ಲಾಕ್ ಡೌನ್ ಪಾಲಿಸದವರ ಮೇಲೆ ಬಿತ್ತು ದಂಡ, ದಾಖಲಾಯ್ತು ಎಫ್ಐಆರ್
ಕರೋನಾದಿಂದಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ತತ್ತರಿಸಿವೆ. ಆದರೆ ಬಹುತೇಕ ಭಾರತೀಯರು ಈ ವೈರಸ್ನ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಇದರ ಪರಿಣಾಮವಾಗಿ ದೇಶಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಆದರೂ ಬಹಳಷ್ಟು ಜನರು ತಮ್ಮ ವಾಹನಗಳಲ್ಲಿ ಸುತ್ತಾಡುತ್ತಿದ್ದಾರೆ.

ಇಂತಹವರನ್ನು ಶಿಕ್ಷಿಸಲು ಪೊಲೀಸರು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿಯೊಂದು ರಾಜ್ಯಗಳು ವಿನಾ ಕಾರಣ ಹೊರಗೆ ಸುತ್ತಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ. ಈಗ ದೇಶಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮೊದಲು ಮಾರ್ಚ್ 31ರವರೆಗೆ ಜಾರಿಯಲ್ಲಿದ್ದ ಲಾಕ್ ಡೌನ್ ಅನ್ನು ಈಗ ಏಪ್ರಿಲ್ 14ರವರೆಗೆ ವಿಸ್ತರಿಸಲಾಗಿದೆ.

ಈ ಕಾರಣಕ್ಕೆ ಜನರು ಏಪ್ರಿಲ್ 15ರವರೆಗೆ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ದೇಶದ ಜನರನ್ನು ಮಾರಣಾಂತಿಕ ವೈರಸ್ ನಿಂದ ರಕ್ಷಿಸುವ ಸಲುವಾಗಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಆದರೆ, ಕರೋನಾದ ಗಂಭೀರತೆಯನ್ನು ಅರಿಯದ ಜನರು ಹೊರಗೆ ಅಲೆದಾಡುತ್ತಿದ್ದಾರೆ.

ಚೀನಾ ಹಾಗೂ ಇಟಲಿಯಂತಹ ಪರಿಸ್ಥಿತಿ ಭಾರತಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಸಹ ಜನರು ಇದಕ್ಕೆಲ್ಲಾ ಕ್ಯಾರೆ ಎನ್ನುತ್ತಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ನಿಯಮಗಳನ್ನು ಪಾಲಿಸದಿದ್ದರೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗುವುದು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಪ್ರತಿಯೊಂದು ರಾಜ್ಯವು ಇದರಿಂದ ಹೊರತಾಗಿಲ್ಲ. ಕೇಂದ್ರ ಸರ್ಕಾರದ 21 ದಿನಗಳ ಲಾಕ್ಡೌನ್ ಅನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕರ್ಫ್ಯೂ ವಾತಾವರಣದಲ್ಲಿ ಕಣ್ಣಿಗೆ ಬೀಳುವ ವಾಹನ ಸವಾರರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಮತ್ತೆ ಕೆಲವರಿಗೆ ಲಾಠಿ ರುಚಿ ತೋರಿಸಲಾಗುತ್ತಿದೆ. ಇನ್ನೂ ಕೆಲವರಿಗೆ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ, ಲಾಕ್ ಡೌನ್ ಧಿಕ್ಕರಿಸಿ ಸುತ್ತಾಡುತ್ತಿದ್ದ ವಾಹನ ಸವಾರರಿಗೆ ರೂ.2 ಸಾವಿರ ದಂಡ ವಿಧಿಸಿರುವ ಬಗ್ಗೆ ವರದಿಗಳಾಗಿವೆ. ಈ ದಂಡವನ್ನು ಜನತಾ ಕರ್ಫ್ಯೂ ಏರಲಾಗಿದ್ದ ಮಾರ್ಚ್ 22ರಂದು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ಮನೆಯಿಂದ ಹೊರಗೆ ಬರದಂತೆ ಹಾಗೂ ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆಯುವ ಮೂಲಕ ಕರೋನಾ ವೈರಸ್ ತಡೆಯಲು ಶ್ರಮಿಸುವವರಿಗೆ ಅಭಿನಂದನೆ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿರವರು ಮನವಿ ಮಾಡಿದ್ದರು.

ಇದನ್ನು ತಪ್ಪಾಗಿ ಅರ್ಥಮಾಡಿಕೊಂಡ ಜನರು ಮನೆಯಿಂದ ಹೊರಬಂದು ಗುಂಪುಗೂಡಿ, ಚಪ್ಪಾಳೆ ತಟ್ಟಿ ಕಿರುಚಾಟ ಕೂಗಾಟ ನಡೆಸಿದ್ದರು. ಇನ್ನೂ ಕೆಲವರು ವಾಹನ ಚಾಲನೆ ಮಾಡುತ್ತಿದ್ದರು. ಇದು ಸರ್ಕಾರಿ ಅಧಿಕಾರಿಗಳಲ್ಲಿ ಹಾಗೂ ಪೊಲೀಸರಲ್ಲಿ ಗೊಂದಲವನ್ನು ಸೃಷ್ಟಿಸಿತ್ತು.

ವಿಶ್ವದ ಬಹುತೇಕ ರಾಷ್ಟ್ರಗಳು ಕರೋನಾದ ಕಪಿಮುಷ್ಟಿಯಿಂದ ಹೊರಬರಲು ಹೆಣಗಾಡುತ್ತಿವೆ. ಆದರೆ ಭಾರತೀಯರು ಈ ವೈರಸ್ ಅನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಈ ಕಾರಣಕ್ಕೆ ನೋಯ್ಡಾದಲ್ಲಿ ಕಾನೂನು ಉಲ್ಲಂಘಿಸುವ ಜನರಿಗೆ ದಂಡ ವಿಧಿಸಿ, 100ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈಗಲಾದರೂ ಜನರು ವೈರಸ್ ಹರಡದಂತೆ ತಡೆಯಲು ಮನೆಯಲ್ಲಿಯೇ ಇರುವುದು ಸೂಕ್ತ.


Click it and Unblock the Notifications