೊಂಡಿರುವುದನ್ನು ಹಾಗೂ ಆ ಕಾರಿನ ಚಾಲಕ ನೀರಿನಲ್ಲಿ ಮುಳುಗುವುದರಿಂದ ತಪ್ಪಿಸಿ ಕೊಳ್ಳಲು ಕಾರಿನ ರೂಫ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ಘಟನೆ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ನಡೆದಿದೆ.

ಕಾರು ಚಾಲಕ ಈ ಮಳೆ ನೀರಿನಿಂದ ಆವೃತ್ತವಾಗಿರುವ ಅಂಡರ್ ಪಾಸ್ ನಲ್ಲಿ ಹೇಗೆ ಸಿಲುಕಿ ಕೊಂಡರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ಅವರು ಆ ಪ್ರದೇಶಕ್ಕೆ ಹೊಸದಾಗಿ ಬಂದಿರುವ ಸಾಧ್ಯತೆಗಳಿವೆ. ಇದರಿಂದ ದಾರಿ ತೋರದೇ ಆ ಮಾರ್ಗದಲ್ಲಿ ಚಲಿಸಿ ಮಳೆ ನೀರಿನಲ್ಲಿ ಸಿಲುಕಿರಬಹುದು.

ಯಾವುದೇ ವಾಹನ ಸವಾರರು ಯಾವುದಾದರೂ ಹೊಸ ಜಾಗಕ್ಕೆ ತೆರಳಿದಾಗ ಆ ಪ್ರದೇಶದಲ್ಲಿ ವಾಹನಗಳು ಚಲಿಸಲು ಯೋಗ್ಯವಾದ ರಸ್ತೆಗಳಿವೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ನಂತರ ಮುಂದಕ್ಕೆ ಹೋಗುವುದು ಸೂಕ್ತ. ಇಲ್ಲದಿದ್ದರೇ ಈ ರೀತಿ ಸಮಸ್ಯೆಗೆ ಸಿಲುಕುವುದು ಖಚಿತ.

ಈ ಕಾರು ಅಂಡರ್ ಪಾಸ್ ನಲ್ಲಿ ಸಿಲುಕಿದೆ ಎಂಬುದು ರಸ್ತೆಯ ಎರಡೂ ಬದಿಗಳಲ್ಲಿರುವ ದೊಡ್ಡ ಗೋಡೆಗಳಿಂದ ಸ್ಪಷ್ಟವಾಗಿದೆ. ನೀರಿನ ಆಳವನ್ನು ನಿಖರವಾಗಿ ಅಂದಾಜು ಮಾಡದ ಈ ಫಾರ್ಚುನರ್ ಕಾರಿನ ಚಾಲಕ ಈ ಸುರಂಗ ಮಾರ್ಗದಲ್ಲಿ ಚಲಿಸಿದ್ದಾರೆ. ನಂತರ ಸುರಂಗದೊಳಗೆ ಹೋದ ಕಾರು ಮುಳುಗುತ್ತಿರುವುದನ್ನು ಕಂಡು ಚಾಲಕ ಭಯದಿಂದ ಕಾರನ್ನು ನಿಲ್ಲಿಸಿ ಕಾರಿನ ಮೇಲೆ ಹತ್ತಿ ರೂಫ್ ಮೇಲೆ ಕುಳಿತಿದ್ದಾರೆ.

ಕಾರಿನ ರೂಫ್ ಮೇಲೆ ಕುಳಿತು ಸಹಾಯಕ್ಕಾಗಿ ಜನರನ್ನು ಕರೆದಿದ್ದಾರೆ. ಈ ವೀಡಿಯೊದಲ್ಲಿ ಅವರಿಗೆ ಸಹಾಯ ಮಾಡಲು ಕೆಲವು ಜನರು ಬಂದಿರುವುದನ್ನು ಹಾಗೂ ಕಾರಿನ ಹಿಂಭಾಗಕ್ಕೆ ಹಗ್ಗ ಕಟ್ಟಿ ಟ್ರಾಕ್ಟರ್ ಸಹಾಯದಿಂದ ಕಾರ್ ಅನ್ನು ನೀರಿನಿಂದ ಹೊರ ತರುತ್ತಿರುವುದನ್ನು ಕಾಣಬಹುದು.

Toyota Fortuner ಎತ್ತರದ ಎಸ್ಯುವಿಯಾಗಿದ್ದರೂ ಸಹ ಸಂಪೂರ್ಣವಾಗಿ ಮಳೆ ನೀರಿನಲ್ಲಿ ಮುಳುಗಿದೆ. ಒಂದು ವೇಳೆ ಕಡಿಮೆ ಎತ್ತರದ ಹ್ಯಾಚ್ ಬ್ಯಾಕ್ ಅಥವಾ ಸೆಡಾನ್ ಕಾರ್ ಆಗಿದ್ದರೆ ಕಾರಿನಲ್ಲಿರುವವರು ಜಲಾವೃತ್ತರಾಗುವ ಸಾಧ್ಯತೆಗಳಿದ್ದವು. ಈ ಘಟನೆಯಲ್ಲಿ ಚಾಲಕ ನೀರಿನ ಆಳವನ್ನು ಗಮನಿಸದೇ ಕಾರು ಚಾಲನೆ ಮಾಡಿ ನಿರ್ಲಕ್ಷ್ಯ ವಹಿಸಿದ್ದು ಸ್ಪಷ್ಟವಾಗಿದೆ.
ಭಾರತದಲ್ಲಿ ನೀರಿನಲ್ಲಿ, ಕೆಸರಿನಲ್ಲಿ ಸಿಲುಕುವ ವಾಹನಗಳನ್ನು ಬೇರೆ ವಾಹನಗಳ ಸಹಾಯದಿಂದ ಹೊರಕ್ಕೆ ಎಳೆಯುವ ಹಲವಾರು ಘಟನೆಗಳು ಈ ಹಿಂದೆಯೂ ನಡೆದಿವೆ. ಇತ್ತೀಚಿಗೆ ಕೆಸರಿನಲ್ಲಿ ಸಿಲುಕಿದ್ದ Ford Ecosport ಎಸ್ಯುವಿಯನ್ನು ಟ್ರಾಕ್ಟರ್ ನೆರವಿನಿಂದ ಹೊರಕ್ಕೆ ತರಲಾಗಿತ್ತು. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಸುರಿದಿದ್ದ ಭಾರೀ ಮಳೆಗೆ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರು ನೋಡ ನೋಡುತ್ತಿದ್ದಂತೆ ಕಂದಕದೊಳಕ್ಕೆ ಬಿದ್ದ ಘಟನೆ ವರದಿಯಾಗಿತ್ತು. ಕಾರು ನಿಂತಿದ್ದ ಸ್ಥಳದಲ್ಲಿ ಭಾರೀ ಮಳೆಯ ಕಾರಣಕ್ಕೆ ದೊಡ್ಡ ಕಂದಕ ಉಂಟಾಗಿ ಕಾರು ಮುಳುಗಿತ್ತು.

ಹಲವು ತಾಸುಗಳ ಕಾರ್ಯಾಚರಣೆಯ ನಂತರ ಈ ಕಾರ್ ಅನ್ನು ಹೊರ ತೆಗೆಯಲಾಗಿತ್ತು. ಈ ಘಟನೆ ನಡೆದ ಕೆಲವು ದಿನಗಳ ನಂತರ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟು ಕಂದಕಗಳು ಉಂಟಾಗಿದ್ದವು. ರಸೆಯಲ್ಲಿ ಚಲಿಸುತ್ತಿದ್ದ ಕಾರೊಂದು ಈ ಕಂದಕಕ್ಕೆ ಬಿದ್ದಿತ್ತು. ಈ ಘಟನೆಗಳ ನಡುವೆಯೇ ಸಂಸದರೊಬ್ಬರು ಚಲಿಸುತ್ತಿದ್ದ Toyota Innova ಕಾರು ಮಳೆ ನೀರಿನಲ್ಲಿ ಸಿಲುಕಿದ್ದ ಘಟನೆ ಮಧ್ಯ ಪ್ರದೇಶದಿಂದ ವರದಿಯಾಗಿತ್ತು. ಈ ಸಂಸದರು ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ರವರ ಪುತ್ರ ಎಂಬುದು ವಿಶೇಷ. ಅವರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ವೀಕ್ಷಣೆಗಾಗಿ ತೆರಳಿ ವಾಪಸ್ ಆಗುವಾಗ ಈ ಘಟನೆ ನಡೆದಿತ್ತು. ಈ ಕಾರಣಕ್ಕೆ ಕಾರು ಚಿಕ್ಕದೇ ಆಗಿರಲಿ ಅಥವಾ ದೊಡ್ಡದೇ ಆಗಿರಲಿ ರಸ್ತೆಗಳು ಮಳೆ ನೀರಿನಿಂದ ಜಲಾವೃತ್ತವಾಗಿದ್ದರೆ ಆ ಮಾರ್ಗದಲ್ಲಿ ಸಂಚರಿಸದೇ ಇರುವುದೇ ಒಳ್ಳೆಯದು. ಇಲ್ಲದಿದ್ದರೆ ಅಪಾಯವನ್ನು ಮೈ ಮೇಲೆ ಎಳೆದು ಕೊಳ್ಳಬೇಕಾಗುತ್ತದೆ.


Click it and Unblock the Notifications