ಅಮೃತ್ ಭಾರತ್ ಯೋಜನೆಯಡಿ ತುಮಕೂರು ರೈಲ್ವೆ ಸ್ಟೇಷನ್ ಅಭಿವೃದ್ಧಿ: ವಿಮಾನ ನಿಲ್ದಾಣಕ್ಕೆ ಸವಾಲ್!, ಹೀಗಿದೆ ನೋಡಿ
ದೇಶಾದ್ಯಂತ ಕೇಂದ್ರ ಸರ್ಕಾರ ಮೂಲಸೌಕರ್ಯ ಬೆಳವಣಿಗೆಗೆ ಸಾಕಷ್ಟು ಶ್ರಮಯಿಸುತ್ತಿದೆ. ಅದರ ಭಾಗವಾಗಿ ಹೆದ್ದಾರಿಗಳು, ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿಪಡಿಸುತ್ತಿದೆ. ಹಳೆಯ ರೈಲ್ವೆ ಸ್ಟೇಷನ್ಗಳಿಗೆ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ (Amrit Bharat Stations Scheme) ಹೈಟೆಕ್ ಸ್ಪರ್ಶ ನೀಡಲು ಮುಂದಾಗಿದೆ.
ನೈಋತ್ಯ ರೈಲ್ವೆ (South Western Railway) ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ವೊಂದನ್ನು ಮಾಡಿದೆ. ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಅಭಿವೃದ್ದಿಗೊಳ್ಳಲಿರುವ ತುಮಕೂರು ರೈಲು ನಿಲ್ದಾಣ (Tumakuru Railway Station) ಹೇಗಿರಲಿದೆ ಎಂಬ ಅನಿಮಿಷನ್ ವಿಡಿಯೋವನ್ನು ಹಂಚಿಕೊಂಡಿದೆ. ಈ ಮಟ್ಟದಲ್ಲಿ ಪ್ರಗತಿ ಕಂಡರೆ, ಕೆಲವೇ ವರ್ಷಗಳಲ್ಲಿ ತುಮಕೂರು ರೈಲ್ವೆ ಸ್ಟೇಷನ್ ಯಾವುದೇ ವಿಮಾನ ನಿಲ್ದಾಣಕ್ಕೆ ಕಮ್ಮಿಯಿಲ್ಲದಂತೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಲಿದೆ.

ಕಳೆದ ಆಗಸ್ಟ್ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು, ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಗೆ ಚಾಲನೆ ನೀಡಿದ್ದರು. ದೇಶಾದ್ಯಂತ ಒಟ್ಟು 24,470 ಕೋಟಿ ರೂಪಾಯಿ ವೆಚ್ಚದಲ್ಲಿ 1,275 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗಿರಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಮೊದಲ ಹಂತವಾಗಿ ಈ ಯೋಜನೆಗೆ ಕರ್ನಾಟಕದ 55 ರೈಲು ನಿಲ್ದಾಣಗಳು ಆಯ್ಕೆಯಾಗಿವೆ.
ಅಮೃತ್ ಭಾರತ್ ಯೋಜನೆಯಡಿ ಅಭಿವೃದ್ಧಿಗೊಳ್ಳಲಿರುವ ರೈಲ್ವೆ ನಿಲ್ದಾಣಗಳಲ್ಲಿ ಹೊಸದಾದ ಕಟ್ಟಡಗಳು, ಎಸ್ಕಲೇಟರ್, ಲಿಫ್ಟ್ಗಳನ್ನು ಒಳಗೊಂಡ ಪಾದಚಾರಿ ಮೇಲ್ಸೇತುವೆಗಳು, ವಾಹನ ಪಾರ್ಕಿಂಗ್ ಸ್ಥಳಗಳು, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳು ಹಾಗೂ ಶೌಚಗೃಹಗಳು ನಿರ್ಮಾಣಗೊಳ್ಳಲಿವೆ. ಇದರೊಟ್ಟಿಗೆ ಪ್ರಯಾಣಿಕ ಸ್ನೇಹಿ ಮಾಹಿತಿ ವ್ಯವಸ್ಥೆ, ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ. ಉಚಿತ ವೈಫೈ ಸೇವೆಯೂ ಲಭ್ಯವಾಗಲಿದೆ.

ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಸೋಮವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ್ದರು. ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶವಂತಪುರ ರೈಲು ನಿಲ್ದಾಣವನ್ನು 377 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದರ್ಜೆಯ ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಸುತ್ತಲೂ ವೃತ್ತಾಕಾರ ರೈಲು ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಮೊದಲ ಹಂತವಾಗಿ ಅಧ್ಯಯನಕ್ಕಾಗಿ 7 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದರು. 287 - ಕಿಮೀ ಉದ್ದದ ವೃತ್ತಾಕಾರ (Circular) ರೈಲು ಮಾರ್ಗ ನಿರ್ಮಾಣದಿಂದ ಬೆಂಗಳೂರು ಅಂಚಿನಲ್ಲಿರುವ ಜನರಿಗೆ ದೊಡ್ಡಮಟ್ಟದ ಅನುಕೂಲವಾಗಲಿದೆ.

ಉದ್ದೇಶಿತ ವೃತ್ತಾಕಾರ ರೈಲು ಮಾರ್ಗವು ಬೆಂಗಳೂರು ಸುತ್ತಲಿನ ನಿಡವಂದ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೀಲಲಿಗೆ, ಮಾಲೂರು ಹಾಗೂ ಸೋಲೂರನ್ನು ಸಂಪರ್ಕಿಸುತ್ತದೆ. ಈ ರೈಲು ಮಾರ್ಗ ನಿರ್ಮಾಣಗೊಂಡರೆ, ಇಲ್ಲಿನ ಪ್ರಯಾಣಿಕರು ಬೆಂಗಳೂರಿಗೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಮೆಮೊ/ ಡೆಮೋ ಟ್ರೈನ್ ಓಡಿಸುವ ಮೂಲಕ ದೂರದ ಊರುಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಸಂಪರ್ಕ ಜಾಲಗಳ ಮೇಲೆಯೋ ಒತ್ತಡವನ್ನು ಕಡಿಮೆಗೊಳಿಸಬಹುದು.
ಇನ್ನು, ತುಮಕೂರು ನಗರದಿಂದ ಪ್ರತಿದಿನ ಸಾವಿರಾರು ಜನರು, ರೈಲಿನ ಮೂಲಕವೇ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಜೊತೆಗೆ ಈ ರೈಲು ಮಾರ್ಗ ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಸದ್ಯ ಸಂಪರ್ಕ ಕಲ್ಪಿಸಲಿದ್ದು, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತದೆ. ಅಮೃತ್ ಭಾರತ್ ನಿಲ್ದಾಣಗಳ ಯೋಜನೆಯಡಿ ತುಮಕೂರು ರೈಲು ನಿಲ್ದಾಣ ಅಭಿವೃದ್ಧಿಗೊಂಡರೆ, ಬಹುತೇಕರು ತಮ್ಮ ಪ್ರಯಾಣಕ್ಕಾಗಿ ಸಾರಿಗೆ ವಿಧಾನವಾಗಿ ರೈಲನ್ನು ಆಯ್ಕೆ ಮಾಡಬಹುದು.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications