ಯಾವುದೇ ಕಾರಣಕ್ಕೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವುದಿಲ್ಲವೆಂದ ಕೇಂದ್ರ ಸಚಿವೆ
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಬಗ್ಗೆ ಯಾವುದೇ ರೀತಿಯಲ್ಲಿ ಚಿಂತನೆ ನಡೆಸಿಲ್ಲವೆಂದು ತಿಳಿಸಿದ್ದಾರೆ.

ಈ ಹಿಂದಿನ ಸಬ್ಸಿಡಿ ಇಂಧನ ಪಾವತಿಗೆ ಮಿತಿಗಳಿವೆ ಎಂದು ಅವರು ಹೇಳಿದ್ದಾರೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಜೊತೆಗೆ ಅಡುಗೆ ಅನಿಲ ಹಾಗೂ ಸೀಮೆಎಣ್ಣೆಯನ್ನು ಸಹ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಇದನ್ನು ಸರಿದೂಗಿಸುವ ಸಲುವಾಗಿ ಕೇಂದ್ರ ಸರ್ಕಾರವು ಅಬಕಾರಿ ಸುಂಕದ ಪ್ರಮಾಣವನ್ನು ಇಳಿಸುತ್ತಿಲ್ಲವೆಂದು ಅವರು ತಿಳಿಸಿದ್ದಾರೆ.

ಕೃತಕವಾಗಿ ನಿಗ್ರಹಿಸಿದ ರಿಟೇಲ್ ಮಾರಾಟ ಬೆಲೆ ಹಾಗೂ ವೆಚ್ಚದ ನಡುವೆ ಸಮಾನತೆಯನ್ನು ತರಲು ಸಬ್ಸಿಡಿ ಪಾವತಿಸುವ ಬದಲು, ಅಂದಿನ ಸರ್ಕಾರವು ರಾಜ್ಯ ಇಂಧನ ರಿಟೇಲ್ ವ್ಯಾಪಾರಿಗಳಿಗೆ ಒಟ್ಟು ರೂ. 1.34 ಲಕ್ಷ ಕೋಟಿ ತೈಲ ಬಾಂಡ್ಗಳನ್ನು ನೀಡಿತು. ಆ ಸಮಯದಲ್ಲಿ ಅಂತರ್ ರಾಷ್ಟ್ರೀಯ ದರಗಳಿಂದಾಗಿ, ಪೆಟ್ರೋಲ್ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ ಗಳನ್ನು ಮೀರಿತ್ತು.

ಈ ತೈಲ ಬಾಂಡ್ಗಳು ಹಾಗೂ ಅದರ ಮೇಲಿನ ಬಡ್ಡಿಯನ್ನು ಈಗ ಪಾವತಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ರವರು, ಭಾರತ ಸರ್ಕಾರವು ತೈಲ ಬಾಂಡ್ಗಳ ಸೇವೆಗೆ ಹೊರೆಯಾಗದಿದ್ದರೆ, ನಾನು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತಿದ್ದೆ. ಹಿಂದಿನ ಸರ್ಕಾರವು ತೈಲ ಬಾಂಡ್ಗಳನ್ನು ನೀಡುವ ಮೂಲಕ ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಲು ಏನನ್ನಾದರೂ ಮಾಡಲು ಬಯಸಿದರೂ, ತೈಲ ಬಾಂಡ್ಗಾಗಿಯೇ ಪಾವತಿಸ ಬೇಕಾಗಿದೆ ಎಂದು ಅವರು ಹೇಳಿದರು. ಕಳೆದ ವರ್ಷ ಆದಾಯ ಸಂಗ್ರಹವನ್ನು ಹೆಚ್ಚಿಸಲು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಕಳೆದ ಏಳು ವರ್ಷಗಳಲ್ಲಿ ತೈಲ ಬಾಂಡ್ಗಳ ಮೇಲಿನ ಬಡ್ಡಿ ದರವಾಗಿ ಒಟ್ಟು ರೂ. 70,195.72 ಕೋಟಿ ಪಾವತಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ರೂ 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್ಗಳಲ್ಲಿ ಕೇವಲ ರೂ. 3,500 ಕೋಟಿಯಷ್ಟು ಮಾತ್ರ ಪಾವತಿಸಲಾಗಿದೆ. ಉಳಿದ ರೂ. 1.3 ಲಕ್ಷ ಕೋಟಿಗಳನ್ನು ಪ್ರಸಕ್ತ ಹಣಕಾಸು ವರ್ಷ ಹಾಗೂ 2025 - 26 ರ ನಡುವೆ ಪಾವತಿಸಬೇಕಾಗಿದೆ ಎಂದು ಅವರು ಹೇಳಿದರು. ಮಾಹಿತಿಯ ಪ್ರಕಾರ ಸರ್ಕಾರವು ಈ ಹಣಕಾಸು ವರ್ಷದಲ್ಲಿ ಅಂದರೆ 2021-22 ನೇ ಸಾಲಿನಲ್ಲಿ ರೂ. 10,000 ಕೋಟಿ ರೂಪಾಯಿಗಳನ್ನು ಪಾವತಿಸಬೇಕು.

ಇದರ ನಂತರ 2023-24 ರ ಹಣಕಾಸು ವರ್ಷದಲ್ಲಿ ರೂ. 31,150 ಕೋಟಿ, ನಂತರ ಅದರ ಮುಂದಿನ ಹಣಕಾಸು ವರ್ಷದಲ್ಲಿ ರೂ. 52,860.17 ಕೋಟಿ ಹಾಗೂ 2025 - 26 ರ ಹಣಕಾಸು ವರ್ಷದಲ್ಲಿ ರೂ. 36,913 ಕೋಟಿ ಪಾವತಿಸಬೇಕಾಗಿದೆ. ಗಮನಾರ್ಹ ಮೊತ್ತವು ಬಡ್ಡಿ ಪಾವತಿ ಹಾಗೂ ಅಸಲು ಮರು ಪಾವತಿಗೆ ಹೋಗುತ್ತಿದೆ. ಇದರಿಂದ ನಮ್ಮ ಮೇಲೆ ಅನಗತ್ಯ ಹೊರೆ ಬೀಳುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

2014 - 15 ನೇ ಸಾಲಿನ ಆರಂಭಿಕ ಬ್ಯಾಲೆನ್ಸ್ ಸುಮಾರು ರೂ. 1.34 ಲಕ್ಷ ಕೋಟಿ ಹಾಗೂ ಬಡ್ಡಿ ಮರು ಪಾವತಿ ರೂ. 10,255 ಕೋಟಿಗಳಾಗಿತ್ತು ಎಂದು ಅವರು ಹೇಳಿದರು. 2015 - 16 ನೇ ಸಾಲಿನಿಂದ ಪ್ರತಿ ವರ್ಷ ಬಡ್ಡಿ ಹೊರೆ ರೂ. 9,989 ಕೋಟಿಗಳಾಗಿದೆ. ಅಬಕಾರಿ ಸುಂಕ ಹೆಚ್ಚಳದ ಸಂಗ್ರಹವು ತೈಲ ಕಂಪನಿಗಳಿಗೆ ಪಾವತಿಸಿದ ಮೊತ್ತಕ್ಕಿಂತ ಹೆಚ್ಚು ಎಂದು ಅವರು ಮಾಹಿತಿ ನೀಡಿದರು.

ಭಾರತವು ಪೆಟ್ರೋಲ್, ಡೀಸೆಲ್ ಆಮದು ಮಾಡಿ ಕೊಳ್ಳಲು ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದು ಭಾರತದ ಆರ್ಥಿಕತೆ ಮೇಲೆಯೂ ಗಂಭೀರ ಪರಿಣಾಮವನ್ನುಂಟು ಮಾಡುತ್ತಿದೆ. ಈ ಕಾರಣಕ್ಕೆ ಪೆಟ್ರೋಲ್, ಡೀಸೆಲ್ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನವನ್ನು ನೀಡುತ್ತಿದೆ. ಕೇಂದ್ರ ಸರ್ಕಾರವು ಮಾತ್ರವಲ್ಲದೇ ವಿವಿಧ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿವೆ. ಕೇಂದ್ರ ಸರ್ಕಾರವು ತನ್ನ ಫೇಮ್ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಬ್ಸಿಡಿ ನೀಡುತ್ತದೆ.

ವಿವಿಧ ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳಿಗಾಗಿಯೇ ಪ್ರತ್ಯೇಕ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೆ ತಂದಿವೆ. ಎಲೆಕ್ಟ್ರಿಕ್ ವಾಹನಗಳ ಅನುಷ್ಟಾನದಲ್ಲಿ ದೆಹಲಿ ರಾಜ್ಯ ಸರ್ಕಾರವು ಉಳಿದ ರಾಜ್ಯಗಳಿಗಿಂತ ಒಂದು ಹೆಜ್ಜೆ ಮುಂದಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಈ ವಾಹನಗಳು ಪೂರ್ತಿಯಾಗಿ ಚಾರ್ಜ್ ಆದರೂ ಹೆಚ್ಚು ದೂರ ಚಲಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ ಈಗ ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರಮುಖ ವಾಹನ ತಯಾರಕ ಕಂಪನಿಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ.


Click it and Unblock the Notifications