ಮೊಬೈಲ್ ಲಸಿಕಾ ಕೇಂದ್ರಗಳಾಗಿ ಬದಲಾದ ಎನ್ಇಕೆಆರ್ಟಿಸಿ ಬಸ್ಸುಗಳು
ಕರೋನಾ ವೈರಸ್ ಎರಡನೇ ಅಲೆಯ ಆರ್ಭಟ ದೇಶದಲ್ಲಿ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ ಈ ಮಹಾಮಾರಿ ವೈರಸ್ ಇನ್ನೂ ಪೂರ್ತಿಯಾಗಿ ನಿರ್ನಾಮವಾಗಿಲ್ಲ. ಈ ಕಾರಣಕ್ಕೆ ಜನರು ಜಾಗರೂಕತೆ ವಹಿಸಬೇಕಾಗಿದೆ.

ಕರೋನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳೂ ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈಗ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಎನ್ಇಕೆಆರ್ಟಿಸಿ) ತನ್ನ ಬಸ್ಗಳನ್ನು ಕೋವಿಡ್ 19 ಮೊಬೈಲ್ ಲಸಿಕೆ ಕೇಂದ್ರಗಳಾಗಿ ಪರಿವರ್ತಿಸಿ ದೂರದ ಹಳ್ಳಿಗಳನ್ನು ತಲುಪುತ್ತಿದೆ.

ಈ ಬಗ್ಗೆ ಎನ್ಇಕೆಆರ್ಟಿಸಿ ಅಧ್ಯಕ್ಷ ರಾಜ್ಕುಮಾರ್ ಪಾಟೀಲ್ ತೆಲ್ಕೂರ್ ಮಾಹಿತಿ ನೀಡಿದ್ದಾರೆ. ಈ ಬಸ್ಸುಗಳು ಕಾರ್ಯಾಚರಣೆ ಆರಂಭಿಸಿದ್ದು 24 ಗಂಟೆಗಳ ಕಾಲ ಜನರಿಗೆ ಸೇವೆ ನೀಡುತ್ತವೆ ಎಂದು ಅವರು ಹೇಳಿದ್ದಾರೆ.

ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಪುರಸಭೆ ಈ ಬಸ್ಸುಗಳನ್ನು ಲಸಿಕೆ ಕೇಂದ್ರವನ್ನಾಗಿ ಪರಿವರ್ತಿಸಿವೆ. ಕೆಲವು ಗ್ರಾಮಗಳಲ್ಲಿ ಯಾವುದೇ ಆಸ್ಪತ್ರೆಗಳಾಗಲಿ ಅಥವಾ ಲಸಿಕೆ ಕೇಂದ್ರಗಳಾಗಲಿ ಇಲ್ಲ.

ಈ ಹಿನ್ನೆಲೆಯಲ್ಲಿ ಈ ಮೊಬೈಲ್ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಎನ್ಕೆಆರ್ಟಿಸಿ ಕೇವಲ 24 ಗಂಟೆಗಳಲ್ಲಿ ಎರಡು ಬಸ್ಗಳನ್ನು ಲಸಿಕೆ ಕೇಂದ್ರಗಳಾಗಿ ಪರಿವರ್ತಿಸಿದೆ. ಈ ಬಸ್ಸುಗಳು ಯಾವುದೇ ಆಸ್ಪತ್ರೆಗಿಂತ ಕಡಿಮೆಯಿಲ್ಲ.

ನೋಂದಣಿ ಮಾಡಲು, ಲಸಿಕೆ ನೀಡಲು ಹಾಗೂ ವಿಶ್ರಾಂತಿ ಪಡೆಯಲು ಈ ಬಸ್ಸಿನಲ್ಲಿ ಪ್ರತ್ಯೇಕ ಸ್ಥಳ ಕಲ್ಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ರಾಜ್ಕುಮಾರ್ ಪಾಟೀಲ್ ತೆಲ್ಕೂರ್, ನಾವು ಈಗ ಎರಡು ಬಸ್ಗಳನ್ನು ಪರಿವರ್ತಿಸಿದ್ದೇವೆ.

ಸರ್ಕಾರವು ಹೇಳಿದರೆ ಇನ್ನೂ ಹಲವು ಬಸ್ಸುಗಳನ್ನು ಪರಿವರ್ತಿಸಲು ಸಿದ್ಧರಿದ್ದೇವೆ. ನಮಗೆ ಕೋವಿಡ್ 19 ಮುಕ್ತ ಭಾರತ ಬೇಕು. ಇದಕ್ಕಾಗಿ ಲಸಿಕೆ ನೀಡುವುದು ಬಹಳ ಮುಖ್ಯ ಎಂದು ಹೇಳಿದರು.

ನಮ್ಮ ನಿಗಮದಲ್ಲಿ ಸುಮಾರು 88%ನಷ್ಟು ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ. ಉಳಿದ ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಲಸಿಕೆ ಪಡೆಯುವಂತೆ ಒತ್ತಾಯಿಸಿದ್ದೇವೆ ಎಂದು ತೆಲ್ಕೂರ್ ಹೇಳಿದರು.

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 5,983 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿದೆ. ಇದೇ ವೇಳೆ ಕಳೆದ 24 ಗಂಟೆಗಳಲ್ಲಿ ಕರೋನಾ ವೈರಸ್ ಸೋಂಕಿನಿಂದ 138 ಜನರು ಸಾವನ್ನಪ್ಪಿದ್ದಾರೆ.

ಒಂದೇ ದಿನ 10,685 ಜನರು ಗುಣಮುಖರಾಗಿದ್ದಾರೆ. ಈಗ ಕರ್ನಾಟಕದಲ್ಲಿ ಒಟ್ಟು 1,46,276 ಸಕ್ರಿಯ ಪ್ರಕರಣಗಳಿವೆ. ಕರ್ನಾಟಕದಲ್ಲಿ ಪಾಸಿಟಿವಿಟಿ ದರವು 3.77%ರಷ್ಟಿದೆ ಎಂದು ಹೇಳಲಾಗಿದೆ.


Click it and Unblock the Notifications