ಅವಶ್ಯಕ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಿವೆ ಉಬರ್ - ಫ್ಲಿಪ್ಕಾರ್ಟ್
ಕೋವಿಡ್ -19 ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕಾರಣಕ್ಕೆ, ಇದನ್ನು ತಡೆಯುವ ಉದ್ದೇಶಕ್ಕೆ 21 ದಿನಗಳ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ಸಂಚಾರ ಸೇವೆಗಳನ್ನು ರದ್ದುಪಡಿಸಲಾಗಿದೆ. ಅಗತ್ಯ ಕೆಲಸಗಳಿಗಾಗಿ ಮಾತ್ರ ಹೊರಬರುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಕೈಲಾಗದ ವೃದ್ದರು, ಮನೆಯಿಂದ ಹೊರಬರಲು ಸಾಧ್ಯವಾಗದೇ ಅವಶ್ಯಕ ವಸ್ತುಗಳ ದಾಸ್ತಾನು ಇಲ್ಲದೇ ಮುಂದೇನು ಮಾಡಬೇಕೆಂದು ಚಿಂತಿಸುತ್ತಿರುವವರಿಗೆ ನೆರವಾಗಲು ಕ್ಯಾಬ್ ಸೇವಾ ಕಂಪನಿ ಉಬರ್ ಹಾಗೂ ಆನ್ ಲೈನ್ ಶಾಪಿಂಗ್ ಕಂಪನಿಯಾದ ಫ್ಲಿಪ್ಕಾರ್ಟ್ ಮುಂದಾಗಿವೆ. ಈ ಕುರಿತು ಈ ಎರಡೂ ಕಂಪನಿಗಳು ಸಹಭಾಗಿತ್ವವನ್ನು ಮಾಡಿಕೊಂಡಿವೆ.

ಈ ಕಂಪನಿಗಳು ಬೆಂಗಳೂರು, ದೆಹಲಿ ಹಾಗೂ ಮುಂಬೈ ನಗರಗಳ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲಿವೆ. ಇದರಂತೆ ಉಬರ್ ಕಂಪನಿಯು ಜನರ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲಿದೆ. ಇದಕ್ಕಾಗಿ ಗ್ರಾಹಕರಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ.

ಲಾಕ್ ಡೌನ್ ಜಾರಿಗೊಳಿಸಿದ ನಂತರ ವಿತರಣಾ ಸಿಬ್ಬಂದಿಗಳ ಕೊರತೆಯಿಂದಾಗಿ, ದಿನಸಿ, ಹಣ್ಣು, ತರಕಾರಿ, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಜನರಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ವೇಳೆಯಲ್ಲಿ ಉಬರ್ ಹಾಗೂ ಫ್ಲಿಪ್ಕಾರ್ಟ್ ಕಂಪನಿಗಳು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೇ ಪೂರೈಸಲಿವೆ.

ಕೋವಿಡ್ -19ರ ವಿರುದ್ಧ ಹೋರಾಡಲು ಸರ್ಕಾರವು ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಉಬರ್ ಇಂಡಿಯಾ ಹೇಳಿದೆ. ಸುರಕ್ಷತೆಯನ್ನು ಕಾಪಾಡಿಕೊಳ್ಳಲು ನಮ್ಮ ಎಲ್ಲ ಚಾಲಕರು ಹಾಗೂ ವಿತರಣಾ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿದ್ದೇವೆ ಎಂದು ಕಂಪನಿ ಹೇಳಿದೆ.

ಇದರ ಜೊತೆಗೆ ಎಲ್ಲಾ ಸಿಬ್ಬಂದಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ಒದಗಿಸಿ ಅವುಗಳನ್ನು ಬಳಸಲು ತಿಳಿಸಲಾಗಿದೆ. ಲಾಕ್ಡೌನ್ನಂತಹ ಸಂಕಷ್ಟದ ಸಮಯದಲ್ಲೂ ಕಂಪನಿಯು ತನ್ನ ಗ್ರಾಹಕರಿಗೆ ಸಹಾಯ ಮಾಡಲು ಬದ್ಧವಾಗಿದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.

ಕಂಪನಿಯು ತನ್ನ ಎಲ್ಲ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಸಂಗ್ರಹಿಸುತ್ತಿದೆ. ಎಲ್ಲಾ ಅಗತ್ಯ ವಸ್ತುಗಳ ವಿತರಣೆಯನ್ನು ಕಂಪನಿಯು ಆರಂಭಿಸುತ್ತಿದ್ದು, ಇದಕ್ಕಾಗಿ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲವೆಂದು ಹೇಳಿದೆ.


Click it and Unblock the Notifications